Director S Shankar: ಖ್ಯಾತ ನಿರ್ದೇಶಕ ಎಸ್. ಶಂಕರ್ ಮೇಲೆ ಇಡಿ ರೇಡ್! ಏನಿದು ಪ್ರಕರಣ?
ಕೃತಿಚೌರ್ಯ ಆರೋಪ ಎದುರಿಸುತ್ತಿರುವ ತಮಿಳಿನ ಖ್ಯಾತ ನಿರ್ದೇಶಕ ಎಸ್.ಶಂಕರ್ ಮೇಲೆ ನಿನ್ನೆ ಇಡಿ ರೇಡ್ ನಡೆದಿದ್ದು, 10 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್.ಶಂಕರ್, ಇದೊಂದು ನಿರಾಧಾರ ಆರೋಪ ಎಂದಿದ್ದಾರೆ.

Director S Shankar

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯ ರೈ ಅಭಿನಯದ 'ಎಂಥಿರನ್' ನಿರ್ದೇಶಕ ಎಸ್.ಶಂಕರ್ (Director S Shankar) ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಇದೋಗ ಇದೇ ಪ್ರಕರಣದಲ್ಲಿಅವರ ಮೇಲೆ ಇಡಿ ರೇಡ್ ಆಗಿದ್ದು,10 ಕೋಟಿ ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ನಿರ್ದೇಶಕನ ಹೆಸರಿನಲ್ಲಿ ನೋಂದಣಿಯಾಗಿರುವ ಮೂರು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡ ಇಡಿ ನಡೆ ಬಗ್ಗೆ ಶಂಕರ್ ಮೌನ ಮುರಿದಿದ್ದಾರೆ. ಯಾವುದೇ ಕೃತಿಚೌರ್ಯ ನಡೆದಿಲ್ಲ. ಇಡಿ(ED)ಯ ಈ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಎಂಥಿರನ್ ಚಿತ್ರಕ್ಕೆ ಸಂಬಂಧಿಸಿದಂತೆ ಕಾಪಿರೈಟ್ ಆರೋಪದಡಿ ತನ್ನ ಮೂರು ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವ ಇಡಿ ಇಲ್ಲಿಯವರೆಗೆ ಯಾವುದೇ ಸಂವಹನ ನಡೆಸಿಲ್ಲ. ಆದರೂ ಈ ವಿಚಾರವನ್ನು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ಈ ಕ್ರಮವು ಕಾನೂನು ವಿಚಾರವನ್ನು ತಪ್ಪಾಗಿ ಅರ್ಥೈಸುವುದು ಮಾತ್ರವಲ್ಲದೆ ಕಾನೂನು ಪ್ರಕ್ರಿಯೆಯ ದುರ್ಬಳಕೆಯನ್ನು ಪ್ರತಿನಿಧಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಈ ಆರೋಪಕ್ಕೆ ಸಂಬಂಧಿಸಿದ್ದಂತೆ ಈಗಾಗಲೇ ಉಚ್ಚ ನ್ಯಾಯಾಲಯವು ಸಿವಿಲ್ ಮೊಕದ್ದಮೆ ಸಂಖ್ಯೆ 914/2010 ರಲ್ಲಿ ಕೂಲಂಕುಷವಾಗಿ ತೀರ್ಪು ನೀಡಿದೆ. ನ್ಯಾಯಾಲಯವು ಈ ಬಗ್ಗೆ ಎರಡೂ ಕಡೆಯ ಸಾಕ್ಷ್ಯವನ್ನು ಪರಿಶೀಲಿಸಿ ಅರ್ಜಿಯನ್ನು ವಜಾಗೊಳಿಸಿದೆ. ಇದೀಗ ನ್ಯಾಯಾಲಯ ಆದೇಶವನ್ನು ಮೀರಿ ಇಡಿ ಇಲಾಖೆಯು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ಸಿವಿಲ್ ಕೋರ್ಟ್ನ ತೀರ್ಪಿನ ಹೊರತಾಗಿಯೂ ED ಯ ಈ ಕ್ರಮದಿಂದ ನಾನು ತೀವ್ರ ಅಸಮಾಧಾನಗೊಂಡಿದ್ದೇನೆ. ಇದು ಆಧಾರವಿಲ್ಲದ ಆರೋಪ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿ: Viral News: ಕದ್ದ ಹಣದೊಂದಿಗೆ ಪ್ರೇಯಸಿಯರನ್ನು ಕುಂಭಮೇಳಕ್ಕೆ ಕರೆದೊಯ್ದ ಕಳ್ಳರು! ಕೊನೆಗೆ ಆಗಿದ್ದೇನು?
ಏನಿದು ಪ್ರಕರಣ?
ಮೇ 19, 2011 ರಂದು ಚೆನ್ನೈನ ಎಗ್ಮೋರ್ ನ್ಯಾಯಾಲಯದಲ್ಲಿ ಶಂಕರ್ ವಿರುದ್ಧ ಜಿಗುಬಾ ಎಂಬ ಶೀರ್ಷಿಕೆಯ ಕಥೆಯ ಲೇಖಕ ಆರೂರ್ ತಮಿಳುನಾಡನ್ ಅವರು ಸಲ್ಲಿಸಿದ ದೂರಿನಿಂದ ಹಣ ವರ್ಗಾವಣೆ ಪ್ರಕರಣ ಹೊರಗೆ ಬಂದಿತ್ತು. ಶಂಕರ್ ನಿರ್ದೇಶಿಸಿದ ತಮಿಳು ಚಲನಚಿತ್ರ ಎಂಥಿರನ್ (ರೋಬೋಟ್) ಕಥಾಹಂದರವನ್ನು ಜಿಗುಬಾದಿಂದ ನಕಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. 2010ರ ಬ್ಲಾಸ್ಟರ್ ಎಂಥಿರನ್ ಆ ಸಂದರ್ಭದಲ್ಲಿ ವಿಶ್ವದಾದ್ಯಂತ ರೂ.290 ಕೋಟಿ ಗಳಿಸಿತ್ತು. ಕಥೆ, ಚಿತ್ರಕಥೆ, ಸಂಭಾಷಣೆ,ನಿರ್ದೇಶನಕ್ಕಾಗಿ ಶಂಕರ್ ರೂ. 11.5 ಕೋಟಿ ಸಂಭಾವನೆ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಅವರು ಹಕ್ಕುಸ್ವಾಮ್ಯ ಉಲ್ಲಂಘಿಸಿರುವುದಕ್ಕೆ ದಾಖಲೆಗಳು ಸಿಕ್ಕಿವೆ ಎಂದು ಇಡಿ ತಿಳಿಸಿದೆ.