Vamana Movie: ಧನ್ವೀರ್ ಅಭಿನಯದ ʼವಾಮನʼ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
Vamana Movie: ಶಂಕರ್ ರಾಮನ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ʼವಾಮನʼ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಡಿಯೋ ಮೂಲಕ ʼವಾಮನʼ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಇಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಅವರು ನಿರ್ಮಿಸಿರುವ, ಶಂಕರ್ ರಾಮನ್ ನಿರ್ದೇಶನದ ಹಾಗೂ ಧನ್ವೀರ್ ನಾಯಕರಾಗಿ ನಟಿಸಿರುವ ʼವಾಮನʼ ಚಿತ್ರದ (Vamana Movie) ಟ್ರೇಲರ್ ಬಿಡುಗಡೆ ಸಮಾರಂಭ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ವಿಡಿಯೋ ಮೂಲಕ ʼವಾಮನʼ ಚಿತ್ರದ ಟ್ರೈಲರ್ (Vamana Movie Trailer) ಬಿಡುಗಡೆ ಮಾಡಿದರು. ಪ್ರಸನ್ನ ಚಿತ್ರಮಂದಿರದಲ್ಲಿ ಸಹಸ್ರಾರು ದರ್ಶನ್ ಅವರ ಅಭಿಮಾನಿಗಳು ಈ ಅದ್ದೂರಿ ಸಮಾರಂಭಕ್ಕೆ ಸಾಕ್ಷಿಯಾದರು.
ಧನ್ವೀರ್ ಅಭಿನಯದ ನಾಲ್ಕನೇ ಚಿತ್ರ ʼವಾಮನʼ. ಧನ್ವೀರ್ ಅವರ ಹಿಂದಿನ ಮೂರು ಚಿತ್ರಗಳೂ ವಿಭಿನ್ನವಾಗಿತ್ತು. ಅದರಲ್ಲೂ ʼಕೈವಾʼ ನನ್ನಿಷ್ಟದ ಚಿತ್ರ. ʼವಾಮನʼ ಚಿತ್ರ ಕೂಡ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಈ ಚಿತ್ರದ ʼಮುದ್ದು ರಾಕ್ಷಸಿʼ ಹಾಡು ನನಗೆ ಬಹಳ ಇಷ್ಟ. ಇಂದು ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರ ಏಪ್ರಿಲ್ 10ರಂದು ತೆರೆಗೆ ಬರುತ್ತಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ. ನಾನು ಕೂಡ ʼವಾಮನʼ ಚಿತ್ರವನ್ನು ಧನ್ವೀರ್ ಜತೆಗೆ ನೋಡುತ್ತೇನೆ ಎಂದು ದರ್ಶನ್ ತಿಳಿಸಿದರು.
ನಾನು ಮೊದಲಿಗೆ ಟ್ರೈಲರ್ ಬಿಡುಗಡೆ ಮಾಡಿಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ನಮ್ಮ ಚಿತ್ರದ ತಾಯಿ - ಮಗನ ಬಾಂಧವ್ಯ ಸಾರುವ ಹಾಡನ್ನು ಅನಾವರಣ ಮಾಡಿದ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ದರ್ಶನ್ ಅವರು ಇಂದಿನ ಸಮಾರಂಭಕ್ಕೆ ಬರಬೇಕಿತ್ತು. ಆದರೆ ಅವರು ದೂರದ ಊರಿನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನನ್ನಿಂದ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶ ಅವರದು. ಹಾಗಾಗಿ ನನ್ನನ್ನು ಅವರಿರುವ ಕಡೆಗೆ ಕರೆಸಿಕೊಂಡು ಟ್ರೇಲರ್ ವೀಕ್ಷಿಸಿ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳಾಡಿದ್ದಾರೆ. ಚಿತ್ರಮಂದಿರದಲ್ಲೇ ʼವಾಮನʼ ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ. ಇಷ್ಟು ಜನರು ನಮ್ಮ ಚಿತ್ರದ ಸಮಾರಂಭಕ್ಕೆ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ನಮ್ಮ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಹಿರಿಯ ಕಲಾವಿದರ ಜತೆಗೆ ಅಭಿನಯಿಸಿದ್ದು ಖುಷಿಯಾಗಿದೆ. ತಂತ್ರಜ್ಞರ ಸಹಕಾರ ಕೂಡ ಅಪಾರವಾಗಿದೆ ಎಂದು ನಾಯಕ ಧನ್ವೀರ್ ತಿಳಿಸಿದರು.
ನಮ್ಮ ಚಿತ್ರದ ಟ್ರೈಲರ್ ಹಾಗೂ ಹಾಡನ್ನು ಬಿಡುಗಡೆ ಮಾಡಿಕೊಟ್ಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರಿಗೆ ವಿಶೇಷ ಧನ್ಯವಾದ. ʼವಾಮನʼ ನಮ್ಮ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ. ನಿರ್ದೇಶಕರು ಒಂದೊಳ್ಳೆ ಚಿತ್ರ ಮಾಡಿಕೊಟ್ಟಿದ್ದಾರೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರು ನೋಡಿ.ಪ್ರೋತ್ಸಾಹ ನೀಡಿ ಎಂದರು ನಿರ್ಮಾಪಕ ಚೇತನ್ ಗೌಡ. ಸಹ ನಿರ್ಮಾಪಕಿ ರೂಪ ಚೇತನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ʼವಾಮನʼ ತಾಯಿ - ಮಗನ ಬಾಂಧವ್ಯದ ಕಥೆ. ಇದರೆ ಜತೆಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಇಡೀ ತಂಡದ ಸಹಕಾರವೇ ಕಾರಣ ಎಂದು ನಿರ್ದೇಶಕ ಶಂಕರ್ ರಾಮನ್ ತಿಳಿಸಿದರು. ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ನಮ್ಮ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಇಷ್ಟು ಜನ ಬಂದು ಹಾರೈಸಿದ್ದಾರೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಾಯಕಿ ರೀಷ್ಮಾ ನಾಣಯ್ಯ ಹೇಳಿದರು.
ಈ ಸುದ್ದಿಯನ್ನೂ ಓದಿ | Ugadi Jewel Fashion: ಯುಗಾದಿ ಹಬ್ಬದ ಸೀಸನ್ನಲ್ಲಿ ಟ್ರೆಡಿಷನಲ್ ಡಿಸೈನ್ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ
ಚಿತ್ರದಲ್ಲಿ ನಟಿಸಿರುವ ತಾರಾ ಅನುರಾಧ, ಬಹುಭಾಷಾ ನಟ ಸಂಪತ್ ರಾಜ್, ಚಿತ್ಕಲಾ ಬಿರಾದಾರ್, ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕಾಕ್ರೋಜ್ ಸುಧೀ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಸಿ.ಆರ್.ಬಾಬಿ ಹಾಗೂ ಗೀತರಚನೆಕಾರರಾದ ಡಾ.ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಗೂ ನೃತ್ಯ ನಿರ್ದೇಶಕ ಭೂಷಣ್ ಮುಂತಾದವರು ʼವಾಮನʼ ಚಿತ್ರದ ಕುರಿತು ಮಾತನಾಡಿದರು.