ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣ; ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಜಾಮೀನು ಮಂಜೂರು
ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಿಯಾಂಕ್ ಖರ್ಗೆ ಹಾಗೂ ಮೊಹಮ್ಮದ್ ನಲಪಾಡ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ತಲಾ 10 ಸಾವಿರ ರೂ. ವೈಯಕ್ತಿಕ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚಿಸಿದೆ.
-
ಬೆಂಗಳೂರು: ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಮೊಹಮ್ಮದ್ ನಲಪಾಡ್ಗೆ ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ 42ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ತಲಾ 10 ಸಾವಿರ ರೂ. ವೈಯಕ್ತಿಕ ಶ್ಯೂರಿಟಿ ನೀಡುವಂತೆ ಕೋರ್ಟ್ ಸೂಚಿಸಿದೆ.
ತೇಜಸ್ ಗೌಡ ಎಂಬವರು ಕೋರ್ಟ್ಗೆ ಖಾಸಗಿ ದೂರು ನೀಡಿದ್ದರು. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ನಲಪಾಡ್ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಕಳೆದ ವಿಚಾರಣೆ ವೇಳೆ ಇಬ್ಬರೂ ನಾಯಕರು ಕೋರ್ಟ್ನಿಂದ ವಿನಾಯಿತಿ ಪಡೆದುಕೊಂಡಿದ್ದರು.
ಕಳೆದ ಬಾರಿ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚಿಸಿತ್ತು. ಆದರೆ ಸದಾಶಿವನಗರ, ಅಶೋಕ ನಗರ ಪೊಲೀಸರು ಹಾಜರಾಗಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ರಿಪೋರ್ಟ್ ತೃಪ್ತಿಕರವಾಗಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಖುದ್ದು ಹಾಜರಾಗುವಂತೆ ಸೂಚಿಸಿ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಇದೀಗ ಇಬ್ಬರಿಗೂ ಜಾಮೀನು ಮಂಜೂರು ಆಗಿದೆ.
ಬಿಜೆಪಿ ನಿರಪರಾಧಿಯನ್ನು ಬಲಿ ತೆಗೆದುಕೊಂಡಿದೆ: ಸಿಎಂ
ಮೈಸೂರು: ಬಿಜೆಪಿ ತಮ್ಮ ರಾಜಕೀಯಕ್ಕಾಗಿ ನಿರಪರಾಧಿಯನ್ನು ಬಲಿ ತೆಗೆದುಕೊಂಡಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ತಪ್ಪು ಮಾಡದೇ ಇದ್ದರೂ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ನಾಗೇಂದ್ರ ರಾಜೀನಾಮೆ ನಂತರವೂ ಬಿಜೆಪಿಯವರು ಪಾದಯಾತ್ರೆ ಮಾಡುವುದಾದರೆ ಮಾಡಲಿ. ಅವರಿಗೆ ರಾಜಕೀಯ ಬೇಕು, ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ನನ್ನ ಒಂದೇ ಒಂದು ಪ್ರಶ್ನೆಗೆ ಬಿಜೆಪಿಯವರು ಉತ್ತರ ಕೊಡಲಿಲ್ಲ. ಯಾವ ಕಾರಣಕ್ಕಾಗಿ ನಾಗೇಂದ್ರ ರಾಜೀನಾಮೆ ಕೇಳಿದರು ಎಂಬುದಕ್ಕೆ ಬಿಜೆಪಿಯವರು ಉತ್ತರ ಕೊಡಲಿ ಎಂದರು.
ಡಿ.ಕೆ ವಿಧಾನಸೌಧ ಮಾರುತ್ತಾರೆ ಎಂಬ ಎಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರ್ಯಾರು ಏನೇನು ಮಾರಲು ಹೊರಟಿದ್ದರು ಎಂಬ ಚರಿತ್ರೆ ಬಿಚ್ಚಿಟ್ಟರೆ ಎಲ್ಲವೂ ಬಯಲಾಗುತ್ತದೆ. ನಾನು ಸದ್ಯಕ್ಕೆ ಆ ತಂಟೆಗೆ ಹೋಗುವುದಿಲ್ಲ. ಕುಮಾರಸ್ವಾಮಿಗೆ ಬಾಯಿ ಚಪಲ. ಚಪಲಕ್ಕೆ ಮಾತನಾಡಿ ಖುಷಿ ಪಡಲಿ ಬಿಡಿ. ಇನ್ನೂ ನನ್ನ ಬಗ್ಗೆ ಟೀಕೆ ಮಾಡಲಿ. ಅಸೂಯೆಗೆ ಮದ್ದಿಲ್ಲ, ನಾನು ಸಿಎಂ ಆಗಿರುವುದು ಕೆಲವರಿಗೆ ಅಸೂಯೆ ತಂದಿದೆ. ಕುಮಾರಸ್ವಾಮಿ ಮಾತ್ರ ಅಲ್ಲ ಬಿಜೆಪಿ ಜೊತೆಗೆ ಎನ್ಡಿಎ ಇಡೀ ಕೂಟಕ್ಕೆ ನಾನು ಸಿಎಂ ಆಗಿರುವುದು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಏನೇನೊ ಮಾತನಾಡುತ್ತಿದ್ದಾರೆ ಮಾತನಾಡಲಿ. ಆದರೆ ಒಂದು ಸತ್ಯ ಟೀಕೆಗಳು ಸಾಯುತ್ತವೆ, ಮಾಡಿದ ಕೆಲಸ ಉಳಿಯುತ್ತದೆ. ಇದನ್ನ ನಂಬಿದವನು ನಾನು ಎಂದು ತಿರುಗೇಟು ನೀಡಿದರು.