12 ದಿನಗಳ ಕಾಲ ಡಿಜಿಟಲ್ ಅರೆಸ್ಟ್ : ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಮ್ಯಾನೇಜರ್
ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರನ್ನು 12 ದಿನಗಳ ಕಾಲ 'ಡಿಜಿಟಲ್ ಬಂಧನ'ದಲ್ಲಿರಿಸಿ ಕೋಟ್ಯಾಂತರ ರೂಪಾಯಿ ದೋಚಿರುವ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ. ಸೈಬರ್ ಅಪರಾಧಿಗಳು 84 ವರ್ಷದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮತ್ತು ಅವರ ಪತ್ನಿಯನ್ನು ಡಿಜಿಟಲ್ ಬಂಧನದಲ್ಲಿರಿಸಿಕೊಂಡು ಸುಮಾರು 2.20 ಕೋಟಿ ರೂ. ಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ವೃದ್ಧ ದಂಪತಿಯನ್ನು ಡಿಜಿಟಲ್ ಬಂಧನದಲ್ಲಿರಿಸಿ (Digital arrest) ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಘಾಜಿಯಾಬಾದ್ನಲ್ಲಿ (Ghaziabad) ನಡೆದಿದೆ. ನಿವೃತ್ತ ಬ್ಯಾಂಕ್ ಅಧಿಕಾರಿ ರಾಮ್ ಪ್ರಕಾಶ್ ಹುರಿಯಾ (84) ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ತನ್ನನ್ನು ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯ (Daryaganj Police Station) ಪೊಲೀಸ್ ಅಧಿಕಾರಿ ಎಂದು ಹೇಳಿ 2023 ರಲ್ಲಿ ಕೆನರಾ ಬ್ಯಾಂಕ್ಗೆ ( Canara Bank) ಸಂಬಂಧಿಸಿದ 538 ಕೋಟಿ ರೂ. ಗಳ ದುರುಪಯೋಗ ಪ್ರಕರಣದಲ್ಲಿ ನಿಮ್ಮ ಹೆಸರು ಬಂದಿದೆ ಎಂದು ಹೇಳಿ ರಾಮ್ ಪ್ರಕಾಶ್ ಹುರಿಯಾ ಮತ್ತು ಅವರ ಪತ್ನಿಯನ್ನು 12 ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿರಿಸಿಕೊಂಡು ಸುಮಾರು 2.20 ಕೋಟಿ ರೂ. ಗಳನ್ನು ವಂಚಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಸೈಬರ್ ವಂಚಕರು ತಮ್ಮನ್ನು ತಾವು ಪೊಲೀಸ್ ಅಧಿಕಾರಿಗಳು, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಎಂದು ಹೇಳಿ ರಾಮ್ ಪ್ರಕಾಶ್ ಅವರಿಗೆ ವಿಡಿಯೋ ಕರೆ ಮಾಡಿದ್ದರು. ಇದು ನ್ಯಾಯಾಲಯದ ವಿಚಾರಣೆ ಎಂದು ಹೇಳಿ ಪ್ರತಿದಿನ ನಾಲ್ಕರಿಂದ ಎಂಟು ಗಂಟೆಗಳ ಕಾಲ ದಂಪತಿಯನ್ನು ವಿಚಾರಣೆ ನಡೆಸಿದರು. ದಂಪತಿಯಲ್ಲಿ ಭಯ ಮತ್ತು ನಿರಂತರ ಒತ್ತಡ ಉಂಟು ಮಾಡಿ ಅವರಿಂದ ಜೀವಮಾನದ ಉಳಿತಾಯ ಹಣವನ್ನು ಲಪಟಾಯಿಸಿಕೊಂಡಿದ್ದಾರೆ.
ಅನುಕಂಪದ ಸರ್ಕಾರಿ ಉದ್ಯೋಗ ಪಡೆಯಲು ನೀಚ ಕೆಲಸ; ಸುಪಾರಿ ಕೊಟ್ಟು ಅಪ್ಪನನ್ನೇ ಕೊಲ್ಲಿಸಿದ ಪಾಪಿ ಪುತ್ರ
ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದರ ಪ್ರಕಾರ ರಾಮಪ್ರಸ್ಥ ಗ್ರೀನ್ಸ್ ಸೊಸೈಟಿಯ ನಿವಾಸಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಮ್ ಪ್ರಕಾಶ್ ಹುರಿಯಾ ಅವರಿಗೆ ಮೇ 22 ರಂದು ವಾಟ್ಸಾಪ್ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ದೆಹಲಿಯ ದರಿಯಾಗಂಜ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಹೇಳಿದ್ದಾನೆ.
2023ರ ಕೆನರಾ ಬ್ಯಾಂಕ್ಗೆ ಸಂಬಂಧಿಸಿದ 538 ಕೋಟಿ ರೂ. ಗಳ ದುರುಪಯೋಗ ಪ್ರಕರಣದಲ್ಲಿ ನಿಮ್ಮ ವಿರುದ್ಧ ಆರೋಪ ಕೇಳಿ ಬಂದಿದೆ. ಹೀಗಾಗಿ ಬಂಧನದ ವಾರಂಟ್ ಹೊರಡಿಸಲಾಗಿದೆ. ಈ ಕುರಿತು ಯಾರನ್ನೂ ಸಂಪರ್ಕಿಸಕೂಡದು ಎಂದು ಹೇಳಿ ಅವರನ್ನು ಡಿಜಿಟಲ್ ಬಂಧನಕ್ಕೆ ಒಳಪಡಿಸಿದ್ದಾನೆ.
ಮರುದಿನ ಇಡಿ ಅಧಿಕಾರಿ ಎಂದು ಹೇಳಿ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಬಳಿಕ ವಿಡಿಯೋ ಕರೆ ಮೂಲಕ ನಕಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಅವರ ಬ್ಯಾಂಕ್ ಖಾತೆ, ಚಿನ್ನ, ಮನೆ ಮತ್ತು ಇತರ ಆಸ್ತಿಗಳು ತನಿಖೆಯಲ್ಲಿವೆ. ಈ ಕುರಿತು ಪರಿಶೀಲನೆಗಾಗಿ ಎಲ್ಲಾ ಹಣ, ದಾಖಲೆಗಳನ್ನು ಸರ್ಕಾರಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಬೇಕು ಎಂದು ಸೂಚಿಸಿದ್ದಾರೆ.
ವಿಚಾರಣೆ ಪೂರ್ಣಗೊಂಡ ಬಳಿಕ ಹಣವನ್ನು ಹಿಂತಿರುಗಿಸಲಾಗುವುದು ಎಂದು ಹೇಳಿ ಅವರ ವಾಟ್ಸಾಪ್ ಚಾಟ್ಗಳು ಮತ್ತು ಅಧಿಸೂಚನೆಗಳನ್ನು ಅಳಿಸುವಂತೆ ತಿಳಿಸಿದರು ಮತ್ತು ನಿರಂತರ ಅವರನ್ನು ಕಣ್ಗಾವಲಿನಲ್ಲಿ ಇರಿಸಿದರು.
ಮೇ 22 ರಿಂದ ಜೂನ್ 4 ರ ನಡುವೆ ಆರ್ಟಿಜಿಎಸ್ ಮೂಲಕ ಒಟ್ಟು 2,19,73,003 ರೂ. ಗಳನ್ನು ಐದು ವಿಭಿನ್ನ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡ ವಂಚಕರು ಹೇಳಿದ ಹಣವನ್ನು ಹೊಂದಿಸಲು ದಂಪತಿ ಸುಮಾರು 70 ಲಕ್ಷ ರೂ. ಗಳನ್ನು ಸಾಲವಾಗಿ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Shidlaghatta Crime: ಅಕ್ರಮವಾಗಿ ಸಾಗಿಸುತ್ತಿದ್ದ ಗೋಧಿ ಕ್ಯಾಂಟರ್ ಸೆರೆ; ಇಬ್ಬರ ವಿರುದ್ಧ ಪ್ರಕರಣ ದಾಖಲು
ಈ ಬಳಿಕ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ರಾಮ್ ಪ್ರಕಾಶ್ ಹುರಿಯಾ ಈ ಕುರಿತು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಡಿ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.