ಪತ್ನಿ, ಮಕ್ಕಳನ್ನು ಮನೆಗೆ ಕಳುಹಿಸಿ ಎಂದಿದ್ದಕ್ಕೆ ಪೆಟ್ರೋಲ್ ಹಾಕಿ ಅಳಿಯನನ್ನೇ ಸುಟ್ಟ ಅತ್ತೆ- ಮಾವ
ಪತ್ನಿ ಮತ್ತು ಮಕ್ಕಳನ್ನು ತನ್ನ ಜೊತೆಗೆ ಕಳುಹಿಸಿ ಎಂದು ಮನವಿ ಮಾಡಲು ಹೋಗಿದ್ದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಆನೇಕಲ್ ತಾಲೂಕಿನ ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು 25 ವರ್ಷದ ನವೀನ್ ಎಂದು ಗುರುತಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಪತ್ನಿ ಮತ್ತು ಮಕ್ಕಳನ್ನು ತನ್ನ ಜೊತೆಗೆ ಕಳುಹಿಸಿ ಎಂದು ಮನವಿ ಮಾಡಲು ಹೋಗಿದ್ದ ಅಳಿಯನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಆನೇಕಲ್ ತಾಲೂಕಿನ (Bengaluru) ಕಾವಲಹೊಸಹಳ್ಳಿಯ ಜನತಾ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು 25 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ನವೀನ್ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು. ಅವರನ್ನು (Crime News) ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ನವೀನ್ ದಂಪತಿಗಳು ಆನೇಕಲ್-ತಳಿ ರಸ್ತೆಯ ಚೂಡೇನಹಳ್ಳಿಯಲ್ಲಿ ವಾಸವಾಗಿದ್ದರು. ನವೀನ್ ಮದ್ಯವ್ಯಸನಿಯಾಗಿದ್ದು ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿತ್ತು. ಈ ವರ್ಷದ ಯುಗಾದಿ ಹಬ್ಬಕ್ಕೆಂದು ತವರಿಗೆ ಮರಳಿದ್ದ ಪತ್ನಿ ಮನೆಗೆ ಬಂದಿರಲಿಲ್ಲ, ಮಕ್ಕಳನ್ನೂ ವಾಪಾಸ್ ಕಳುಹಿಸಿರಲಿಲ್ಲ. ಹೀಗಾಗಿ ಪತ್ನಿ-ಮಕ್ಕಳನ್ನು ವಾಪಸ್ ಕರೆತರಲು ಏಪ್ರಿಲ್ 14 ರಂದು ಅತ್ತೆ ಮನೆಗೆ ಹೋದಾಗ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ನವೀನ್ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲಾಗಿದೆ.
ಸ್ಥಳದಲ್ಲಿದ್ದ ಜನರು ನವೀನ್'ನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಕೃಷ್ಣಗಿರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸುಮಾರು 19 ದಿನಗಳ ಚಿಕಿತ್ಸೆ ನಡೆದಿದ್ದು, ಇದೀಗ ನವೀನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನವೀನ್ ಅವರು ಸಾಯುವ ಮುನ್ನ ಕೃಷ್ಣಗಿರಿ ಆಸ್ಪತ್ರೆಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಹೇಳಿಕೆ ನೀಡಿದ್ದು, ನನ್ನ ಮೇಲೆ ಮಾವ ಸಂಪಂಗಿ, ಬಾಮೈದ ಮುನೇಶ್, ಅತ್ತೆ ಪಚ್ಚಮ್ಮ ಹಾಗೂ ಪತ್ನಿ ಸುಚಿತ್ರಾ ಸೇರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ನವೀನ್ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಪತ್ನಿ, ಅತ್ತೆ, ಮಾವನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತಳನ್ನು ಶಾರದಾ ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತಿ ಮಹೇಶ್ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಶಾರದಾ ಮತ್ತು ಮಹೇಶ್ ಅವರು 2025ರ ಜುಲೈ 31ರಂದು ವಿವಾಹವಾಗಿದ್ದರು. ವಿವಾಹದ ನಂತರ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕಿರುಕುಳ ಹಿನ್ನೆಲೆಯಲ್ಲಿ ಶಾರದಾ ಅವರು ತಮ್ಮ ಫಿಕ್ಸ್ಡ್ ಡಿಪಾಸಿಟ್ನಿಂದ ಪತಿಗೆ ರೂ.2 ಲಕ್ಷ ನೀಡಿದ್ದರು ಎಂದು ತಿಳಿದುಬಂದಿದೆ.