ಬೆಂಗಳೂರಿನ ರಿಂಗ್ ರೋಡ್ ಮರ್ಡರ್ ಕಥೆಯನ್ನು ಹೋಲುವ ಇಂದೋರ್ ರಾಜಾ ರಘುವಂಶಿ ಹತ್ಯೆ; ಅಂದು ಇಲ್ಲಿ ಏನಾಗಿತ್ತು?
Murder Case: ಮೇಘಾಲಯಕ್ಕೆ ಹನಿಮೂನ್ಗೆ ತೆರಳಿ ಕೊಲೆಯಾದ ರಾಜಾ ರಘುವಂಶಿ ಕಥೆ ಬೆಂಗಳೂರಿನ ರಿಂಗ್ ರೋಡ್ ಮರ್ಡರ್ ಕಥೆಯನ್ನು ಹೋಲುವಂತಿದೆ. 2003ರಲ್ಲಿ ನಡೆದಿರುವ ರಿಂಗ್ ರೋಡ್ ಮರ್ಡರ್ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಕೊಂದಿದ್ದಳು. ಇದನ್ನು ಸಾಕಷ್ಟು ಪ್ಲ್ಯಾನ್ ಮಾಡಿ ಮಾಡಲಾಗಿತ್ತು. ಆದರೆ ಯುವತಿ ಮಾಡಿದ ಒಂದು ತಪ್ಪು ಆಕೆಯನ್ನು ಜೈಲು ಪಾಲಾಗುವಂತೆ ಮಾಡಿತ್ತು.


ಭೋಪಾಲ್: ಮೇಘಾಲಯದಲ್ಲಿ (Meghalaya) ನಡೆದ ಇಂದೋರ್ (Indore Couple missing) ಮೂಲದ ರಾಜಾ ರಘುವಂಶಿ ಹತ್ಯೆ ಪ್ರಕರಣ (Raja Raghuvanshi murder Case) ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ನೂರಾರು ಕನಸುಗಳನ್ನು ಕಟ್ಟಿಕೊಂಡು ಪತ್ನಿಯೊಂದಿಗೆ ಮೇಘಾಲಯಕ್ಕೆ ಹನಿಮೂನ್ಗೆ ತೆರಳಿ ಕೊಲೆಯಾದ ರಾಜಾ ರಘುವಂಶಿ ಕಥೆ ಬೆಂಗಳೂರಿನ ʼರಿಂಗ್ ರೋಡ್ ಮರ್ಡರ್ʼ (Ring Road Murder case) ಕಥೆಯನ್ನು ಹೋಲುವಂತಿದೆ. 2003ರಲ್ಲಿ ನಡೆದಿರುವ ʼರಿಂಗ್ ರೋಡ್ ಮರ್ಡರ್ʼ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಸೇರಿ ಭಾವಿ ಪತಿಯನ್ನು ಕೊಂದಿದ್ದಳು. ಇದನ್ನು ಸಾಕಷ್ಟು ಪ್ಲ್ಯಾನ್ ಮಾಡಿ ಮಾಡಲಾಗಿತ್ತು. ಆದರೆ ಯುವತಿ ಮಾಡಿದ ಒಂದು ತಪ್ಪು ಆಕೆಯನ್ನು ಜೈಲು ಪಾಲಾಗುವಂತೆ ಮಾಡಿತ್ತು.
ಏನಿದು ರಿಂಗ್ ರೋಡ್ ಮರ್ಡರ್ ಪ್ರಕರಣ?
ಅದು 2003ರಲ್ಲಿ ನಡೆದ ಘಟನೆ. ಕಾನೂನು ವಿದ್ಯಾರ್ಥಿನಿಯಾಗಿದ್ದ 21 ವರ್ಷದ ಶುಭಾ ಶಂಕರನಾರಾಯಣ್ ಮತ್ತು ಸಾಫ್ಟ್ವೇರ್ ಎಂಜಿನಿಯರ್ 27 ವರ್ಷದ ಬಿ.ವಿ. ಗಿರೀಶ್ ವಿವಾಹ ನಿಶ್ಚಿತಾರ್ಥವು ನವೆಂಬರ್ 30ರಂದು ಅದ್ದೂರಿಯಾಗಿ ನಡೆದಿತ್ತು. ಗಿರೀಶ್ ಉತ್ತಮ ನಡವಳಿಕೆ ಹೊಂದಿದ್ದ ಸರಳ ವ್ಯಕ್ತಿಯಾಗಿದ್ದರು. ಆಗ ಅವರಿಗೆ ತಿಂಗಳಿಗೆ ಸುಮಾರು ಒಂದು ಲಕ್ಷ ರೂ. ಆದಾಯವೂ ಬರುತ್ತಿತ್ತು. 2004ರಲ್ಲಿ ಇವರಿಬ್ಬರ ವಿವಾಹ ನಿಗದಿಯಾಗಿತ್ತು. ಶುಭಾ ಕೂಡ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದು, ಆಕೆಯ ತಂದೆ ಪ್ರಸಿದ್ಧ ವಕೀಲರಾಗಿದ್ದರು.
ನಿಶ್ಚಿತಾರ್ಥವಾದ ಕೇವಲ ಮೂರು ದಿನಗಳ ಬಳಿಕ ಗಿರೀಶ್ ಕೊಲೆಯಾಗಿತ್ತು. ಈ ಕೊಲೆಯ ಸಂಚು ರೂಪಿಸಿದ್ದು ಅವರ ಬಾಳ ಸಂಗಾತಿಯೇ ಆಗಿದ್ದಳು.
ಶುಭಾಳನ್ನು ಗಿರೀಶ್ ರೆಸ್ಟೋರೆಂಟ್ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಮರಳುವಾಗ ಗಿರೀಶ್ ಬಳಿ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ವಿಮಾನಗಳು ಹಾರುವುದು ಮತ್ತು ಇಳಿಯುವುದನ್ನು ನೋಡ ಬಯಸುವುದಾಗಿ ಶುಭಾ ಹೇಳಿದಳು. ಆದರೆ ಅವರು ಅಲ್ಲಿಗೆ ತಲುಪುವಷ್ಟರಲ್ಲಿ ಕೆಲವು ವ್ಯಕ್ತಿಗಳು ಗಿರೀಶ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಶುಭಾ ಸಹಾಯಕ್ಕಾಗಿ ಕೂಗಿದ್ದು ಕೇವಲ ತಾನು ನಿರಪರಾಧಿ ಎಂದು ಸಾಬಿತುಪಡಿಸಲು ಮಾತ್ರ ಎಂಬುದು ಆಮೇಲೆ ತಿಳಿಯಿತು.
ಘಟನೆಯಲ್ಲಿ ಗಂಭೀರ ಗಾಯಗೊಂಡ ಗಿರೀಶ್ ಮರುದಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಈ ಕುರಿತು ಗಿರೀಶ್ ಕುಟುಂಬ ಪ್ರಕರಣ ದಾಖಲಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಯಾಕೆಂದರೆ ಗಿರೀಶ್ಗೆ ಯಾವುದೇ ಶತ್ರುಗಳು ಇರಲಿಲ್ಲ.
ಕೊನೆಗೆ ಗಿರೀಶ್ ಮತ್ತು ಶುಭಾ ನಿಶ್ಚಿತಾರ್ಥದ ವಿಡಿಯೊದಲ್ಲಿ ಏನಾದರೂ ಸುಳಿವು ಸಿಗಬಹುದೆಂದು ತಿಳಿದು ಪೊಲೀಸರು ಅದನ್ನು ಪರಿಶೀಲಿಸಿದರು. ಇದರಲ್ಲಿ ಶುಭಾ ಆಸಕ್ತಿರಹಿತರಾಗಿರುವುದನ್ನು ಗಮನಿಸಿದರು. ಇದು ಪ್ರಕರಣಕ್ಕೆ ಹೊಸದೊಂದು ತಿರುವು ನೀಡಿತ್ತು.
ಬಳಿಕ ಶುಭಾ ಹೇಳಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಪ್ರಾರಂಭಿಸಿದ ಪೊಲೀಸರಿಗೆ ಅನುಮಾನಗಳು ಹೆಚ್ಚಾಗತೊಡಗಿತು. ಕೊನೆಗೆ ಆಕೆಯ ಮೊಬೈಲ್ ಅನ್ನು ತನಿಖೆಗೆ ಒಳಪಡಿಸಿದಾಗ ಗಿರೀಶ್ ಸಾವಿನ ದಿನದಂದು ಆಕೆ 73 ಕರೆಗಳನ್ನು ಮಾಡಿರುವುದು ಬೆಳಕಿಗೆ ಬಂದಿತ್ತು. ಜತೆಗೆ ತನ್ನ ಕಾಲೇಜಿನಲ್ಲಿ ಜೂನಿಯರ್ ಆಗಿದ್ದ ಅರುಣ್ ವರ್ಮಾಗೆ ಹಲವಾರು ಸಂದೇಶಗಳನ್ನು ಕಳುಹಿಸಿರುವುದು ತಿಳಿದು ಬಂತು. ಈ ಬಗ್ಗೆ ಪೊಲೀಸರು ಅರುಣ್ ಅನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿತ್ತು. ಗಿರೀಶ್ ಕೊಲೆಯಾದ ದಿನ ಅರುಣ್ ಸ್ಥಳದಲ್ಲಿ ಇದ್ದುದನ್ನು ಆತನ ಮೊಬೈಲ್ ಬಹಿರಂಗಪಡಿಸಿತ್ತು.
ಅಂತಿಮವಾಗಿ ವಿಚಾರಣೆ ವೇಳೆ ಅವರಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡರು. ಶುಭಾ ತಂದೆ ಈ ಸಂಬಂಧವನ್ನು ಒಪ್ಪದ ಕಾರಣ ಅವರು ಗಿರೀಶ್ನನ್ನು ಕೊಲೆ ಮಾಡಿರುವುದಾಗಿ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಶುಭಾ ಮತ್ತು ಅರುಣ್ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶುಭಾ ಕೂಡ ಶಿಕ್ಷೆಗೆ ಒಳಗಾಗಿದ್ದು, 2014ರಲ್ಲಿ ಸುಪ್ರೀಂ ಕೋರ್ಟ್ ಆಕೆಗೆ ಜಾಮೀನು ನೀಡಿದೆ. ಈ ಘಟನೆಯನ್ನು ಆಧರಿಸಿ ಕನ್ನಡದಲ್ಲಿಯೂ ಚಿತ್ರವೊಂದು ತಯಾರಾಗಿದೆ.
ಇದನ್ನೂ ಓದಿ: Murder Case: ಸೋನಮ್, ಮುಸ್ಕನ್ ರಸ್ತೋಗಿ...ಪ್ರಿಯಕರನಿಗಾಗಿ ಪತಿಯನ್ನೇ ಕೊಂದ ಪತ್ನಿಯರು ಇವರು
ರಾಜಾ ರಘುವಂಶಿ ಹತ್ಯೆ ಪ್ರಕರಣ
ವಿವಾಹದ ಬಳಿಕ ಮಧ್ಯ ಪ್ರದೇಶದ ಸೋನಮ್ ಮತ್ತು ರಾಜಾ ರಘುವಂಶಿ ಹನಿಮೂನ್ಗಾಗಿ ಮೇಘಾಲಯಕ್ಕೆ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದರು. ಕೆಲವು ದಿನಗಳ ಬಳಿಕ ರಾಜಾ ಅವರ ಮೃತದೇಹ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಮರಿನಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಸೋನಮ್ಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದರು. ಇದರಿಂದ ಬೆದರಿದ ಸೋನಮ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳುವ ಸಲುವಾಗಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಳು.
ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ಭಾಗಿಯಾಗಿರುವುದು ತಿಳಿದು ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸೋನಮ್, ರಾಜ್ ಕುಶ್ವಾಹ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.