ಆಮ್ಲಜನಕ ಸಿಲಿಂಡರ್ ರಸ್ತೆಗೆ ಬಿದ್ದು ಸ್ಫೋಟ: ಓರ್ವ ಸಾವು, ನಾಲ್ವರಿಗೆ ಗಾಯ
Oxygen Cylinder Explode: ದೆಹಲಿಯ ಓಖ್ಲಾದಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಟ್ರಕ್ನಿಂದ ಆಮ್ಲಜನಕ ಸಿಲಿಂಡರ್ ಇಳಿಸುತ್ತಿದ್ದಾಗ ಸಿಲಿಂಡರ್ ರಸ್ತೆಗೆ ಬಿದ್ದು ಸ್ಫೋಟಗೊಂಡಿದೆ. ಮೃತರನ್ನು ಮೂಲತಃ ಜೈಪುರದ ಮೋಹಿತ್ ಸಿಂಗ್ ಎಂದು ಗುರುತಿಸಲಾಗಿದೆ. ದೆಹಲಿಯ ಓಖ್ಲಾ ಹಂತ-1 ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಸಂಗ್ರಹ ಚಿತ್ರ -
ನವದೆಹಲಿ: ಆಮ್ಲಜನಕ ಸಿಲಿಂಡರ್ ಸ್ಪೋಟಗೊಂಡು (Oxygen Cylinder Explode) ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ದೆಹಲಿಯ (Delhi) ಓಖ್ಲಾ ಹಂತ-1 (Okhla Phase-1) ಪ್ರದೇಶದಲ್ಲಿ ನಡೆದಿದೆ. ಎಸ್ಎಂ ಟ್ರೇಡರ್ಸ್ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮೂಲತಃ ಜೈಪುರದ (Jaipur) ನಿವಾಸಿ ಮೋಹಿತ್ ಸಿಂಗ್ (35) ಮೃತರು. ಉಮೇಶ್, ಅರವಿಂದ್, ಮನೋಜ್ ಮತ್ತು ಪಂಕಜ್ ಎಂಬ ಇತರ ನಾಲ್ವರು ಗಾಯಗೊಂಡಿದ್ದು, ಅವರನ್ನು ಏಮ್ಸ್ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ.
ಓಖ್ಲಾ ಹಂತ- 1 ಪ್ರದೇಶದ ಸಮುದಾಯ ಭವನದ ಬಳಿ ಸಿಲಿಂಡರ್ ಸ್ಫೋಟ ಉಂಟಾದ ಬಗ್ಗೆ ದೆಹಲಿ ಅಗ್ನಿಶಾಮಕ ಸೇವೆಗೆ ಬೆಳಗ್ಗೆ 10.30ರ ಸುಮಾರಿಗೆ ಕರೆ ಬಂದಿದೆ. ಟ್ರಕ್ನಿಂದ ಇಳಿಸುತ್ತಿದ್ದ ಆಮ್ಲಜನಕ ಸಿಲಿಂಡರ್ ರಸ್ತೆಗೆ ಬಿದ್ದು ಸ್ಫೋಟಗೊಂಡಿರುವುದರಿಂದ ಈ ದುರಂತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಮಾಹಿತಿ ತಿಳಿದ ತಕ್ಷಣ ತನಿಖಾ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಘಟನೆಯ ಕುರಿತು ಮಾಹಿತಿ ನೀಡಿರುವ ಎಸ್ಎಂ ಟ್ರೇಡರ್ಸ್, ಮೃತ ಮೋಹಿತ್ ಸಿಂಗ್ ಸೇರಿದಂತೆ ಗಾಯಾಳುಗಳೆಲ್ಲರೂ ಕಂಪೆನಿಯ ಸಹಾಯಕರಾಗಿದ್ದರು. ಪ್ರತಿ ದಿನ ಬೆಳಗೆ ಆಮ್ಲಜನಕ ಸಿಲಿಂಡರ್ಗಳನ್ನು ಹೊತ್ತ ವಾಹನವು ವಿತರಣೆಗಾಗಿ ತೆರಳುತ್ತದೆ. ಸಿಲಿಂಡರ್ಗಳನ್ನು ಇಳಿಸಿ ಗೋಡೌನ್ಗೆ ಮರಳುತ್ತಿದ್ದ ವೇಳೆ ಒಂದು ಸಿಲಿಂಡರ್ ವಾಹನದಿಂದ ರಸ್ತೆಗೆ ಬಿದ್ದು ಸ್ಫೋಟಗೊಂಡಿದೆ ಎಂದು ತಿಳಿಸಿದೆ.
#BREAKING: Cylinder blast in Okhla Industrial Area Phase 1 left one person dead and several others injured. Fire department personnel and Delhi Police teams are present at the spot. pic.twitter.com/y8L5lNAwOd
— Aditya Raj Kaul (@AdityaRajKaul) September 9, 2026
ಮಾಹಿತಿ ನೀಡಿರುವ ಪೊಲೀಸರು, ಎಸ್ಎಂ ಟ್ರೇಡರ್ಸ್ ಕಂಪನಿಯು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸುವ ಕೈಗಾರಿಕಾ ಆಮ್ಲಜನಕ ಸಿಲಿಂಡರ್ಗಳ ವ್ಯಾಪಾರ ಮತ್ತು ಸ್ಥಳೀಯ ವಿತರಣೆಯನ್ನು ನಡೆಸುತ್ತದೆ. ಓಖ್ಲಾ ಹಂತ-1 ಪ್ರದೇಶದಲ್ಲಿ ಯಾವುದೇ ಆಮ್ಲಜನಕ ತುಂಬುವ ಘಟಕಗಳಿಲ್ಲ. ಸಿಲಿಂಡರ್ಗಳನ್ನು ಗಾಜಿಯಾಬಾದ್ನಿಂದ ಪೂರೈಕೆದಾರರ ಮೂಲಕ ತುಂಬಿದ ಸ್ಥಿತಿಯಲ್ಲಿ ತರಲಾಗಿದೆ. ವಿಶೇಷವಾಗಿ ಓಖ್ಲಾ ಪ್ರದೇಶದ ಸ್ಥಳೀಯ ವ್ಯಾಪಾರಿಗಳು ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗಿದೆ. ಸಿಲಿಂಡರ್ಗಳ ಮಾಲೀಕತ್ವ, ಏಜೆನ್ಸಿ, ಅವುಗಳ ಪೂರೈಕೆಯ ಮೂಲ, ಪೂರೈಕೆದಾರರ ರುಜುವಾತುಗಳು ಮತ್ತು ಅವುಗಳ ಸಂಗ್ರಹಣೆ, ನಿರ್ವಹಣೆ ಮತ್ತು ಸಾಗಣೆಗೆ ಅಗತ್ಯವಿರುವ ಶಾಸನಬದ್ಧ ಅನುಮತಿಗಳು ಮತ್ತು ಪರವಾನಗಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಲಸ ಬಿಡಿ ಅಥವಾ ಸಾವನ್ನು ಸ್ವೀಕರಿಸಿ: ಎಲ್ಇಟಿ ಬೆದರಿಕೆ; ಆತಂಕದಲ್ಲಿ ಕಾಶ್ಮೀರಿ ಪಂಡಿತರು
ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಫೋಟದ ನಿಖರವಾದ ಕಾರಣವನ್ನು ನಿರ್ಧರಿಸಲು ಸ್ಥಳದಲ್ಲಿರುವ ಸಿಲಿಂಡರ್, ವಾಹನ ಮತ್ತು ಇತರ ವಸ್ತುಗಳನ್ನು ತಾಂತ್ರಿಕ ಮತ್ತು ವಿಧಿವಿಜ್ಞಾನ ತಜ್ಞರು ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.