ವರದಕ್ಷಿಣೆಗಾಗಿ ಡಂಬಲ್ಸ್ನಿಂದ ಹಲ್ಲೆ ಮಾಡಿ ಪೊಲೀಸ್ ಅಧಿಕಾರಿಯ ಹತ್ಯೆ; ಪತಿ, ಅತ್ತೆ-ಮಾವನಿಂದಲೇ ಕ್ರೂರ ಕೃತ್ಯ
Crime News: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಪತಿಯೇ ಡಂಬಲ್ಸ್ನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಲೆಯಾದ ಪೊಲೀಸ್ ಅಧಿಕಾರಿ ಹಾಗೂ ಆರೋಪಿ ಪತಿ -
ದೆಹಲಿ, ಜ. 29: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯೊಬ್ಬ ಪೊಲೀಸ್ ಅಧಿಕಾರಿಯಾಗಿರುವ ಪತ್ನಿ ಮೇಲೆಯೇ ಹಲ್ಲೆ ಮಾಡಿ ಕೊಲೆಗೈದಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದೆಹಲಿ ಪೊಲೀಸ್ ವಿಶೇಷ ಘಟಕದ ಸ್ವಾಟ್ ಕಮಾಂಡೋ ಆಗಿದ್ದ 27 ವರ್ಷದ ಕಾಜಲ್ ಚೌಧರಿ ಮೃತ ದುರ್ದೈವಿ. ಅವರ ಪತಿ ಡಂಬಲ್ಸ್ನಿಂದ ಹಲ್ಲೆ ನಡೆಸಿ ಅವರ ತಲೆಯನ್ನು ಬಾಗಿಲಿಗೆ ಹಿಡಿದು ಚಚ್ಚಿದ್ದಾರೆ ಎಂಬ ಆರೋಪ (Crime News) ಕೇಳಿ ಬಂದಿದೆ.
ಕಾಜಲ್ ಮತ್ತು ಅವರ ಪತಿ ಅಂಕುರ್ ಚೌಧರಿ ನಡುವೆ ಕೌಟುಂಬಿಕ ಸಮಸ್ಯೆಗಳ ಕುರಿತು ಜಗಳವಾದ ನಂತರ ಈ ಘಟನೆ ನಡೆದಿದೆ. ಮಹಿಳೆಯ ಕುಟುಂಬಸ್ಥರು ಆಕೆಯ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿದ್ದಾರೆ. ಕಾಜಲ್ 2022ರಲ್ಲಿ ತಮ್ಮ ಪದವಿ ಪೂರ್ಣಗೊಳಿಸಿದರು. ಈ ಸಮಯದಲ್ಲಿ ಅವರು ಗನೌರ್ನ ಸಹ ನಿವಾಸಿ ಅಂಕುರ್ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಕುಟುಂಬಗಳನ್ನು ಮನವೊಲಿಸಿ ವಿವಾಹವಾದರು. ಮದುವೆಗೆ ಮುಂಚಿತವಾಗಿ, ಕಾಜಲ್ 2023ರಲ್ಲಿ ದೆಹಲಿ ಪೊಲೀಸ್ ಕಮಾಂಡೋ ಆಗಿ ಆಯ್ಕೆಯಾದರು. ಅಂಕುರ್ ದೆಹಲಿಯಲ್ಲಿ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಬಾಯ್ಫ್ರೆಂಡ್ ಜತೆ ಓಡಿಹೋಗಿ ಪತಿ, ಮಾವನ ಸಾವಿಗೆ ಕಾರಣಳಾದ ಮಹಿಳೆ ಆರೆಸ್ಟ್
ಆದರೆ ಮದುವೆಯಾದ ಕೂಡಲೇ ಸಮಸ್ಯೆಗಳು ಪ್ರಾರಂಭವಾದವು ಎಂದು ಮೃತ ಅಧಿಕಾರಿಯ ಕುಟುಂಬ ಆರೋಪಿಸಿದೆ. ಮದುವೆಯಾದ 15 ದಿನಗಳಲ್ಲಿ, ಅಂಕುರ್ ಕುಟುಂಬವು ಕಾರ್ ಮತ್ತು ವರದಕ್ಷಿಣೆಗಾಗಿ ಬೇಡಿಕೆ ಇಡಲು ಪ್ರಾರಂಭಿಸಿತು. ಕಾಜಲ್ಗೆ ನಿರಂತರವಾಗಿ ಕಿರುಕುಳ ನೀಡಿದ್ದರು. ಕೌಟುಂಬಿಕ ದೌರ್ಜನ್ಯದಿಂದಾಗಿ, ಕಾಜಲ್ 2024ರಲ್ಲಿ ದೆಹಲಿಗೆ ಸ್ಥಳಾಂತರಗೊಂಡರು. ಆದರೆ ಆಕೆಯ ಪತಿ ಹಣ ಮತ್ತು ಕಾರ್ ನೀಡುವಂತೆ ಒತ್ತಾಯಿಸುತ್ತಲೇ ಇದ್ದ ಮತ್ತು ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಜನವರಿ 22ರಂದು, ಅಂಕುರ್ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಕಾಜಲ್ ಅವರ ಸಹೋದರ ನಿಖಿಲ್ಗೆ ಕರೆ ಮಾಡಿ, ತಾನೇ ಪತ್ನಿಯನ್ನು ಕೊಂದಿರುವುದಾಗಿ ಹೇಳಿದ್ದ. ಹಾಗೆಯೇ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಹೇಳಿದ್ದ ಎಂದು ಆರೋಪಿಸಲಾಗಿದೆ. ಕೂಡಲೇ ಕುಟುಂಬವು ದೆಹಲಿಗೆ ಧಾವಿಸಿ ಪೊಲೀಸರಿಗೆ ದೂರು ನೀಡಿತು. ನಂತರ ತನಿಖೆ ಆರಂಭಿಸಲಾಯಿತು.
ವಿವಾಹವಾದ ಕೂಡಲೇ ಅಂಕುರ್ ಕುಟುಂಬವು ವರದಕ್ಷಿಣೆ ಕಿರುಕುಳ ನೀಡಲು ಪ್ರಾರಂಭಿಸಿತು. ಮೊದಲು ಕಾಜಲ್ ಸೋನಿಪತ್ನ ಗನೌರ್ನಲ್ಲಿ ಅತ್ತೆಯೊಂದಿಗೆ ವಾಸಿಸುತ್ತಿದ್ದರು. ಆದರೆ ನಿರಂತರ ಕಿರುಕುಳದಿಂದಾಗಿ ಪತಿ-ಪತ್ನಿಯು ಮೋಹನ್ ಗಾರ್ಡನ್ನಲ್ಲಿರುವ ಫ್ಲಾಟ್ಗೆ ಸ್ಥಳಾಂತರಗೊಂಡರು ಎಂದು ಮೃತಳ ಸಹೋದರ ನಿಖಿಲ್ ಹೇಳಿದರು.
ಅಂಕುರ್ ತನ್ನ ಕುಟುಂಬದೊಂದಿಗೆ ಇರಲು ಒತ್ತಾಯಿಸಿದ್ದರಿಂದ ದಂಪತಿ ನಂತರ ಗನೌರ್ಗೆ ಮರಳಿದರು ಎಂದು ಅವರು ಹೇಳಿದರು. ತನ್ನ ಮಗಳು ನಾಲ್ಕು ತಿಂಗಳ ಗರ್ಭಿಣಿ ಎಂದು ಮೃತಳ ತಂದೆ ರಾಕೇಶ್ ಹೇಳಿದ್ದಾರೆ. ಅಂಕುರ್ ಎರಡು ಕೊಲೆಗಳನ್ನು ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಅತ್ತೆ-ಮಾವಂದಿರು ವರದಕ್ಷಿಣೆಗಾಗಿ ಕಾಜಲ್ಗೆ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ರಾತ್ರಿ ಆರೋಪಿ ಪತಿ ಅಂಕುರ್ನನ್ನು ಬಂಧಿಸಲಾಯಿತು. ಆರಂಭದಲ್ಲಿ ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆದರೆ ಕಾಜಲ್ ಸಾವಿನ ನಂತರ ಇದೀಗ ಪತಿ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ.