ಮಾಡೆಲ್ ಮೇಲೆ ಅತ್ಯಾಚಾರ, ದಲಿತ ಯುವಕರ ಮೇಲೆ ಹಲ್ಲೆ; ಟಿ.ನರಸೀಪುರ ಇನ್ಸ್ಪೆಕ್ಟರ್ ಹಳೇ ಪ್ರಕರಣಗಳು ಬೆಳಕಿಗೆ!
T Narasipura Inspector Dhananjay: ಗಣೇಶೋತ್ಸವ ಸಮಿತಿಯ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಟಿ ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರ ಹಳೆಯ ದರ್ಪದ ನಡವಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿವೆ.
-
ಮೈಸೂರು: ಮಸೀದಿ ರಸ್ತೆಯಲ್ಲಿ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸ್ತೀನಿ ಎಂದು ಹೇಳಿ ವ್ಯಾಪಕ ಟೀಕಿಗೆ ಗುರಿಯಾಗಿರುವ ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ (T. Narasipur Inspector Dhananjaya) ಅವರ ಹಳೆಯ ಪ್ರಕರಣಗಳು ಇದೀಗ ಮುನ್ನೆಲೆಗೆ ಬಂದಿದ್ದು, ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ವಿಚಾರಣೆ ನೆಪದಲ್ಲಿ ಯುವಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದು ಮತ್ತು ಮಾಡೆಲ್ ಒಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಪ್ರಕರಣವೂ ಬೆಳಕಿಗೆ ಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೌಟುಂಬಿಕ ಕಲಹದ ವಿಚಾರವಾಗಿ ನಾಲ್ವರು ದಲಿತ ಯುವಕರನ್ನು ಠಾಣೆಗೆ ಕರೆಸಿದ್ದ ಇನ್ಸ್ಪೆಕ್ಟರ್ ಧನಂಜಯ್, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್ಗಳಿಂದ ಮನಬಂದಂತೆ ಥಳಿಸಿದ್ದರು ಎಂಬ ಗಂಭೀರ ಆರೋಪವಿದೆ. ಈ ಬಗ್ಗೆ ನೊಂದ ಯುವಕರು ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದರು. ವಿಚಾರಣೆಗೆ ಕರೆಸಿದವರನ್ನು ಹಿಗ್ಗಾಮುಗ್ಗಾ ಥಳಿಸಲೆಂದೇ ಠಾಣೆಯಲ್ಲಿ ವಿಶೇಷವಾಗಿ ಮಾಡಿಸಲಾಗಿದ್ದ ಬ್ಯಾಟ್ ಹಾಗೂ ಮರದ ತುಂಡುಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಯುವತಿ ಮೇಲೆ ಅತ್ಯಾಚಾರ; ಕೇಸ್ ದಾಖಲು
ಇನ್ಸ್ಪೆಕ್ಟರ್ ಧನಂಜಯ್ ಇತಿಹಾಸ ಕೆದಕಿದಷ್ಟು ಕರಾಳ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ. ಅಂದರೆ 2014ರಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ವೇಳೆ ಇವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪಬ್ವೊಂದರಲ್ಲಿ ಪರಿಚಯವಾದ ದೆಹಲಿ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎನ್ನಲಾಗಿದೆ. ಇನ್ಸ್ಪೆಕ್ಟರ್ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ಸಂಬಂಧ ಬೆಳೆಸಿದ್ದರು. ಸತ್ಯ ತಿಳಿದು ಯುವತಿ ದೆಹಲಿ ನ್ಯಾಯಾಲಯದ ಮೊರೆ ಹೋದಾಗ, ಕೋರ್ಟ್ ಆದೇಶದಂತೆ ಮಾಲವೀಯ ನಗರ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಹೀಗಾಗಿ ಧನಂಜಯ್ ಸುಮಾರು 8 ದಿನಗಳ ಕಾಲ ನಾಪತ್ತೆಯಾಗಿದ್ದರು.
DSS ಸ್ನೇಹಿತರೇ, ಪ್ರತಾಪ್ ಸಿಂಹನ ವಿರುದ್ಧ ಘೋಷಣೆ ಕೂಗುವ ಮೊದಲು ಇನ್ಸ್ಪೆಕ್ಟರ್ ದೌರ್ಜನ್ಯದ ವಿರುದ್ಧ ನೀವೇ ಮಾಡಿದ್ದ ಹೋರಾಟ ನೆನಪು ಮಾಡಿಕೊಳ್ಳಿ. pic.twitter.com/fDm8XTnnnG
— Prathap Simha (@mepratap) September 13, 2026
ಬಿಜೆಪಿ ಹೇಳಿದಂತೆ ಟಿ.ನರಸೀಪುರ ಇನ್ಸ್ಪೆಕ್ಟರ್ನ ಸಸ್ಪೆಂಡ್ ಮಾಡಕ್ಕಾಗಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ
ವರ್ಗಾವಣೆ ರದ್ದು ಮಾಡಿಸಿಕೊಂಡಿದ್ದ ಪೊಲೀಸ್ ಅಧಿಕಾರಿ
ಪಿಐ ಧನಂಜಯ್ ಅವರು ಟಿ.ನರಸೀಪುರ ಠಾಣೆಗೆ ಬಂದು 2 ವರ್ಷ 8 ತಿಂಗಳು ಆಗಿವೆ. ಮೇ 10ರಂದು ಮೈಸೂರು ದಕ್ಷಿಣ ಠಾಣೆಗೆ ವರ್ಗಾವಣೆಯಾಗಿತ್ತು. ಆದರೆ ವರ್ಗಾವಣೆ ಆದೇಶ ಬಂದ 24 ಗಂಟೆಯಲ್ಲೇ ರದ್ದು ಮಾಡಿಸಿಕೊಂಡಿದ್ದರು ಎನ್ನಲಾಗಿದೆ.