ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Tiger death: ಹುಲಿ ಸಾವಿಗೆ ಕಾರಣ ಪತ್ತೆ, ಉರುಳಿಟ್ಟವರ ತಲಾಶೆಗೆ ಮುಂದಾದ ಇಲಾಖೆ

ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಡ್ಯಾಂನಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿತ್ತು. ಸತ್ತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಹುಲಿಯ ಕೊರಳಿಗೆ ಸ್ಕೂಟರ್ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ.

ಹುಲಿ ಸಾವಿಗೆ ಕಾರಣ ಪತ್ತೆ, ಉರುಳಿಟ್ಟವರ ತಲಾಶೆಗೆ ಮುಂದಾದ ಇಲಾಖೆ

ಹುಲಿ ಕಳೇಬರ -

ಹರೀಶ್‌ ಕೇರ
ಹರೀಶ್‌ ಕೇರ Feb 17, 2026 8:04 AM

ಚಾಮರಾಜನಗರ, ಫೆ.17: ಬಿಳಿಗಿರಿರಂಗನ ಬೆಟ್ಟ (Biligirirangana Hills) ಹುಲಿ ಸಂರಕ್ಷಿತಾರಣ್ಯದ ಗುಂಡಾಲ್ ಡ್ಯಾಂನಲ್ಲಿ (Gundal Reservoir) ಗಂಡು ಹುಲಿಯ (Tiger death) ಕಳೇಬರ ದೊರೆತಿದ್ದು, ಸಾವಿನ ಕಾರಣ ಬಹಿರಂಗವಾಗಿದೆ. ಸ್ಕೂಟರ್ ಕ್ಲಚ್ ವೈರ್ ಕತ್ತಿಗೆ ಸಿಕ್ಕಿ ಹಾಕಿಕೊಂಡು ಹುಲಿ ಸಾವನ್ನಪ್ಪಿದೆ. ಇದೀಗ ಅರಣ್ಯ ಇಲಾಖೆ ಉರುಳು ಹಾಕಿದವರ ಹಿಂದೆ ಬಿದ್ದಿದ್ದು, ಸತತ ವಿಚಾರಣೆಯಲ್ಲಿ ತೊಡಗಿದೆ. ಬೇರೆ ಪ್ರಾಣಿಗೆ ಹಾಕಿದ್ದ ಉರುಳಿಗೆ ಹುಲಿ ಸಿಲುಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗಡಿ ಜಿಲ್ಲೆ ಚಾಮರಾಜನಗರದ ಹುಲಿಗಳ ಸಾವು ಅರಣ್ಯ ಇಲಾಖೆಯ (Forest Department) ಅಧಿಕಾರಿಗಳ ನಿದ್ದೆಗೆಡಿಸಿದೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಡ್ಯಾಂನಲ್ಲಿ ತೇಲುವ ಸ್ಥಿತಿಯಲ್ಲಿ ಹುಲಿಯ ಕಳೇಬರ ಸಿಕ್ಕಿತ್ತು. ಸತ್ತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಹುಲಿಯ ಕೊರಳಿಗೆ ಸ್ಕೂಟರ್ ಕ್ಲಚ್ ವೈರ್ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿರುವುದು ಅಧಿಕಾರಿಗಳಿಗೆ ಗೊತ್ತಾಗಿದೆ.

ಜಮೀನಿನ ಬೇಲಿ, ಕಾಲುದಾರಿ ಬಳಿ ಇಂತಹ ಉರುಳು ಹಾಕಿರುವ ಬಗ್ಗೆ ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹುಲಿಯ ಹೊಟ್ಟೆಯೊಳಗೆ ನೀರು ಕೂಡ ಸೇರಿಕೊಂಡಿದೆ. ಹುಲಿ ನೀರು ಕುಡಿಯಲು ಹೋದ ವೇಳೆ ಬದುಕಿತ್ತು, ನೀರಿಗೆ ಬಿದ್ದು ಸಾವನ್ನಪ್ಪಿದೆ ಎಂದು ಕೂಡ ಪಶುವೈದ್ಯರು ತಿಳಿಸಿದ್ದಾರೆ. ಅಲ್ಲದೇ ಮೂರರಿಂದ ನಾಲ್ಕು ದಿನಗಳ ಹಿಂದೆಯೇ ಉರುಳು ಹುಲಿಯ ಕತ್ತಿಗೆ ಸುತ್ತಿಕೊಂಡಿದ್ದು, ನಿರಂತರವಾಗಿ ಬಿಗಿದುಕೊಂಡ ಪರಿಣಾಮ ಹುಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ಲದ ವ್ಯಾಘ್ರಗಳ ಸಾವು; ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿ ಮೃತದೇಹ ಪತ್ತೆ

ಉರುಳು ಹಾಕಿದವರ ಪತ್ತೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಸ್ಥಳೀಯ ರೈತರು, ಸಾರ್ವಜನಿಕರಿಂದ ಮಾಹಿತಿ ಸಂಗ್ರಹಣೆ ಕೂಡ ನಡೆಸಿದ್ದಾರೆ. ಈ ರೀತಿಯ ಉರುಳುಗಳು ನಿಮಗೆ ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ ಅಥವಾ ನೀವೇ ಉರುಳನ್ನು ತೆಗೆದು ಬಿಸಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಲಿಯ ಬೇಟೆಗೆ ಹಾಕಿದ್ರಾ ಅಥವಾ ಬೇರೆ ಪ್ರಾಣಿಗಳ ಬೇಟೆಗೆ ಉರುಳು ಹಾಕಿದ್ರಾ ಅನ್ನೋ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.