ರಕ್ತಸಿಕ್ತ ವ್ಯಾಲೆಂಟೈನ್ಸ್ ಡೇ; ನಿಲ್ಲಿಸಿದ್ದ ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆ: ನಿಗೂಢ ಸಾವಿಗೆ ಕಾರಣವೇನು?
Crime News: ಉತ್ತರ ಪ್ರದೇಶದ ನೋಯ್ಡಾದಲ್ಲಿ ಪಾರ್ಕ್ ಮಾಡಿದ್ದ ಕಾರೊಳಗೆ ಯುವ ಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ನಡೆದಿದೆ. ಮೃತರನ್ನು ಸುಮಿತ್ ಮತ್ತು ರೇಖಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 39 ಪ್ರದೇಶದಲ್ಲಿ ಪಾರ್ಕ್ ಮಾಡಲಾದ ಟಾಟಾ ಆಲ್ಟ್ರೋಝ್ ಕಾರೊಳಗೆ ಇವರ ಶವ ಕಂಡು ಬಂದಿದೆ.
ನೋಯ್ಡಾದಲ್ಲಿ ಪತ್ತೆಯಾದ ಕಾರು ಮತ್ತು ಸುಮಿತ್, ರೇಖಾ -
ದೆಹಲಿ, ಫೆ. 14: ಈ ಬಾರಿಯ ವ್ಯಾಲೆಂಟೈನ್ಸ್ ಡೇ ಪ್ರೀತಿಯ ಕೆಂಪಿನಿಂದ ಕೂಡಿರದೆ ರಕ್ತದಿಂದ ತೋಯ್ದು ಕೆಂಬಣ್ಣಕ್ಕೆ ತಿರುಗಿದೆ. ಹೌದು, ಉತ್ತರ ಪ್ರದೇಶದ ನೋಯ್ಡಾದಲ್ಲಿ ರಸ್ತೆ ಬದಿ ಪಾರ್ಕ್ ಮಾಡಿದ ಕಾರೊಳಗೆ ಯುವ ಪ್ರೇಮಿಗಳ ಮೃತದೇಹ ಪತ್ತೆಯಾಗಿದ್ದು, ಸಾವಿನ ಹಿಂದೆ ವಂಚನೆಯ ವಾಸನೆ ಮೂಗಿಗೆ ಬಡಿದಿದೆ (Valentine’s Day Horror). ಬಂದೂಕಿನಿಂದ ಹೊರ ಹೊಮ್ಮಿದ ಗುಂಡು 20 ವರ್ಷ ಆಸುಪಾಸಿನ ಪ್ರೇಮಿಗಳನ್ನು ಸಾವಿಗೆ ಕಾರಣವಾಗಿದ್ದು, ತನಿಖೆ ನಡೆಯುತ್ತಿದೆ. ಪ್ರೇಮಿಗಳ ದಿನದಂದೇ ಬಾಳಿ ಬದುಕಬೇಕಿದ್ದ ಪ್ರೇಮಿಗಳು ಸಾವಿಗೆ ಶರಣಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ನೋಯ್ಡಾದಲ್ಲಿ ಪಾರ್ಕ್ ಮಾಡಿದ್ದ ಕಾರೊಳಗೆ ಯುವ ಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸುದ್ದಿಯೊಂದಿಗೆ ದೆಹಲಿ-ಎನ್ಸಿಆರ್ ನಿವಾಸಿಗಳು ಶನಿವಾರದ ಬೆಳಗನ್ನು ಬರಮಾಡಿಕೊಂಡರು. ಮೃತರನ್ನು ಸುಮಿತ್ ಮತ್ತು ರೇಖಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 39 ಪ್ರದೇಶದಲ್ಲಿ ಪಾರ್ಕ್ ಮಾಡಲಾದ ಟಾಟಾ ಆಲ್ಟ್ರೋಝ್ ಕಾರ್ನಲ್ಲಿ ಗುಂಡಿನ ಗಾಯದಿಂದ ಅಸುನೀಗಿದ ಇವರು ಸಾರ್ವಜನಿಕರ ಕಣ್ಣಿಗೆ ಬಿದ್ದು, ಪೊಲೀಸರ ಗಮನಕ್ಕೆ ಸೆಳೆದರು.
ನೋಯ್ಡಾದಲ್ಲಿ ಕಾರೊಳಗೆ ಪತ್ತೆಯಾದ ಯುವ ಜೋಡಿಯ ಮೃತದೇಹ:
Noida, Uttar Pradesh: A man shot his girlfriend and then shot himself inside a car, resulting in their deaths on the spot. A pistol and cartridges were recovered from the scene. The deceased man and woman are said to be residents of Trilokpuri, Delhi. Police reached the spot,… pic.twitter.com/hwfudHh1cX
— IANS (@ians_india) February 14, 2026
ಪ್ರಾಥಮಿಕ ತನಿಖೆಯು ಪ್ರೀತಿಯಲ್ಲಿನ ಕಲಹವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಿತ್ನ ಕೈಯಲ್ಲಿ ಪಿಸ್ತೂಲ್ ಕಂಡು ಬಂದಿದ್ದು, ಆತನ ದೇಹ ಡ್ರೈವರ್ ಸೀಟ್ನಲ್ಲಿತ್ತು. ಕಾರ್ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರ ಪ್ರಕಾರ ಸುಮಿತ್ ಮೊದಲು ರೇಖಾಗೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕ್ಯಾಟ್ರಿಡ್ಜ್ ಕೂಡ ಕಾರೊಳಗೆ ಪತ್ತೆಯಾಗಿದೆ.
ಯುವ ಪ್ರೇಮಿಗಳ ಹಿನ್ನೆಲೆ
ರೇಖಾ ನೋಯ್ಡಾ ಸೆಕ್ಟರ್ 58ರ ನಿವಾಸಿ. ಇನ್ನು ಸುಮಿತ್ ದೆಹಲಿಯ ತ್ರಿಲೋಕಪುರಿಯಲ್ಲಿ ವಾಸಿಸುತ್ತಿದ್ದ. ಫೆಬ್ರವರಿ 13ರಂದು ಇವರಿಬ್ಬರು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ನಾಪತ್ತೆ ದೂರನ್ನೂ ದಾಖಲಿಸಿದ್ದರು.
ಡೆತ್ ನೋಟ್ ಪತ್ತೆ
ಕಾರೊಳಗೆ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಇದರಲ್ಲಿ ಸುಮಿತ್ ತನ್ನ ಕೃತ್ಯದ ಕಾರಣವನ್ನು ಬಿಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ʼʼರೇಖಾ ಜತೆ ಕಳೆದ 15 ವರ್ಷಗಳಿಂದ ಪ್ರೀತಿಯಲ್ಲಿದ್ದೆ. ರೇಖಾ ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದಳು. ಆದರೆ ಇತ್ತೀಚೆಗೆ ಆಕೆ ಬೇರೆಯೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾಳೆʼʼ ಎಂದು ಸುಮಿತ್ ಹೇಳಿದ್ದಾನೆ.
ಈ ಮೂಲಕ ಆರಂಭದಲ್ಲಿ ಆತ್ಮಹತ್ಯೆ ಎನಿಕೊಂಡಿದ್ದ ಈ ಪ್ರಕರಣ ಬಳಿಕ ಕೊಲೆ ಎನಿಸಿಕೊಂಡಿದೆ. ʼʼಮೃತರ ಮನೆಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಫೋರೆನ್ಸಿಕ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದೆ. ಮೃತದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳಿಸಲಾಗಿದೆʼʼ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಟ್ಸ್ಆ್ಯಪ್ ಸಂದೇಶದಲ್ಲಿ ಏನಿದೆ?
ಇನ್ನು ಸುಮಿತ್ನ ವ್ಯಾಟ್ಸ್ಆ್ಯಪ್ ಸಂದೇಶದಲ್ಲಿ ತನ್ನ ಕೃತ್ಯದ ಬಗ್ಗೆ ತಿಳಿಸಿದ್ದಾನೆ. ʼʼನಾನು ಸಾಯುತ್ತಿದ್ದೇನೆ. ಇದಕ್ಕೆ ರೇಖಾ ಕಾರಣ. ಅವಳು ಕಳೆದ 15 ವರ್ಷಗಳಿಂದ ನನ್ನೊಂದಿಗೆ ಇದ್ದಾಳೆ. ಮದುವೆಯಾಗುವುದಾಗಿಯೂ ತಿಳಿಸಿದ್ದಳು. ಆದರೆ ಇದೀಗ ಬೇರೊಬ್ಬನನ್ನು ವರಿಸಲು ಮುಂದಾಗಿದ್ದಾಳೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯಾಕೆಂದರೆ ರೇಖಾ ನನಗೆ ಮೋಸ ಮಾಡಿದ್ದಾಳೆ. ಇದೇ ಕಾರಣಕ್ಕೆ ನನ್ನ ಜೀವನ ಕೊನೆಗೊಳಿಸುತ್ತಿದ್ದೇನೆʼʼ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾನೆ.