Vijayapura Robbery Case: ರಾಜ್ಯದಲ್ಲಿ ಮತ್ತೊಂದು ದರೋಡೆ, ಕಂಟ್ರಿ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನಾಭರಣ ಕಳವು
ದರೋಡೆಕೋರರು ಚಿನ್ನ ದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹಲಸಂಗಿ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದ ಬಂದ ದರೋಡೆಕೋರರೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನ ಆಧಾರವಾಗಿಟ್ಟುಕೊಂಡು ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.
ಹಲಸಂಗಿಯಲ್ಲಿ ದರೋಡೆ ನಡೆದ ಅಂಗಡಿ -
ವಿಜಯಪುರ, ಜ.27: ಹಾಡಹಗಲೇ ಪಿಸ್ತೂಲ್ ತೋರಿಸಿ 205 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿ ದರೋಡೆ ಮಾಡಿರುವ ಘಟನೆ ವಿಜಯಪುರ (Vijayapura Robbery Case) ಜಿಲ್ಲೆಯ ಚಡಚಣ (Chadachana) ತಾಲೂಕಿನ ಹಲಸಂಗಿ (Halasangi) ಗ್ರಾಮದಲ್ಲಿ ನಡೆದಿದೆ. ಮಹಾರುದ್ರ ಕಂಚಗಾರ್ ಎಂಬುವವರ ಚಿನ್ನದಂಗಡಿಯಲ್ಲಿ ದರೋಡೆಯಾಗಿದೆ. ಖದೀಮರು ಅಂಗಡಿಗೆ ನುಗ್ಗಿ ಚಿನ್ನ, ಬೆಳ್ಳಿ ದೋಚಿಕೊಂಡು ಹೋದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಮೊದಲು ಸ್ಥಳೀಯರನ್ನು ಹೆದರಿಸಿದ್ದಾರೆ. ಆನಂತರ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯನ್ನು ದೋಚಿಕೊಂಡಿದ್ದಾರೆ. ಈ ವೇಳೆ ದರೋಡೆಯ ದೃಶ್ಯ ಮೊಬೈಲ್ನಲ್ಲಿ ಸೆರೆಹಿಡಿಯುತ್ತಿದ್ದ ಓರ್ವ ವ್ಯಕ್ತಿಗೆ ಗುಂಡು ಹಾರಿಸಿದ್ದು, ಅದು ತಪ್ಪಾಗಿ ಪಕ್ಕದಲ್ಲಿದ್ದ ಆತ್ಮಲಿಂಗ ಹೂಗಾರ ಎಂಬ ವ್ಯಕ್ತಿಗೆ ತಗುಲಿದೆ. ಸದ್ಯ ಗಾಯಾಳುವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದ್ದಾರೆ.
ಇನ್ನೂ ಖದೀಮರು ಗುರುತು ಪತ್ತೆಯಾಗದಿರಲಿ ಎಂದು ತಲೆಗೆ ಹೆಲ್ಮೆಟ್, ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದರು. ಫಿಂಗರ್ ಪ್ರಿಂಟ್ ಸಹ ಮೂಡದಂತೆ ಕೈಗೆ ಗ್ಲೌಜ್ ಧರಿಸಿದ್ದರು. ದರೋಡೆಗೆ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಬಳಕೆ ಮಾಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, 205 ಗ್ರಾಂ ಚಿನ್ನಾಭರಣ, 1 ಕೆ.ಜಿ ಬೆಳ್ಳಿಯನ್ನ ದರೋಡೆ ಮಾಡಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸಿಕ್ಕಿರೋ ದೃಶ್ಯಗಳನ್ನ ಆಧಾರವಾಗಿಟ್ಟುಕೊಂಡು ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.
400 crore robbery case: ಚೋರ್ಲಾ ಘಾಟ್ ದರೋಡೆಗೆ ಟ್ವಿಸ್ಟ್, ಗುಜರಾತ್ ರಾಜಕಾರಣಿ ಕೈವಾಡ?
ದರೋಡೆಕೋರರು ಚಿನ್ನ ದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹಲಸಂಗಿ ಗಡಿ ಗ್ರಾಮವಾಗಿದ್ದು ನೆರೆಯ ಮಹಾರಾಷ್ಟ್ರದಿಂದ ಬಂದ ದರೋಡೆಕೋರರೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.