Banu Mushtaq Saree Love: ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಮೇಡಂ ಸೀರೆ ಪ್ರೇಮ
Banu Mushtaq Saree Love: ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಬೂಕರ್ ಪ್ರೈಜ್ ವಿನ್ನರ್, ಲೇಖಕಿ ಬಾನು ಮುಷ್ತಾಕ್ ಮೇಡಂ, ವೇದಿಕೆ ಮೇಲೆ ರೇಷ್ಮೆ ಸೀರೆಯುಟ್ಟು ಅವಾರ್ಡ್ ತೆಗೆದುಕೊಂಡದ್ದಕ್ಕೂ ಒಂದು ಪುಟ್ಟ ಕಥೆಯಿದೆ. ಅದೇನು? ಖುದ್ದು ಅವರೇ ಮಾಧ್ಯಮಗಳೊಂದಿಗೆ ಹಾಗೂ ವಿಶ್ವವಾಣಿ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.

ಚಿತ್ರಗಳು: ಬಾನು ಮುಷ್ತಾಕ್, ಲೇಖಕಿ, 2025 ಬೂಕರ್ ಪ್ರೈಜ್ ವಿನ್ನರ್

ವಿಶೇಷ ವರದಿ: ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೇಖಕಿ ಹಾಗೂ 2025 ಬೂಕರ್ ಪ್ರೈಜ್ ವಿನ್ನರ್ ಬಾನು ಮುಷ್ತಾಕ್ ಮೇಡಂ ಯಾರಿಗೆ ಗೊತ್ತಿಲ್ಲ ಹೇಳಿ! ಈ ಪ್ರತಿಷ್ಠಿತ ಪ್ರೈಜ್ ವಿನ್ನರ್ ಆದ ನಂತರವಂತೂ ಇವರು ಕನ್ನಡಿಗರ ಮನೆಮನೆ ಮಾತಾಗಿದ್ದಾರೆ. ಸ್ಟಾರ್ಗಳಿಗಿಂತ ಹೆಚ್ಚು ಜನಪ್ರಿಯಗೊಂಡಿದ್ದಾರೆ. ಕಾರ್ಯನಿಮಿತ್ತ ಲಂಡನ್ಗೆ ತೆರಳಿದ್ದ ಅವರು ನೇರ ಏರ್ಪೋರ್ಟ್ನಿಂದ ಬೆಂಗಳೂರಿನ ಗಾಂಧಿಭವನಕ್ಕೆ ಬಂದಿಳಿದು ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಬಹುರೂಪಿ ಪಬ್ಲಿಕೇಷನ್ ಜಂಟಿ ಆಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಂತರ ಸಿಕ್ಕ ಕೆಲವು ಕ್ಷಣದಲ್ಲಿ ಬಾನು ಮುಷ್ತಾಕ್ ಅವರು (Banu Mushtaq Saree Love) ವಿಶ್ವವಾಣಿ ನ್ಯೂಸ್ನೊಂದಿಗೆ ಒಂದಿಷ್ಟು ಸೀರೆ ಪ್ರೇಮವನ್ನು ಹಂಚಿಕೊಂಡರು.

ಸೀರೆ ಉಟ್ಟು ವೇದಿಕೆ ಹತ್ತುವ ಆಸೆ
ನನಗೆ ಈ ಬೂಕರ್ ಪ್ರೈಜ್ ಪಡೆಯುವಾಗ ಮೈಸೂರ್ ಸಿಲ್ಕ್ ಸೀರೆ ಉಟ್ಟು ಪಾಲ್ಗೊಳ್ಳುವ ಆಸೆಯಿತ್ತು. ಇದಕ್ಕೆಂದೇ ನಾನು ಆಯ್ದ ಕೆಲವು ಮೈಸೂರ್ ಸಿಲ್ಕ್ ಸೀರೆ ಅದಕ್ಕೊಪ್ಪುವ ಬ್ಲೌಸ್ ಎಲ್ಲವನ್ನು ಮುಂಚೆಯೇ ಪ್ಲಾನ್ ಮಾಡಿ ಲಗೇಜ್ನಲ್ಲಿ ಪ್ಯಾಕ್ ಮಾಡಿದ್ದೆ. ಅಲ್ಲಿ ನಡೆಯುವ ಒಂದೊಂದು ಕಾರ್ಯಕ್ರಮಕ್ಕೂ ಮೈಸೂರ್ ಸಿಲ್ಕ್ ಸೀರೆಯುಟ್ಟು ಭಾಗವಹಿಸಬೇಕೆಂಬ ಮನದಾಸೆಯಿತ್ತು. ಆದರೆ, ನಾನು ಅಂದುಕೊಂಡಿದ್ದೇ ಬೇರೇ, ಅಲ್ಲಿ ಆಗಿದ್ದೇ ಬೇರೇ! ನನ್ನ ಲಗೇಜ್ ಏರ್ಪೋರ್ಟ್ನಲ್ಲಿ ಮಿಸ್ ಆಗಿ ಸೀರೆಗಳಿರಲಿ, ಅಗತ್ಯ ಔಷಧಿಯೂ ಕೂಡ ಕೈಗೆ ಸಿಗದಂತಾಗಿ ಪರದಾಡುವಂತಾಯಿತು ಎಂದು ಬಾನು ಮುಷ್ತಾಕ್ ಮೇಡಂ ವಿವರಿಸಿದರು.

ವೆಸ್ಟರ್ನ್ ಔಟ್ಫಿಟ್ನಲ್ಲಿ ಭಾನು ಮೇಡಂ
ತಕ್ಷಣಕ್ಕೆ ಅಲ್ಲಿ ಧರಿಸಲು ನನಗೆ ಹೊಂದುವ ಉಡುಗೆಯಿಲ್ಲದೇ ಕೊನೆಗೆ ವೆಸ್ಟರ್ನ್ ಔಟ್ಫಿಟ್ನಲ್ಲಿ ಕಾಣಿಸಿಕೊಳ್ಳಬೇಕಾಯಿತು. ಯಾವತ್ತೂ ಈ ವೆಸ್ಟರ್ನ್ ಔಟ್ಫಿಟ್ ಧರಿಸಿದ ನನಗೆ ಕಂಫರ್ಟಬಲ್ ಫೀಲ್ ಇರಲಿ, ಏನಪ್ಪಾ, ಮಾಡೋದು? ಅಟ್ಲೀಸ್ಟ್ 2 ವೇಲ್ ಅಥವಾ ದಾವಣಿ ಸಿಕ್ಕಿದರೂ ಅದನ್ನೇ ನಾನು ಸೀರೆಯಂತೆ ಮಾರ್ಪಡಿಸಿ, ಉಟ್ಟುಕೊಂಡು ಪ್ರಶಸ್ತಿ ಸ್ವೀಕರಿಸಬೇಕು ಎಂಬಂತೆ ಭಾಸವಾಗಿತ್ತು ಎಂದು ಬಾನು ಅವರು ವಿವರಿಸುವಾಗ ಅವರು ಅಲ್ಲಿ ಪಟ್ಟಿದ್ದ ಪಾಡು ಕಣ್ಣಿಗೆ ಕಟ್ಟಿದಂತೆ ನಮಗೆ ಭಾಸವಾಯಿತು.

ಮಗಳು ತಂದ ಸೀರೆಯುಟ್ಟು ಪ್ರಶಸ್ತಿ ಸ್ವಿಕಾರ
ಕೊನೆಗೆ ನನ್ನ ಹೆಣ್ಣುಮಕ್ಕಳು ನೀಡಿದ ಐಡಿಯಾ ಇಲ್ಲಿ ಫಲಪ್ರದವಾಯಿತು. ಬಹರೈನ್ನಿಂದ ನಮ್ಮ ಜತೆಯಾಗಬೇಕಿದ್ದ ಮಗಳೊಬ್ಬಳು ತಡವಾಗಿ ಬಂದಿದ್ದರಿಂದ, ನಾವು ಅವಳಿಗೆ ಈ ಪರಿಪಾಟಲನ್ನು ವಿವರಿಸಿದೆವು. ಆಗ ಆಕೆ ಬರುವಾಗ ಜತೆಗೆ ನನಗೆ ಅಗತ್ಯವಿರುವಂತಹ ರೇಷ್ಮೆ ಸೀರೆಗಳನ್ನು ತಂದುಕೊಟ್ಟಳು. ಆಕೆ ತಂದ ಧರ್ಮಾವರಂ ರೇಷ್ಮೆ ಸೀರೆಯುಟ್ಟು ಭಾಗವಹಿಸಿದೆ.
ನನಸಾದ ಸೀರೆ ಉಡುವ ಆಸೆ
ಬಾನು ಮೇಡಂ ಅವರು ರೇಷ್ಮೆ ಸೀರೆ ಉಟ್ಟು ಪ್ರಶಸ್ತಿ ಪಡೆಯುವ ಆಸೆ ಕೊನೆಗೆ ಹೇಗೋ ನನಸಾದರೂ, ಮನಸ್ಸಿನ ಇಚ್ಛೆಯಂತೆ ಮೈಸೂರ್ ಸಿಲ್ಕ್ ರೇಷ್ಮೆ ಸೀರೆಯುಡುವ ಕನಸು ಹಾಗೆ ಉಳಿಯಿತಂತೆ.
ಬಾನು ಮೇಡಂ ಸೀರೆ ಲವ್
- ಧರ್ಮಾವರಂ ಸೀರೆಯುಟ್ಟು ಪ್ರಶಸ್ತಿ ಸ್ವೀಕಾರ.
- ಸೀರೆ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತದೆ ಎಂಬುದು ಬಾನು ಮೇಡಂ ಉವಾಚ.
- ಸಲ್ವಾರ್ ಕಮೀಜ್ ಹೊರತುಪಡಿಸಿದಲ್ಲಿ ಸಾಕಷ್ಟು ಸೀರೆ ಕಲೆಕ್ಷನ್ ಇದೆಯಂತೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | KV Prabhakar: ಬಾನು ಮುಷ್ತಾಕ್ ಮಾನವೀಯತೆ, ಭಾರತೀಯತೆಯನ್ನು ಬೆಸೆಯುವ ನೇಕಾರರು: ಕೆ.ವಿ.ಪ್ರಭಾಕರ್