ದೋಹಾದಲ್ಲಿ ಅದ್ಧೂರಿಯಾಗಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
International Yoga Day: ಕತಾರ್ನ ಯುಡಿಎಸ್ಟಿ ಕ್ರಿಕೆಟ್ ಮೈದಾನದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಭವ್ಯತೆಯಿಂದ ಆಚರಿಸಲಾಯಿತು. "ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ" ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ದೀರ್ಘಾಯುಷ್ಯ, ಚೈತನ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರವನ್ನು ಯಶಸ್ವಿಯಾಗಿ ಎತ್ತಿ ತೋರಿಸಿತು.
ಕತಾರ್ನ ಯುಡಿಎಸ್ಟಿ ಕ್ರಿಕೆಟ್ ಮೈದಾನದಲ್ಲಿ12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. -
ದೋಹಾ, ಜೂ.22: ಕತಾರ್ನ ಯುಡಿಎಸ್ಟಿ ಕ್ರಿಕೆಟ್ ಮೈದಾನದಲ್ಲಿ (UDST Cricket Ground) 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಉತ್ಸಾಹ ಮತ್ತು ಭವ್ಯತೆಯಿಂದ ಆಚರಿಸಲಾಯಿತು. ಕತಾರ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಮುಖ ಸಂಘಟನೆಗಳಾದ ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ (ISC), ಇಂಡಿಯನ್ ಕಲ್ಚರಲ್ ಸೆಂಟರ್ (ICC), ಇಂಡಿಯನ್ ಕಮ್ಯುನಿಟಿ ಬೆನೆವೊಲೆಂಟ್ ಫೋರಮ್ (ICBF), ಮತ್ತು ಇಂಡಿಯನ್ ಬ್ಯುಸಿನೆಸ್ ಆಂಡ್ ಪ್ರೊಫೆಷನಲ್ಸ್ ಕೌನ್ಸಿಲ್ (IBPC) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ವಿವಿಧ ಪ್ರವಾಸಿ ಸಮುದಾಯಗಳ ಸಾವಿರಾರು ಯೋಗಾಸಕ್ತರು ಭಾಗವಹಿಸಿದ್ದರು.
"ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ" ಎಂಬ ಜಾಗತಿಕ ಧ್ಯೇಯವಾಕ್ಯದೊಂದಿಗೆ ನಡೆದ ಈ ಐತಿಹಾಸಿಕ ಕಾರ್ಯಕ್ರಮವು ದೀರ್ಘಾಯುಷ್ಯ, ಚೈತನ್ಯ ಮತ್ತು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುವಲ್ಲಿ ಯೋಗದ ಪಾತ್ರವನ್ನು ಯಶಸ್ವಿಯಾಗಿ ಎತ್ತಿ ತೋರಿಸಿತು.
ಜಾಗತಿಕ ರಾಜತಾಂತ್ರಿಕರು ಮತ್ತು ಕತಾರಿ ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತದ ರಾಯಭಾರಿ ವಿಪುಲ್ ಪಾಲ್ಗೊಂಡಿದ್ದರು. ಈ ಆಚರಣೆಯಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರು ಹಾಗೂ ಕತಾರ್ನ ಉನ್ನತ ಗಣ್ಯರು ಭಾಗವಹಿಸಿದ್ದು, ಭಾರತ ಮತ್ತು ಕತಾರ್ ನಡುವಿನ ಗಾಢವಾದ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ನ ರಾಯಭಾರಿ ಹಮ್ಮೂದಿ ಅಲ್-ಶೇಖ್, ಕಾರ್ಮಿಕ ಸಚಿವಾಲಯದ ಸಲಹೆಗಾರ ಖಾಲಿದ್ ಅಬ್ದುಲ್ ರೆಹಮಾನ್ ಅಲ್ ಫಕ್ರೂ, ಕತಾರ್ ಎನರ್ಜಿಯ ಹಿರಿಯ ಇಂಜಿನಿಯರ್ ಖಾಲಿದ್ ಅಲ್ ಫಕ್ರೂ, ಮನ್ನಾಯಿ ಕಾರ್ಪೊರೇಷನ್ ಅಧ್ಯಕ್ಷ ಅಬ್ದುಲ್ ಅಜೀಜ್ ಅಲ್ ಮನ್ನಾಯಿ ಮತ್ತು ಕತಾರ್ ಮಹಿಳಾ ರಾಷ್ಟಯ ಬಾಸ್ಕೆಟ್ಬಾಲ್ ತಂಡದ ಖ್ಯಾತ ಆಟಗಾರ್ತಿ ಮಿಸ್ ಆಲಾ ಸೊಲೈಮಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಬೃಹತ್ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಯ ಹಿಂದೆ ಭಾರತೀಯ ರಾಯಭಾರ ಕಚೇರಿಯ ಉನ್ನತ ಅಧಿಕಾರಿಗಳ ನಿರಂತರ ಮಾರ್ಗದರ್ಶನ ಮತ್ತು ಸಮರ್ಪಣಾ ಮನೋಭಾವವಿತ್ತು. ಕಾರ್ಯಕ್ರಮದ ಯಶಸ್ಸಿಗಾಗಿ ಭಾರತದ ರಾಯಭಾರಿ ವಿಪುಲ್, ಉಪ ರಾಯಭಾರಿ ಸಂದೀಪ್ ಕುಮಾರ್, ಪ್ರಥಮ ಕಾರ್ಯದರ್ಶಿ (ಆರ್ಥಿಕ ಮತ್ತು ವಾಣಿಜ್ಯ) ವೈಭವ್ ತಾಂಡ್ಲೆ ಮತ್ತು ಪ್ರಥಮ ಕಾರ್ಯದರ್ಶಿ (ಕಾರ್ಮಿಕ, ಸಮುದಾಯ ಕಲ್ಯಾಣ, ವೀಸಾ ಮತ್ತು ಒಸಿಐ) ಇಶ್ ಸಿಂಘಾಲ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಅಲ್ಲದೆ, ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಂಸ್ಕೃತಿ) ಹರೀಶ್ ಪಾಂಡೆ ಅವರ ಶ್ರಮ ಮತ್ತು ವ್ಯವಸ್ಥಿತ ಸಂಘಟನೆಯನ್ನು ವಿಶೇಷವಾಗಿ ಶ್ಲಾಘಿಸಲಾಯಿತು.
ಅತಿ ಹೆಚ್ಚು ಜನರನ್ನು ಸೇರಿಸಿ ಗಮನ ಸೆಳೆದ ಕರ್ನಾಟಕ ಸಂಘ ಕತಾರ್
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವಾರು ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಪೈಕಿ ಕರ್ನಾಟಕ ಸಂಘ ಕತಾರ್ (KSQ) ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸುವ ಮೂಲಕ ಮುಂಚೂಣಿಯಲ್ಲಿ ನಿಂತಿತು. ಕರ್ನಾಟಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ನೇತೃತ್ವದಲ್ಲಿ ಸದಸ್ಯರು ಭಾರಿ ಸಂಖ್ಯೆಯಲ್ಲಿ ಮೈದಾನಕ್ಕೆ ಧಾವಿಸಿ ಈ ಆರೋಗ್ಯ ಉಪಕ್ರಮಕ್ಕೆ ಬೆಂಬಲ ನೀಡಿದರು. ಸಂಘದ ಸದಸ್ಯರು ಅತ್ಯಂತ ಶಿಸ್ತಿನಿಂದ ಸಮೂಹ ಯೋಗ ಅವಧಿಗಳಲ್ಲಿ ಭಾಗವಹಿಸಿ ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳನ್ನು ಪ್ರದರ್ಶಿಸಿದರು.
ಕರ್ನಾಟಕ ಸಂಘ ಕತಾರ್ನ ಈ ಅಭೂತಪೂರ್ವ ಭಾಗವಹಿಸುವಿಕೆ ಮತ್ತು ಉತ್ಸಾಹವು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದ ಸಂದರ್ಭದಲ್ಲಿ ಭಾರತದ ರಾಯಭಾರಿ ವಿಪುಲ್ ಅವರು ಕರ್ನಾಟಕ ಸಂಘದ ಬೃಹತ್ ಸಂಖ್ಯೆಯ ಭಾಗವಹಿಸುವಿಕೆಯನ್ನು ಮತ್ತು ಸಮುದಾಯದಲ್ಲಿ ಆರೋಗ್ಯ ಹಾಗೂ ಒಗ್ಗಟ್ಟನ್ನು ಉತ್ತೇಜಿಸುವ ಅವರ ಬದ್ಧತೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ದೋಹಾದಲ್ಲಿ 'ಸಂಭ್ರಮ 2026' ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ಗಾಯಕ ರಾಜೇಶ್ ಕೃಷ್ಣನ್
ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಕಳೆಯನ್ನು ನೀಡುವ ಸಲುವಾಗಿ, ಕರ್ನಾಟಕ ಸಂಘ ಕತಾರ್ ವತಿಯಿಂದ ಅತ್ಯಂತ ವಿಶಿಷ್ಟವಾದ 'ಸಾಂಸ್ಕೃತಿಕ ಯೋಗ ನೃತ್ಯ' ಪ್ರದರ್ಶನವನ್ನು ನೀಡಲಾಯಿತು. ಅಶ್ವಿನಿ ಸಿ. ಬಿ., ನಿವೇದಾ ಸಿ. ಬಿ., ಮತ್ತು ಅಮೀರ್ ಜಹ್ರೌಯಿ ಅವರು ನಡೆಸಿಕೊಟ್ಟ ಈ ಸಮ್ಮೋಹಕ ನೃತ್ಯ ರೂಪಕವು ಭಾರತೀಯ ಸಂಸ್ಕೃತಿ ಮತ್ತು ಯೋಗಾಸನಗಳ ಸುಂದರ ಸಮ್ಮಿಲನವಾಗಿತ್ತು. ಇದು ಅಲ್ಲಿದ್ದ ಪ್ರೇಕ್ಷಕರು, ವಿದೇಶಿ ರಾಜತಾಂತ್ರಿಕರು ಮತ್ತು ಗಣ್ಯರನ್ನು ಮಂತ್ರಮುಗ್ಧಗೊಳಿಸಿತು ಹಾಗೂ ಇಡೀ ಯೋಗ ದಿನಾಚರಣೆಯ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿತು.