ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basavanagudi Kadalekai Parishe: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, ಐದು ದಿನಗಳ ಸಂಭ್ರಮ

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ (Kadalekayi parishe) ಸೋಮವಾರ (ನ.17) ಆರಂಭವಾಗಲಿದೆ. ಆದರೆ ಈ ವಾರಾಂತ್ಯದ ಎರಡು ದಿನಗಳ ಹಿಂದಿನಿಂದಲೇ ಬಸವನಗುಡಿ ರಸ್ತೆ ಹಾಗೂ ಅದರ ಆಸುಪಾಸಿನ ಪ್ರದೇಶಗಳಲ್ಲಿ ಕಡಲೆಕಾಯಿ ಸ್ಟಾಲ್‌ಗಳು, ಅಂಗಡಿ ಮಳಿಗೆಗಳು ಜನಜಂಗುಳಿಯನ್ನು ಆಕರ್ಷಿಸುತ್ತಿವೆ. ಈ ಬಾರಿ ಐದು ದಿನಗಳಿಗೆ ಪರಿಷೆಯನ್ನು ವಿಸ್ತರಿಸಲಾಗಿದ್ದು, ಬಸವನಗುಡಿ (Basavanagudi) ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ, 5 ದಿನ ಸಂಭ್ರಮ

ಕಡಲೆಕಾಯಿ ಪರಿಷೆ -

ಹರೀಶ್‌ ಕೇರ
ಹರೀಶ್‌ ಕೇರ Nov 17, 2025 9:14 AM

ಬೆಂಗಳೂರು: ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ. ಸೋಮವಾರ (ನ. 17) ಬೆಳಗ್ಗೆ 11 ಗಂಟೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalingareddy) ಪರಿಷೆಗೆ ಚಾಲನೆ ನೀಡಲಿದ್ದಾರೆ. ಈ ಬಾರಿ ದೊಡ್ಡ ಬಸವಣ್ಣ ಹಾಗೂ ದೊಡ್ಡಗಣಪತಿ ದೇವಾಲಯವು ವಿಶೇಷ ಹೂವಿನ ಅಲಂಕಾರ ಹಾಗೂ ವಿದ್ಯುತ್‌ ದೀಪಗಳೊಂದಿಗೆ ಕಂಗೊಳಿಸುತ್ತಿವೆ.

ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಕಡಲೆಕಾಯಿಯೊಂದಿಗೆ ಆಗಮಿಸಿ ಮಳಿಗೆಗಳನ್ನು ತೆರೆದಿದ್ದಾರೆ. ಕಡಲೆಕಾಯಿಗಳ ಜತೆಗೆ ಕಡ್ಲೆಪುರಿ, ಬೆಂಡು-ಬತ್ತಾಸು, ಆಟಿಕೆಗಳು, ತರಹೇವಾರಿ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಜೋರಾಗಿ ನಡೆದಿದೆ. ಶನಿವಾರದಿಂದಲೇ ಪರಿಷೆ ಕಳೆಗಟ್ಟಿದೆ. ಈ ಬಾರಿ ಪರಿಷೆಯು ವಿಧ್ಯುಕ್ತ ಆರಂಭಕ್ಕೆ ಮುನ್ನವೇ ವೀಕೆಂಡ್‌ ಬಂದುದರಿಂದ, ಬಸವನಗುಡಿಯಲ್ಲಿ ಶನಿವಾರ- ಭಾನುವಾರ ಜನಕಿಕ್ಕಿರಿದು ನೆರೆದಿದ್ದರು.

ಈ ಬಾರಿ 5 ಬಸವಣ್ಣಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆತಂದು ಅವುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪರಿಷೆಗೆ ಚಾಲನೆ ನೀಡಲಾಗುತ್ತಿದೆ. ಜತೆಗೆ ಬಸವನಗುಡಿ ರಸ್ತೆಗೆ ಸೀಮಿತವಾಗಿದ್ದ ಅಲಂಕಾರವನ್ನು ಗಾಂಧಿ ಬಜಾರ್‌, ಎನ್‌.ಆರ್‌. ರಸ್ತೆ ಸೇರಿ ಸುತ್ತಮುತ್ತಲ ರಸ್ತೆಗಳಿಗೆ ವಿಸ್ತರಿಸಲಾಗಿದೆ.

ನ.17 ರಿಂದ 21ರವರೆಗೆ ಪರಿಷೆ

ಈವರೆಗೂ ಮೂರು ದಿನಗಳ ಕಾಲ ನಡೆಯುತ್ತಿದ್ದ ಬಸವನಗುಡಿ ಕಡಿಲೆಕಾಯಿ ಪರಿಷೆಯನ್ನು ಈ ವರ್ಷದಿಂದ ಐದು ದಿನಗಳಿಗೆ ವಿಸ್ತರಿಸಲಾಗಿದೆ. ಕಾರ್ತಿಕ ಮಾಸದ ಕಡೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಅದರಂತೆ ಈ ಬಾರಿ ನ.17 ರಂದು ಪರಿಷೆ ಆರಂಭವಾದರೆ, ನ.21ರವರೆಗೆ ನಡೆಯಲಿದೆ. ಮೈಸೂರು ದಸರಾ ಮಾದರಿಯಲ್ಲಿ ಇಡೀ ಬಸವನಗುಡಿ ಕಂಗೊಳಿಸುತ್ತಿದೆ. ಈ ಬಾರಿ ವಿಜೃಂಭಣೆಯಿಂದ ಪರಿಷೆ ಆಚರಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕೆಂಪಾಂಬುಧಿ ಕೆರೆಯಲ್ಲಿ ನ.17ರಂದು ಸಂಜೆ 6ಕ್ಕೆ ತೆಪ್ಪೋತ್ಸವ ಜರುಗಲಿದೆ. ಜತೆಗೆ ಸಂಗೀತ, ನೃತ್ಯ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ಬ್ಯೂಗಲ್‌ ರಾಕ್‌ ಉದ್ಯಾನದಲ್ಲಿ ನ.17, 18 ಮತ್ತು 19 ರಂದು ಸಂಜೆ 6 ರಿಂದ ಸಂಗೀತ ಸಂಜೆ, ಹಾಸ್ಯ ಸಂಜೆ ಹಾಗೂ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಇದನ್ನೂ ಓದಿ: Kadalekai Parishe: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ದಿನ ಫಿಕ್ಸ್‌, ಈ ಬಾರಿ 5 ದಿನಗಳಿಗೆ ವಿಸ್ತರಣೆ