World Environment Day 2026: ಪರಿಸರ ದಿನಾಚರಣೆ ಹಿನ್ನೆಲೆ ಕತಾರ್ನಲ್ಲಿ ಕರ್ನಾಟಕ ಸಂಘದಿಂದ ಗಿಡ ನೆಡುವ ಅಭಿಯಾನ
Karnataka Sangha Qatar: ಕತಾರ್ನ ಭಾರತೀ ರಾಯಭಾರಿ ವಿಪುಲ್ ಹಾಗೂ ಕತಾರ್ ಪುರಸಭೆ ಅಧಿಕಾರಿಗಳು ಕರ್ನಾಟಕ ಸಂಘದ ವ್ಯವಸ್ಥಾಪಕ ಸಮಿತಿಯೊಂದಿಗೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಇವರೊಂದಿಗೆ ವಿವಿಧ ಸಂಸ್ಥೆಗಳ ಸ್ವಯಂಸೇವಕರು ಹಾಗೂ ಸಮುದಾಯದ ಮುಖಂಡರು ಪಾರ್ಕ್ನಲ್ಲಿ ಗಿಡಗಳನ್ನು ನೆಟ್ಟು ಹಸಿರು ಸೊಬಗನ್ನು ಹೆಚ್ಚಿಸಿದರು.
-
ದೋಹಾ, ಕತಾರ್: ಜಾಗತಿಕ ಪರಿಸರ ಕಾಳಜಿ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ, ಕತಾರ್ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ ಹಾಗೂ ದೋಹಾ ಪುರಸಭೆ ಸಹಯೋಗದೊಂದಿಗೆ, ಕತಾರ್ನ ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) ವತಿಯಿಂದ ಜೂನ್ 4 ರಂದು ವಿಶ್ವ ಪರಿಸರ ದಿನಾಚರಣೆಯ (World Environment Day 2026) ಅಂಗವಾಗಿ ಹಳೇ ಏರ್ಪೋರ್ಟ್ ಉದ್ಯಾನದಲ್ಲಿ ಆಯೋಜಿಸಿದ್ದ ʼಗಿಡ ನೆಡುವ ಕಾರ್ಯಕ್ರಮʼ ಯಶಸ್ವಿಯಾಗಿ ನೆರವೇರಿತು.
‘ನಾವು ಪ್ರಕೃತಿಯನ್ನು ರಕ್ಷಿಸೋಣ, ಏಕೆಂದರೆ ಪ್ರಕೃತಿ ನಮ್ಮನ್ನು ರಕ್ಷಿಸಿದೆ’ ಎಂಬ ಉದಾತ್ತ ಧ್ಯೇಯವಾಕ್ಯದೊಂದಿಗೆ ಬೆಳಗ್ಗೆ 7:30 ಕ್ಕೆ ಅಭಿಯಾನ ಆರಂಭವಾಯಿತು. ರಾಜತಾಂತ್ರಿಕ ಗಣ್ಯರು, ಪುರಸಭೆ ಮುಖಂಡರು ಹಾಗೂ ಅನಿವಾಸಿ ಭಾರತೀಯ ಸಮುದಾಯದ ನೂರಾರು ಉತ್ಸಾಹಿ ಸದಸ್ಯರು ಸುಸ್ಥಿರ ನಗರಾಭಿವೃದ್ಧಿ ಮತ್ತು ಪರಿಸರ ಜಾಗೃತಿಯ ಸಂಕಲ್ಪದೊಂದಿಗೆ ಈ ಹಸಿರು ಅಭಿಯಾನದಲ್ಲಿ ಕೈಜೋಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್ಗೆ ಭಾರತದ ರಾಯಭಾರಿಯಾದ ವಿಪುಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಕತಾರ್ ಸರ್ಕಾರದ ಪರವಾಗಿ ಸಾರ್ವಜನಿಕ ಉದ್ಯಾನವನಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಅಬ್ದುಲ್ಲಾ ಮೊಹಮ್ಮದ್, ಮಾಧ್ಯಮ ವ್ಯವಹಾರಗಳ ಘಟಕದ ಮುಖ್ಯಸ್ಥರಾದ ಶೇಖ್ ಸುಹೈಮ್ ಅಲ್ ಥಾನಿ ಮತ್ತು ದೋಹಾ ಪುರಸಭೆಯ ಉದ್ಯಾನವನಗಳು ಮತ್ತು ಮನರಂಜನಾ ವಿಭಾಗದ ಮುಖ್ಯಸ್ಥರಾದ ಸಲೇಮ್ ಅಲ್ ಅಹ್ವಾಲ್ ಭಾಗವಹಿಸಿದ್ದರು.

ಈ ವೇಳೆ ಭಾರತೀಯ ರಾಯಭಾರಿ ವಿಪುಲ್ ಅವರು ಮಾತನಾಡಿ, ನಗರ ಪ್ರದೇಶಗಳಲ್ಲಿ ಹಸಿರನ್ನು ಪೋಷಿಸುವುದು ನಮ್ಮೆಲ್ಲರ ಜಾಗತಿಕ ಜವಾಬ್ದಾರಿಯಾಗಿದೆ. ಇಂತಹ ಸತ್ಕಾರ್ಯಗಳು ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ಕೊಡುಗೆಯಾಗಿ ನೀಡುವುದಲ್ಲದೆ, ಎರಡು ದೇಶಗಳ ನಡುವಿನ ಆಳವಾದ ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ತಿಳಿಸಿದರು.
ಸಮುದಾಯದ ಪಾತ್ರ ಶ್ಲಾಘನೀಯ
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಾರ್ವಜನಿಕ ಉದ್ಯಾನವನಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಅಬ್ದುಲ್ಲಾ ಮೊಹಮ್ಮದ್ ಅವರು, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ವಿಸ್ತಾರವಾಗಿ ವಿವರಿಸಿದರು. ಭಾರತೀಯ ಸಮುದಾಯದ ಈ ಸಕ್ರಿಯ ಭಾಗಿತ್ವವು ಸ್ಥಳೀಯ ಪರಿಸರ ಗುರಿಗಳನ್ನು ತಲುಪಲು ವೇಗ ನೀಡುತ್ತದೆ ಎಂದು ಶ್ಲಾಘಿಸಿದ ಅವರು, ಸಾರ್ವಜನಿಕ ಉದ್ಯಾನಗಳು ನಗರ ಜೀವನದ ಶ್ವಾಸಕೋಶಗಳಿದ್ದಂತೆ; ಕರ್ನಾಟಕ ಸಂಘದಂತಹ ಕ್ರಿಯಾಶೀಲ ಸಂಸ್ಥೆಗಳ ಒಡನಾಟವು ದೇಶದ ಹಸಿರು ವಲಯವನ್ನು ವಿಸ್ತರಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಲು ಅತ್ಯಂತ ಸಹಕಾರಿಯಾಗಿದೆ ಎಂದರು.

ನಂತರ ನಡೆದ ಪ್ರಮುಖ ಘಟ್ಟದಲ್ಲಿ, ರಾಯಭಾರಿಗಳು ಹಾಗೂ ಕತಾರ್ ಪುರಸಭೆ ಅಧಿಕಾರಿಗಳು ಕರ್ನಾಟಕ ಸಂಘದ ವ್ಯವಸ್ಥಾಪಕ ಸಮಿತಿಯೊಂದಿಗೆ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಿದರು. ಇವರೊಂದಿಗೆ ವಿವಿಧ ಸಂಸ್ಥೆಗಳ ಸ್ವಯಂಸೇವಕರು ಹಾಗೂ ಸಮುದಾಯದ ಮುಖಂಡರು ಪಾರ್ಕ್ನ ವಿವಿಧ ಭಾಗಗಳಲ್ಲಿ ಸಾಲು ಸಾಲಾಗಿ ಗಿಡಗಳನ್ನು ನೆಟ್ಟು ಹಸಿರು ಸೊಬಗನ್ನು ಹೆಚ್ಚಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ವ್ಯವಸ್ಥಾಪಕ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿತು. ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯ ಹಾಗೂ ಸಾಗಣೆಯ ಬೆಂಬಲ ನೀಡಿದ ಕತಾರ್ನ ಸ್ಥಳೀಯ ಪುರಸಭೆ ಆಡಳಿತಕ್ಕೆ ಸಂಘದ ಪದಾಧಿಕಾರಿಗಳು ಆಳವಾದ ಕೃತಜ್ಞತೆಗಳನ್ನು ಸಲ್ಲಿಸಿದರು.
ಕತಾರ್ನ ವಿವಿಧ ಭಾರತೀಯ ಮೂಲ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕರ್ನಾಟಕ ಮೂಲದ ಸಂಘಟನೆಗಳ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಕರ್ನಾಟಕ ಸಂಘದ ಸಲಹೆಗಾರರು ಹಾಗೂ ಐಸಿಬಿಎಫ್ (ICBF) ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಶೆಟ್ಟಿ, ಕರ್ನಾಟಕ ಸಂಘದ ಸಲಹಾ ಸಮಿತಿ ಅಧ್ಯಕ್ಷರಾದ ರವಿ ಶೆಟ್ಟಿ ಮತ್ತು ಸಲಹೆಗಾರರಾದ ಅರುಣ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪರಿಸರ ಸಂರಕ್ಷಣೆಯ ಈ ಮಹತ್ತರ ಕಾರ್ಯಕ್ಕೆ ಕತಾರ್ ಕನ್ನಡಿಗರ ಪರವಾಗಿ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದರು.