Sourabha 2026: ನಾಳೆ ಸೌರಭ 2026 ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ, ಸಮಾರೋಪ ಸಮಾರಂಭ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ಫೆ.28ರ ಸಂಜೆ 5.30ಕ್ಕೆ ಸೌರಭ 2026 ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಕುರಿತಾದ ಮಾಹಿತಿ ಇಲ್ಲಿದೆ.
ಸೌರಭ 2026 -
ಬೆಂಗಳೂರು: ರಂಗ ಸೌರಭ ಅರ್ಪಿಸುವ ಸೌರಭ 2026 (Sourabha 2026) ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ನಾಳೆ (ಫೆ.28) ನಗರದ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿರ್ಮಾಪಕಿ ಅಶ್ವಿನ್ ಪುನೀತ್ ರಾಜಕುಮಾರ್ ಅವರು ಆಗಮಿಸಲಿದ್ದಾರೆ. ಅವರೊಂದಿಗೆ ನಟರಾದ ವಿಜಯ್ ರಾಘವೇಂದ್ರ, ನವೀನ್ ಶಂಕರ್, ನಿರೂಪ್ ಭಂಡಾರಿ, ಅವಿನಾಶ್, ಮಂಡ್ಯ ರಮೇಶ್, ನಾಗೇಂದ್ರ ಷಾ, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ರಾಜೇಶ್ ನಟರಂಗ, ಉಗ್ರಂ ಮಂಜು, ಅರುಣ್ ಸಾಗರ್ ನಟ, ಸುಂದರ್ ರಾಜ್, ನಿರ್ದೇಶಕಿ ಚಂಪಾ ಶೆಟ್ಟಿ, ರಂಗಭೂಮಿ ಹಾಗೂ ಚಲನಚಿತ್ರ ನಿರ್ದೇಶಕ ಸುಜಯ್ ಶಾಸ್ತ್ರಿ, ಕಿರುತರೆ ನಟ ವಿಕಾಶ್ ಉತ್ತಯ್ಯ, ನಟಿ ಉಷಾ ಭಂಡಾರಿ, ಕಿರುತೆರೆ ನಟಿ ನಿಶಾ ಗಣ್ಯರು ಆಗಮಿಸಲಿದ್ದಾರೆ.
ಫೆಬ್ರವರಿ 11 ರಿಂದ ನಿರಂತರವಾಗಿ ರಂಗ ಸ್ಪರ್ಧೆಗಳು ನಡೆದಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 35ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸೌರಭ ರಾಜ್ಯ ಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಕಾಲೇಜಿಗೆ ಕೊಡಮಾಡುವ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಪ್ರಥಮ ಸರ್ವೋತ್ತಮ ಪರ್ಯಾಯ ಪಾರಿತೋಷಕವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಾಯೋಜಿಸಿದ್ದು, ಅವರು ಅಂದು ಖುದ್ದು ಹಾಜರಿದ್ದು ಪ್ರಶಸ್ತಿಯನ್ನು ನೀಡಲಿದ್ದಾರೆ.
ಸೌರಭ 2026 ಪರ್ಯಾಯ ಪಾರಿತೋಷಕ ವಿತರಣೆ ಸಮಾರಂಭದಲ್ಲಿ ವಿವಿಧ ಪಾರಿತೋಷಕಗಳನ್ನು ಪ್ರದಾನ ಮಾಡಲಾಗುತ್ತದೆ. ಪದ್ಮಭೂಷಣ ಡಾ. ರಾಜಕುಮಾರ್ ಪ್ರಥಮ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕ, ಸುಬ್ಬಯ್ಯ ನಾಯ್ಡು ದ್ವಿತೀಯ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕ, ಶಂಕರ್ ನಾಗ್ ತೃತೀಯ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕ, ರಂಗಸೌರಭ ಪ್ರಥಮ ಅತ್ಯುತ್ತಮ ನಾಟಕ ಪರ್ಯಾಯ ಪಾರಿತೋಷಕ, ಬಿ. ವಿ. ಕಾರಂತ್ ದ್ವಿತೀಯ ಅತ್ಯುತ್ತಮ ನಾಟಕ ಪರ್ಯಾಯ ಪಾರಿತೋಷಕ, ಪರ್ವತವಾಣಿ ತೃತೀಯ ಅತ್ಯುತ್ತಮ ನಾಟಕ ಪರ್ಯಾಯ ಪಾರಿತೋಷಕ, ಗುರು ಶ್ರೀಮತಿ ನರ್ಮದ (ಶಕುಂತಲಾ ನೃತ್ಯಾಲಯ, ಬೆಂಗಳೂರು) ನೃತ್ಯ ಪರ್ಯಾಯ ಪಾರಿತೋಷಕ, ರಾಜು ಅನಂತಸ್ವಾಮಿ ಸಂಗೀತ ಪರ್ಯಾಯ ಪಾರಿತೋಷಕ ಕನ್ನಡ ಪ್ರಭ ಸಾಹಿತ್ಯ ಪರ್ಯಾಯ ಪಾರಿತೋಷಕವನ್ನು ಪ್ರದಾನ ಮಾಡಲಾಗುತ್ತದೆ.