ಸಿಲಿಕಾನ್ ಸಿಟಿಯಲ್ಲಿ ವಿಪರೀತ ಚಳಿಗೆ ಥರಥರ ನಡುಗಿದ ಜನತೆ; ಇದೇನು ಬೆಂಗಳೂರಾ, ಲಂಡನ್ನಾ ಎಂದ ಅಮೆರಿಕನ್ ಯುವತಿ
Severe cold wave hits Silicon City: ಸಿಲಿಕಾನ್ ಸಿಟಿಯಲ್ಲಿ ಅಸಹಜ ಚಳಿ ಜನರನ್ನು ಬೆಚ್ಚಿಬೀಳಿಸಿದೆ. ತೀವ್ರ ಚಳಿಯಿಂದ ಜನತೆ ಕಂಗೆಟ್ಟಿದ್ದಾರೆ. ರಾತ್ರಿ-ಹಗಲೆನ್ನದೆ ಒಂದೇ ರೀತಿಯ ಹವಾಮಾನಕ್ಕೆ ಜನತೆ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಇದೀಗ ಅಮೆರಿಕದ ಯುವತಿಯೊಬ್ಬಳು ಬೆಂಗಳೂರಿನ ಚಳಿಗೆ ನಡುಗಿ ಹೋಗಿರುವುದಾಗಿ ತಿಳಿಸಿದ್ದಾಳೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ. 1: ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಕಳೆದ ಕೆಲವು ದಿನಗಳಿಂದ ತಾವು ಕೊಡಗು, ಊಟಿಯಲ್ಲಿರುವಂತೆ ಭಾಸವಾಗುತ್ತಿದೆ. ಸೂರ್ಯನಂತೂ ನಾಪತ್ತೆಯಾಗಿದ್ದಾನೆ. ದಿನಪೂರ್ತಿ ತಂಪಾದ ವಾತಾವರಣ ಇದ್ದು, ಚಳಿಗೆ ಜನರು ಥರಥರನೇ ನಡುಗುತ್ತಿದ್ದಾರೆ. ಬೆಳಗ್ಗೆ ಬೇಗನೆ ಎದ್ದು ಕಚೇರಿಗಳಿಗೆ ತೆರಳುವವರ ಪಾಡಂತೂ ಕೇಳೋದೇ ಬೇಡ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕದ ಯುವತಿಯೊಬ್ಬರು ಬೆಂದಕಾಳೂರಿನ ಚಳಿಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೊ ಮೂಲಕ ವಿವರಿಸಿದ್ದಾರೆ.
ಜಾಕೆಟ್ ಧರಿಸಿದರೂ ಚಳಿಯಿಂದ ನಡುಗುತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ. ಬೆಂಗಳೂರಿನಲ್ಲಿ ತಾಪಮಾನ 13°C ಗೆ ಇಳಿದಿದ್ದು, ಸಿಕ್ಕಾಪಟ್ಟೆ ಚಳಿಯ ವಾತಾವರಣವಿದೆ ಎಂದು ಕಂಟೆಂಟ್ ಕ್ರಿಯೇಟರ್ ಆಗಿರುವ ಯುವತಿ ಡಾನಾ ಮೇರಿ ಹೇಳಿದ್ದಾಳೆ. ತನ್ನ ಬಾಲ್ಯವನ್ನು ಅಮೆರಿಕದ ಮಿಚಿಗನ್ನಲ್ಲಿ ಕಳೆದಿದ್ದು, ಅಲ್ಲಿ ತಾಪಮಾನ ಹೆಚ್ಚಾಗಿ ಶೀತವಾಗಿರುತ್ತದೆ ಎಂದಿದ್ದಾಳೆ. ಈ ವಿಡಿಯೊ ಸಖತ್ ವೈರಲ್ ಆಗಿದೆ.
ಸೈಕ್ಲೋನ್ ದಿತ್ವಾ ಪ್ರಭಾವ- ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ, ಇನ್ನೂ 3 ದಿನ ತೀವ್ರ ಚಳಿ
ಇದು ನಿಜವಾಗಲು ಬೆಂಗಳೂರಾ ಅಥವಾ ಲಂಡನ್ ನಗರನಾ?
17 ಗಂಟೆಗಳಲ್ಲಿ 20.7 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿರುವ ವೈರಲ್ ವಿಡಿಯೊದಲ್ಲಿ, ಡಾನಾ ಎರಡು ಜೋಡಿ ಸಾಕ್ಸ್ ಮತ್ತು ನಾಲ್ಕು ಪದರಗಳ ಬಟ್ಟೆಗಳನ್ನು ಧರಿಸಿರುವುದಾಗಿ ಹಂಚಿಕೊಂಡಿದ್ದಾಳೆ. ಇದು ಬೆಂಗಳೂರಾ ಅಥವಾ ಲಂಡನ್ ನಗರನಾ? ಎಂದು ಆಕೆ ಪ್ರಶ್ನಿಸಿದ್ದಾಳೆ. ಬೆಂಗಳೂರಿನ ಹವಾಮಾನ ಇನ್ನು ಮುಂದೆ ಬೆಂಗಳೂರಿನಂತಿಲ್ಲ ಎಂದು ಉತ್ಪ್ರೇಕ್ಷಿತವಾಗಿ ಹೇಳಿದ್ದಾಳೆ. ತಾನು ಸ್ಕೂಟಿ ಚಲಾಯಿಸಿದರೆ ಹೆಪ್ಪುಗಟ್ಟಿ ಹೋಗಬಹುದು ಎಂದು ಹೇಳಿದಳು.
ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ:
ನನ್ನ ಚರ್ಮದ ಮೇಲೆ ಬೀಳುವ ಸೂರ್ಯನ ಕಿರಣಗಳು ಹೇಗಿರುತ್ತದೆ ಎಂಬುದನ್ನು ನಾನು ಮರೆತಿದ್ದೇನೆ. ನಾನು ಖಿನ್ನತೆಗೆ ಒಳಗಾಗಲು ಪ್ರಾರಂಭಿಸುತ್ತಿದ್ದೇನೆ ಎಂದು ಆಕೆ ಹೇಳಿದಳು. ಆದರೂ ತಂಪಾದ ವಾತಾವರಣದಲ್ಲಿಯೇ ಹುಟ್ಟಿದ ನಾನು ಮಿಚಿಗನ್ನಲ್ಲಿ ಬಾಲ್ಯವನ್ನು ಹೇಗೆ ಕಳೆದೆ ಎಂದು ಯೋಚಿಸಿದ್ದಾಳೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಅನೇಕ ಮಂದಿ ತರಹೇವಾರಿ ಪ್ರತಿಕ್ರಿಯಿಸಿದ್ದಾರೆ.
ವಾಯುಭಾರ ಕುಸಿತ, ಮಳೆ ಸಾಧ್ಯತೆ
ದಿತ್ವಾ ಚಂಡಮಾರುತದ ಬಿರುಗಾಳಿ ದುರ್ಬಲಗೊಂಡಿದ್ದು, ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ನೆರೆಯ ತಮಿಳುನಾಡಿನಲ್ಲಿ ಹೆಚ್ಚಿನ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ಆಳವಾದ ವಾಯುಭಾರ ಕುಸಿತದಿಂದಾಗಿ ದಿತ್ವಾ ಚಂಡಮಾರುತವು ದುರ್ಬಲಗೊಂಡಿದ್ದು, ಗಂಟೆಗೆ 10 ಕಿ.ಮೀ. ವೇಗದಲ್ಲಿ ಉತ್ತರಕ್ಕೆ ಸಾಗುತ್ತಲಿದೆ. ಇದು ಸೋಮವಾರ ಮಧ್ಯಾಹ್ನದ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.