ಆರ್ಎಸ್ಎಸ್ ಕಚೇರಿಗೆ ಮುತ್ತಿಗೆ; ಪ್ರತಿಭಟನಾಕಾರರ ವಿರುದ್ಧ ಎಫ್ಐಆರ್ ದಾಖಲಿಸಲು ಸುನೀಲ್ ಕುಮಾರ್ ಒತ್ತಾಯ
V Sunil Kumar: ಆರೆಸ್ಸೆಸ್ ಕಚೇರಿಗೆ ಕೊಟ್ಟ ಭದ್ರತೆ ಕಡಿಮೆ ಮಾಡಿದ್ದಾರೆ. ವಿಪಕ್ಷ ನಾಯಕರ ಭದ್ರತೆಯನ್ನು ಕಡಿಮೆ ಮಾಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಗಲಭೆ ಮಾಡಲು ಹುನ್ನಾರವನ್ನು ಸರ್ಕಾರ ಮಾಡುವ ಅನುಮಾನ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಆರೋಪಿಸಿದ್ದಾರೆ.

-

ಬೆಂಗಳೂರು: ಇಂದು ಬೆಂಗಳೂರಿನ ಆರೆಸ್ಸೆಸ್ನ (RSS) ರಾಜ್ಯ ಕಚೇರಿ ಕೇಶವ ಕೃಪಾದ ಮುಂದೆ ಕಾಂಗ್ರೆಸ್ ಕಿಡಿಗೇಡಿಗಳು ಯಾವುದೇ ಪೂರ್ವಾನುಮತಿ ಇಲ್ಲದೇ ಗೂಂಡಾವರ್ತನೆ ಮಾಡಿದ್ದನ್ನು ಖಂಡಿಸಿ, ಇವತ್ತು ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ (V Sunil Kumar) ತಿಳಿಸಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಂಘದ ಶತಮಾನೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ನೂರಾರು ಕಾರ್ಯಕ್ರಮಗಳನ್ನು ಕಳೆದ 3-4 ತಿಂಗಳುಗಳಲ್ಲಿ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಕೇಶವ ಕೃಪಾದ ಮುಂದೆ ಕೆಲವು ಜನರು ಬಂದು ಗೂಂಡಾವರ್ತನೆ ಮಾಡಿದ್ದು, ಪ್ರತಿಭಟನೆ ನೆಪದಲ್ಲಿ ಅವಾಚ್ಯ ಶಬ್ದಗಳನ್ನು ಕೂಗಿರುವುದು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ ಎಂದರು.
ಪೂರ್ವಾನುಮತಿ ಇಲ್ಲದೇ ಪ್ರತಿಭಟಿಸುವಂತಿಲ್ಲ; ಅನುಮತಿ ಪಡೆದು ಪ್ರತಿಭಟನೆ ಮಾಡುವುದಾದರೆ ಬೆಂಗಳೂರಿನಲ್ಲಿ ನಿರ್ದಿಷ್ಟ ಸ್ಥಳ ಇದೆ. ಅನುಮತಿ ಪಡೆಯದೇ ಪ್ರತಿಭಟನೆ ಮಾಡಿದ್ದರೆ ಅವರ ಮೇಲೆ ಎಫ್ಐಆರ್ ದಾಖಲಿಸಿ ಎಂದು ಆಗ್ರಹಿಸಿದರು. ಪ್ರತಿಭಟನೆಗೆ ಅವಕಾಶ ಕೊಟ್ಟ ಸ್ಥಳೀಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಒತ್ತಾಯಿಸಿದರು.
ಇಲ್ಲವಾದರೆ ನಾವು 33 ಜನ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ನಂತರದ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು. ಸರ್ಕಾರಿ ಪ್ರಾಯೋಜಿತ ಪ್ರತಿಭಟನೆಗೆ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ ಎಂದು ಅವರು ಆರೋಪಿಸಿದರು.
ಆರೆಸ್ಸೆಸ್ ಕಚೇರಿಗೆ ಕೊಟ್ಟ ಭದ್ರತೆ ಕಡಿಮೆ ಮಾಡಿದ್ದಾರೆ. ವಿಪಕ್ಷ ನಾಯಕರ ಭದ್ರತೆಯನ್ನು ಕಡಿಮೆ ಮಾಡಿದ್ದಾರೆ. ಸರ್ಕಾರಿ ಪ್ರಾಯೋಜಿತ ಗಲಭೆ ಮಾಡಲು ಹುನ್ನಾರವನ್ನು ಸರ್ಕಾರ ಮಾಡುವ ಅನುಮಾನ ಪ್ರಾರಂಭವಾಗಿದೆ ಎಂದು ಆರೋಪಿಸಿದ ಅವರು, ಆದ್ದರಿಂದ ಗೂಂಡಾವರ್ತನೆ ತೋರಿದವರ ವಿರುದ್ಧ 24 ಗಂಟೆಗಳೊಳಗೆ ಎಫ್ಐಆರ್ ದಾಖಲಿಸಬೇಕು ಎಂದು ಸರ್ಕಾರ ಮತ್ತು ಕಮೀಷನರ್ ಅವರಿಗೆ ಎಚ್ಚರಿಸಿದರು. ಇಲ್ಲವಾದರೆ ನಾವು ರಾಜ್ಯಾದ್ಯಂತ ಎಲ್ಲ ಸಚಿವರ ಮುಂದೆ ಪ್ರತಿಭಟನೆ ಮಾಡಿ ಅನಾಹುತ ಆದರೆ, ಇದಕ್ಕೆ ಸರ್ಕಾರವೇ ಹೊಣೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | ಕೇಂದ್ರದಿಂದ ರಾಜ್ಯಕ್ಕೆ ದೀಪಾವಳಿ ಗಿಫ್ಟ್: ಬೆಂಗಳೂರು-ಹುಬ್ಬಳ್ಳಿಗೆ ಸೂಪರ್ ಫಾಸ್ಟ್ ವಿಶೇಷ ರೈಲು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಭರತ್ ಶೆಟ್ಟಿ ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಗೂ ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಉಪಸ್ಥಿತರಿದ್ದರು.