ಕುರುಕ್ಷೇತ್ರ ಪೌರಾಣಿಕ ನಾಟಕಕ್ಕೆ ಮೆಚ್ಚುಗೆ; ಜಾತ್ರೆಯ ಸಂಭ್ರಮದಲ್ಲಿ ಸಾವಿರಾರು ಭಕ್ತರು ಭಾಗಿ
ದೀಪೋತ್ಸವದ ಅಂಗವಾಗಿ ಮುತ್ತುರಾಯನಸ್ವಾಮಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಸಪ್ಪಲಮ್ಮ ದೇವಸ್ಥಾನಗಳನ್ನು ತಳಿರು ತೋರಣ ಮತ್ತು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹೂಗಳಿಂದ ವಿಶೇಷವಾಗಿ ಸಿಂಗರಿಸಲಾದ ತಂಬಿಟ್ಟಿನ ದೀಪಗಳನ್ನು ಮಹಿಳೆಯರು ಕೊಂಬು, ಕಹಳೆ ಹಾಗೂ ತಮಟೆ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ದೇವರಿಗೆ ಅರ್ಪಿಸಿದರು.
-
ಗೌರಿಬಿದನೂರು,: ತಾಲೂಕಿನ ಕಸಬಾ ಹೋಬಳಿಯ ಮುತ್ತುರಾಯನಹಳ್ಳಿ ಹಾಗೂ ಸಾಗಾನಹಳ್ಳಿ ಗ್ರಾಮಗಳಲ್ಲಿ ಗ್ರಾಮ ದೇವತೆಗಳಿಗೆ ಮಹಿಳೆಯರು ಶ್ರದ್ಧಾಭಕ್ತಿ, ಸಡಗರ ಹಾಗೂ ಸಂಭ್ರಮದಿಂದ ದೀಪಾರಾಧನೆ ನೆರವೇರಿಸಿದರು.
ದೀಪೋತ್ಸವದ ಅಂಗವಾಗಿ ಮುತ್ತುರಾಯನಸ್ವಾಮಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಸಪ್ಪಲಮ್ಮ ದೇವಸ್ಥಾನಗಳನ್ನು ತಳಿರು ತೋರಣ ಮತ್ತು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಹೂಗಳಿಂದ ವಿಶೇಷವಾಗಿ ಸಿಂಗರಿಸಲಾದ ತಂಬಿಟ್ಟಿನ ದೀಪಗಳನ್ನು ಮಹಿಳೆಯರು ಕೊಂಬು, ಕಹಳೆ ಹಾಗೂ ತಮಟೆ ವಾದ್ಯಗಳ ನಾದದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ದೇವರಿಗೆ ಅರ್ಪಿಸಿದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹಾಗೂ ಮುತ್ತುರಾಯನಸ್ವಾಮಿಗೆ ದೀಪಾರಾಧನೆ ಸಲ್ಲಿಸಿದ ಮಹಿಳೆಯರು, ಮಂಗಳವಾರ ಸಪ್ಪಲಮ್ಮ ದೇವಿಗೆ ದೀಪ ಬೆಳಗಿ ಗ್ರಾಮಸ್ಥರು ಹಾಗೂ ಜಾನುವಾರು ಗಳನ್ನು ರೋಗರುಜಿನಗಳಿಂದ ಕಾಪಾಡುವಂತೆ ಪ್ರಾರ್ಥಿಸಿದರು.
ದೀಪೋತ್ಸವದ ಪೂಜಾ ವಿಧಿವಿಧಾನಗಳನ್ನು ಸಪ್ಪಲಮ್ಮ ದೇವಾಲಯದ ಅರ್ಚಕರಾದ ಕೃಷ್ಣಪ್ಪ ಹಾಗೂ ಪರಮೇಶ್ ಸ್ವಾಮಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಇದಕ್ಕೂ ಮುನ್ನ ಭಾನುವಾರ ರಾತ್ರಿ ಗ್ರಾಮದ ಶಾಲಾ ಆಟದ ಮೈದಾನದಲ್ಲಿ ಗ್ರಾಮದ ಕಲಾವಿದರು ಪ್ರದರ್ಶಿಸಿದ 'ಕುರುಕ್ಷೇತ್ರ' ಪೌರಾಣಿಕ ನಾಟಕ ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ದೀಪೋತ್ಸವದಲ್ಲಿ ಪಾಲ್ಗೊಳ್ಳಲು ನೆಂಟರಿಷ್ಟರು, ಬಂಧು-ಬಳಗದವರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಮುತ್ತುರಾಯನಹಳ್ಳಿಯಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಾಗಾನಹಳ್ಳಿ ಶಿವಕುಮಾರ್, ಕಂಬಾಲು ನಾಗರಾಜು, ದ್ಯಾವರಹಳ್ಳಿ ಶೀನಪ್ಪ, ಬಡಗಿ ಗಂಗಾಧರಪ್ಪ, ಅಶ್ವಥ್, ಚನ್ನಕೃಷ್ಣಪ್ಪ, ಮಂಜುನಾಥ್, ನಾಗೇಶ್, ಡ್ರೈವರ್ ನಾಗರಾಜು, ಸುರೇಶ್, ರಾಮಕೃಷ್ಣಪ್ಪ, ಚನ್ನಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.