ನಂದಿಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ದಿಢೀರ್ ರದ್ದು : ಏಕಾಏಕಿ ವಿಧಾನಸೌಧಕ್ಕೆ ಸ್ಥಳಾಂತರಿದ ಸರಕಾರ
ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದರೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು ಎಂಬ ಆಸೆಯಿತ್ತು. ಇದೇ ಕಾರಣಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಳೆದ ಒಂದು ತಿಂಗಳಿಂದ ತಯಾರಿ ನಡೆಸಿದ್ದರು. ಗ್ಯಾರೆಂಟಿಗಳ ಭಾರಕ್ಕೆ ಸಿಕ್ಕಿ ನರಳುತ್ತಿರುವ ಸರಕಾರ ಬೆಂಗಳೂರು ವಿಭಾಗದ ಬಯಲು ಸೀಮೆಗೆಗಳ ಜನರ ಆಶೋತ್ತರ ಗಳನ್ನು ಈಡೇರಿಸುವ ಬದಲು ಎಳ್ಳುನೀರು ಬಿಟ್ಟು ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದಾರೆ


ಮುನಿರಾಜು ಎಂ ಅರಿಕೆರೆ
ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ವಿಭಾಗದ ಜನಪ್ರತಿನಿಧಿಗಳಿಂದ ಬೇಡಿಕೆಗೆ ಮಹಾಪೂರ ಮುಖ್ಯಮಂತ್ರಿಗಳಿಂದ ನಕಾರ
ಸಾರ್ಕ್ ಸಮ್ಮೇಳನದ ಗುಂಗಿನಲ್ಲಿದ್ದ ಜನಪ್ರತಿನಿಧಿಗಳಿಗೆ : ಸಚಿವ ಸಂಪುಟ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದ ನಿರಾಸೆ
ಚಿಕ್ಕಬಳ್ಳಾಪುರ : ರಾಜ್ಯ ಸರಕಾರದ 2025ನೇ ಸಾಲಿನ 11ನೇ ಸಚಿವ ಸಂಪುಟವನ್ನು ನಂದಿ ಬೆಟ್ಟದಲ್ಲಿ ನಡೆಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುಂದಾಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಸಂಪುಟಕ್ಕೆ ಬೆಂಗಳೂರು ವಿಭಾಗದ ಜನಪ್ರತಿನಿಧಿಗಳಿಟ್ಟ ಬೇಡಿಕೆಯ ಭಾರ ಹೊರಲಾಗದೆ ದಿಢೀರೆಂದು ವಿಧಾನಸೌಧಕ್ಕೆ ಶಿಫ್ಟ್ ಮಾಡುವ ಮೂಲಕ ಬೀಸುವ ದೊಣ್ಣೆ ಯಿಂದ ಪಾರಾಗಿದ್ದಾರೆ.
ಹೌದು. ನಂದಿಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದರೆ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು ಎಂಬ ಆಸೆಯಿತ್ತು. ಇದೇ ಕಾರಣಕ್ಕೆ ಈ ಭಾಗದ ಜನಪ್ರತಿನಿಧಿಗಳು ಕಳೆದ ಒಂದು ತಿಂಗಳಿಂದ ತಯಾರಿ ನಡೆಸಿದ್ದರು. ಗ್ಯಾರೆಂಟಿಗಳ ಭಾರಕ್ಕೆ ಸಿಕ್ಕಿ ನರಳುತ್ತಿರುವ ಸರಕಾರ ಬೆಂಗಳೂರು ವಿಭಾಗದ ಬಯಲು ಸೀಮೆಗೆಗಳ ಜನರ ಆಶೋತ್ತರಗಳನ್ನು ಈಡೇರಿಸುವ ಬದಲು ಎಳ್ಳುನೀರು ಬಿಟ್ಟು ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ: Chikkaballapur News: ಛಲವಾದಿ ನಾರಾಯಣಸ್ವಾಮಿ ವಿರುದ್ಧ ವೈಯಕ್ತಿಕ ದಾಳಿ ಖಂಡನೀಯ: ರಾಜೇಂದ್ರ ಬಾಬು ಎಂ.
ಸ್ಥಳಾಂತರಕ್ಕೆ ಕಾರಣ????
ಇದಕ್ಕಾಗಿ ಕೋಲಾರ ಉಸ್ತುವಾರಿ ಭೈರತಿ ಸುರೇಶ್, ಗ್ರಾಮಾಂತರದ ಉಸ್ತುವಾರಿ ಕೆ.ಹೆಚ್.ಮುನಿ ಯಪ್ಪ, ಚಿಕ್ಕಬಳ್ಳಾಪುರ ಉಸ್ತುವಾರಿ ಡಾ.ಎಂ.ಸಿ.ಸುಧಾಕರ್ ಆದಿಯಾಗಿ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ನಂದಿಬೆಟ್ಟದ ಸಚಿವ ಸಂಪುಟ ಸಭೆಯ ನಿಮಿತ್ತವಾಗಿಯೇ ಎರಡು ಮೂರು ಭಾರಿ ಸಭೆ ನಡೆಸಿ ಆಗಲೇಬೇಕಾದ ಕೆಲಸ ಕಾರ್ಯಗಳ ಬಗ್ಗೆ ಪಟ್ಟಿ ಮಾಡಿಕೊಂಡಿದ್ದರಲ್ಲದೆ, ಮಂಗಳ ವಾರ ಎಲ್ಲರೂ ಒಟ್ಟಾಗಿ ಸಭೆ ನಡೆಸಿದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಆಗ ಮುಖ್ಯಮಂತ್ರಿಗಳು ಯಾವುದೇ ಹೊಸ ಘೋಷಣೆ ಮಾಡಲು ಆಗುವುದಿಲ್ಲ. 2025ರ ಆಯವ್ಯಯದಲ್ಲಿ ತೀರ್ಮಾನವಾಗಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಮಾತಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಸುಬ್ಬಾರೆಡ್ಡಿ ಬಾಗೇಪಲ್ಲಿಗೆ ನೀರಾವರಿ ಯೋಜನೆ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಂತೆ, ಉಳಿದ ಶಾಸಕರು ಕೂಡ ಹೊಸ ಯೋಜನೆ ಘೋಷಣೆ ಮಾಡದಿದ್ದರೆ ಸಂಪುಟ ಸಭೆ ನಡೆಸಿ ಉಪಯೋಗವೇನು? ಎನ್ನುತ್ತಾ ಸಭೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದ್ದು,ಇದೇ ಕಾರಣಕ್ಕೆ ವಿಧಾನಸೌಧಕ್ಕೆ ಸಚಿವ ಸಂಪುಟ ಸಭೆ ಸ್ಥಳಾಂತರ ಗೊಂಡಿದೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬಂದಿವೆ.
ಕಡೆಗಣನೆ ತರವಲ್ಲ!!
ಗುಲ್ಬರ್ಗ ಜಿಲ್ಲೆಯಲ್ಲಿ ಸಚಿವ ಸಂಪುಟ ನಡೆಸಿ ಅಲ್ಲಿನ ಅಭಿವೃದ್ದಿಗೆ ಮುನ್ನುಡಿ ಬರೆದಿರುವ ರಾಜ್ಯ ಸರಕಾರ,ಮುಖ್ಯಮಂತ್ರಿಗಳು ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿ ಅನುದಾನದ ಮಹಾಪೂರವನ್ನೇ ಹರಿಸಿ ಆ ಭಾಗದ ಜನಪ್ರತಿನಿಧಿಗಳು ಮತ್ತು ಜನತೆಯ ಮನಸಂತೋಷ ಪಡಿಸಿದ್ದರು.
ಅದರಂತೆ ಚಿಕ್ಕಬಳ್ಳಾಪುರ, ಕೋಲಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಯೂ ಕೂಡ ಇದೇ ಆಸೆಯಲ್ಲಿದ್ದರು. ಮಾಧ್ಯಮಗಳ ಮುಂದೆ ಬಂದು ತಮ್ಮ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸ ಕಾರ್ಯಗಳನ್ನು ಸರಕಾರ ಗಮನಕ್ಕೆ ತರುವಲ್ಲಿ ನಿರತರಾಗಿದ್ದರು. ಜನಪ್ರತಿನಿಧಿಗಳು ಕೂಡ ತಮ್ಮ ಅವಧಿಯಲ್ಲಿ ಸಂಪುಟಸಭೆ ನಡೆದಾಗ ಈ ಯೋಜನೆಗಳನ್ನು ಜಾರಿ ಗೊಳಿಸಿಕೊಂಡೆವು ಎಂಬ ದಾಖಲೆ ಬರೆಯುವ ಲೆಕ್ಕಾಚಾರಗಳನ್ನು ಹಾಕುತ್ತಾ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಸಭೆ ನಡೆಯುವ ದಿನಕ್ಕಾಗಿ ಕಾದೇ ಕಾದರು.
ಮಂಗಳವಾರ ತಡರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸಚಿವ ಸಂಪುಟ ಸಭೆ ನಡೆಯುವ ಮಯೂರ ಹೋಟೆಲ್ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಅಂತಿಮ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದ್ದರು.
ಆದರೆ ಇವರೆಲ್ಲರ ಎಣಿಕೆಗಳು ಬುಡಮೇಲು ಆಗುವ ರೀತಿಯಲ್ಲಿ ಸಭೆ ಬರಖಾಸ್ತ್ ಆಗುವ ಮೂಲಕ ನಿಮ್ಮದೆಲ್ಲಾ ಬರೀ ಹಗಲುಗನಸು ಮಾತ್ರ ಎನ್ನುತ್ತಾ ಸಭೆಯನ್ನು ದಿಢೀರೆಂದು ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ.. ಈ ಮೂಲಕ ನೀವು ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದರೇನು? ದೀಪದ ಕೆಳಗೆ ಸದಾ ಕತ್ತಲೆಯಂತೆ ನಿಮ್ಮ ಬದುಕು ಕೂಡ ಅಷ್ಟೇ ಎಂಬ ಸಂದೇಶವನ್ನು ಸರಕಾರ ರವಾನೆ ಮಾಡಿದಂತಿದೆ.
*
ಸಚಿವ ಸಂಪುಟ ಸಭೆ ದಿಢೀರೆಂದು ನಂದಿಬೆಟ್ಟದಿಂದ ಬೆಂಗಳೂರಿಗೆ ಶಿಫ್ಟ್ ಆಗಲು ಕಾರಣವೇನು? ಎಂಬ ಬಗ್ಗೆ ವಿಶ್ವವಾಣಿ ವರದಿಗಾರ ಜಿಲ್ಲೆಯ ಜನಪ್ರತಿನಿಧಿಗಳಿಗೆ ಕರೆ ಮಾಡಿ ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಈ ಪೈಕಿ ಗೌರಿಬಿದನೂರು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಮಾತನಾಡಿ ಜಿಲ್ಲೆಯ ಬೇಡಿಕೆಗಳೆಲ್ಲಾ ಒಪ್ಪಿತವಾಗಿ ಒಂದು ಹಂತಕ್ಕೆ ಬಂದು ಕ್ಯಾಬಿನೆಟ್ ಅಪ್ರೂವಲ್ ಆಗಬೇಕಾ ದರೆ ಪ್ರೋಸೆಸ್ ಆಗಬೇಕು. ಸುಮ್ಮನೆ ಕ್ಯಾಬಿನೆಟ್ ಮುಂದೆ ಇಡಲಾಗುವುದಿಲ್ಲ. ಡಿಪಾರ್ಟ್ಮೆಂಟ್ ಒಕೆ ಆಗಬೇಕು.ಆಮೇಲೆ ಹಣಕಾಸು ಇಲಾಖೆಗೆ ಹೋಗಬೇಕು, ಅಲ್ಲಿ ಓಕೆ ಆಗಬೇಕು. ಅಲ್ಲಿಂದ ಕ್ಯಾಬಿನೆಟ್ಗೆ ಬರಬೇಕು. ಇಷ್ಟೆಲ್ಲಾ ಆಗಲು ಸಮಯ ಬೇಕು.ಏಕಾಏಕಿ ಬೇಡಿಕೆಯಿಟ್ಟಲ್ಲಿ ಕ್ಯಾಬಿನೆಟ್ ಹೇಗೆ ಅಪ್ರೂವಲ್ ಮಾಡಲು ಆಗುತ್ತದೆ. ಈ ಬಗ್ಗೆ ಇನ್ನು ತಯಾರಿಯೇ ಆಗಿಲ್ಲ, ಏನು ಬೇಕು ಏನು ಬೇಡ ಎಂಬ ಬಗ್ಗೆ ಪಟ್ಟಿಯೇ ಸಿದ್ಧವಾಗಿಲ್ಲ. ತರಾತುರಿಯಲ್ಲಿ ಮಾಡಲಾಗದು ಎಂಬ ಕಾರಣಕ್ಕೆ ನನ್ನ ಪ್ರಕಾರ ಬೆಂಗಳೂರಿಗೆ ಸ್ಥಳಾಂತರ ಆಗಿದೆ ಅನಿಸುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಮಾಡುವ ನಂಬಿಕೆಯಿದೆ.ಮುಖ್ಯಮAತ್ರಿಗಳು ಹೊಸ ಯೋಜನೆ ಘೋಷಣೆ ಮಾಡಲು ಆಗುವುದಿಲ್ಲ ಎಂದು ಹೇಳಿಲ್ಲ.ಅರ್ಜೆಂಟ್ ಆಗಿ ಸಭೆ ಏರ್ಪಾಡು ಆಗಿದ್ದರಿಂದ ಹೀಗೆ ಆಗಿದೆ ಎನ್ನುತ್ತಾರೆ.
ಈ ಬಗ್ಗೆ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಅವರ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೂ ಸ್ವೀಕರಿಸಲಿಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕರೆ ಸ್ವೀಕರಿಸಿದರೂ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆಯಲ್ಲಿದ್ದಾರೆ, ಆಮೇಲೆ ಮಾತನಾಡಿಸುತ್ತೇನೆ ಎಂದು ಅವರ ಆಪ್ತಸಹಾ ಯಕರು ಕರೆ ಕಡಿತಗೊಳಿಸಿದರು.
ಒಟ್ಟಾರೆ ಜೂನ್ 19ರಂದು ನಡೆಯಬೇಕಿದ್ದ ನಂದಿಬೆಟ್ಟದ ಸಚಿವ ಸಂಪುಟಸಭೆ ಇಲ್ಲಿ ರದ್ಧಾಗಿರು ವುದು ಪರವಿರೋಧದ ಚರ್ಚೆಗೆ ಭರಪೂರ ಆಹಾರ ಒದಗಿಸಿರುವುದಂತೂ ಸುಳ್ಳಲ್ಲ.ಏನೋ ಆಗಲಿದೆ ಎಂಬ ನೀರೀಕ್ಷೆಯಲ್ಲಿದ್ದ ಜನತೆಯ ಆಶೋತ್ತರ ಕೊನೆಗೂ ಆಶೋತ್ತರವಾಗಿಯೇ ಉಳಿಯುವ ಮೂಲಕ ಬಯಲು ಸೀಮೆಯ ಕಣ್ಣೀರ ಕಥೆ ಕೋಡಿಯಾಗಿ ಹರಿಯಿತು.