Chikkanayakanahalli News: ಸಂಪೂರ್ಣ ಅಧಿಕಾರ ನಿಮ್ಮ ಕೈಯಲ್ಲಿದೆ, ಪಕ್ಷಾತೀತವಾಗಿ ಪಂಚಾಯಿತಿಗಳ ಅಭಿವೃದ್ಧಿಗೆ ಒತ್ತು ನೀಡಿ: ಶಾಸಕ ಸಿ.ಬಿ.ಸುರೇಶ್ ಬಾಬು
ಪ್ರತಿ ಗ್ರಾಮ ಪಂಚಾಯಿತಿಗೂ ಪ್ರಧಾನಮಂತ್ರಿಯವರಿಗಿಂತಲೂ ಹೆಚ್ಚಿನ ಅಧಿಕಾರ ಮತ್ತು ಸೇವೆ ಮಾಡುವ ಅವಕಾಶವಿದೆ. ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಗ್ರಾಮ ಸ್ವರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಮಾಜದ ಜನತೆಗೆ ನೇರವಾಗಿ, ಪ್ರತಿದಿನ ಸಂಬಂಧ ವನ್ನು ಇಟ್ಟುಕೊಂಡು ಸೇವೆ ಮಾಡುವವರು ನೀವೇ. ಆದ್ದರಿಂದ, ಪಕ್ಷಾತೀತವಾಗಿ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿಯ ಕಡೆ ಗಮನ ಹರಿಸಿ


ಚಿಕ್ಕನಾಯಕನಹಳ್ಳಿ: ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರವಿದ್ದು, ಪಂಚಾಯಿತಿಯಲ್ಲಿ ಎಲ್ಲರೂ ಪಕ್ಷಾತೀತವಾಗಿ ಅಭಿವೃದ್ಧಿಗೆ ಒತ್ತು ನೀಡಿದರೆ ನಮ್ಮ ಅಧಿಕಾರಕ್ಕೆ ಮತ್ತು ಕುರ್ಚಿಗೆ ಬೆಲೆ ಬರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. "ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕೆಲಸಗಳನ್ನು ಮಾಡಿ" ಎಂದು ಅವರು ಕರೆ ನೀಡಿದರು.
ಸೋಮವಾರ ಪಟ್ಟಣದ ತೀನಂಶ್ರೀ ಭವನದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳೊಂದಿಗೆ ಪಂಚಾಯಿತಿ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಪ್ರತಿ ಗ್ರಾಮ ಪಂಚಾಯಿತಿಗೂ ಪ್ರಧಾನಮಂತ್ರಿಯವರಿಗಿಂತಲೂ ಹೆಚ್ಚಿನ ಅಧಿಕಾರ ಮತ್ತು ಸೇವೆ ಮಾಡುವ ಅವಕಾಶವಿದೆ. ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಗ್ರಾಮ ಸ್ವರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಸಮಾಜದ ಜನತೆಗೆ ನೇರವಾಗಿ, ಪ್ರತಿದಿನ ಸಂಬಂಧವನ್ನು ಇಟ್ಟುಕೊಂಡು ಸೇವೆ ಮಾಡುವವರು ನೀವೇ. ಆದ್ದರಿಂದ, ಪಕ್ಷಾತೀತವಾಗಿ ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿಯ ಕಡೆ ಗಮನಹರಿಸಿ" ಎಂದು ಶಾಸಕರು ಹೇಳಿದರು.
ಇದನ್ನೂ ಓದಿ: Chikkaballapur News: ಅಪರಾಧ ತಡೆಯಲು ಗ್ರಾಮಸ್ಥರಿಗೆ ಅರಿವು
ಈಗಾಗಲೇ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಿಗೆ ನಿವೇಶನ ಹೊಂದಿರುವ ಮನೆ ರಹಿತರಿಗೆ ತಲಾ 7 ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನೀಡಲಾಗುತ್ತಿದ್ದು, ಜಿಪಿಎಸ್ (GPS) ಆಗಿರುವ ನಿವೇಶನಗಳ ಮಾಹಿತಿಯನ್ನು ಕೂಡಲೇ ನೀಡುವಂತೆ ಸೂಚಿಸಲಾಯಿತು. ಉಳಿದ 17 ಪಂಚಾಯಿತಿಗಳಲ್ಲೂ ಮನೆಗಳಿಗಾಗಿ ಪಟ್ಟಿ ನೀಡಿ, ಸಂಬಂಧಪಟ್ಟ ಸಚಿವರ ಮೂಲಕ ಹೆಚ್ಚು ಮನೆಗಳಿಗೆ ಅನುದಾನ ತರುವಂತೆ ಶಾಸಕರು ತಿಳಿಸಿದರು. ಜಲಜೀವನ್ ಮಿಷನ್ ಕಾಮಗಾರಿಗಳು ಸಂಪೂರ್ಣವಾಗಿರುವ ಗ್ರಾಮ ಪಂಚಾಯಿತಿಗಳವರು ಮಾಹಿತಿ ನೀಡಿದರೆ, ಅಲ್ಲಿ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪಂಚಾಯಿತಿಯವರು ಕೂಡಲೇ ಮನೆರಹಿತರ ಪಟ್ಟಿಯನ್ನು ನೀಡಬೇಕು, ನೀಡದಿದ್ದರೆ ನೀವೇ ನೇರ ಹೊಣೆಗಾರರು ಎಂದು ಎಚ್ಚರಿಸಿದರು. ಪ್ರತಿಯೊಬ್ಬ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ಪಕ್ಷಗಳನ್ನು ಮರೆತು ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶಾಸಕರು ಪುನರುಚ್ಚರಿಸಿದರು.
ಕಾರ್ಯಾಗಾರದ ಉದ್ದೇಶ ಮತ್ತು ಅಧಿಕಾರಿಗಳ ಅಭಿಪ್ರಾಯ
ಇಒ ದೊಡ್ಡಸಿದ್ದಯ್ಯ ಮಾತನಾಡಿ, "ತಾಲ್ಲೂಕಿನ 27 ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾ ಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಇಂದು ನಮ್ಮ ಪಂಚಾಯಿತಿಗಳಲ್ಲಿ ಯಾವ ಯಾವ ರೀತಿಯ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ ಹಾಗೂ ಅವುಗಳು ಯಾವ ರೀತಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ" ಎಂದು ತಿಳಿಸಿದರು.
ತಾ.ಪಂ. ಗ್ರಾಮೀಣಾಭಿವೃದ್ಧಿ ಯೋಜನೆಗಳ ಸಹಾಯಕ ನಿರ್ದೇಶಕ ಇಂದ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, "ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡುವುದರೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಗ್ರಾಮಾಭಿವೃದ್ಧಿಯ ಬಗ್ಗೆ ಕಾರ್ಯಗಳನ್ನು ಮಾಡಬೇಕಾಗಿದೆ. ನಮ್ಮ ತಾಲ್ಲೂಕಿನಲ್ಲಿ ಈಗಾಗಲೇ ಉತ್ತಮವಾಗಿ ಕೆಲಸಗಳನ್ನು ಮಾಡಲಾಗುತ್ತಿದ್ದು, ಇದಕ್ಕೆ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳೊಂದಿಗೆ ನಮ್ಮ ಅಭಿವೃದ್ಧಿ ಅಧಿಕಾರಿಗಳು ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿ" ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯಿಂದ ಸಾರ್ವಜನಿಕರಿಗೆ ನೆರವು
ಪಶುಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ರೆ.ಮಾ.ನಾಗಭೂಷಣ್ ಮಾತನಾಡಿ, "ನಮ್ಮ ಇಲಾಖೆಯಿಂದ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದು, ಉತ್ತಮ ಸೇವೆಯನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಎರಡು ಸಂಚಾರಿ ಪಶುಚಿಕಿತ್ಸಾ ವಾಹನಗಳಿದ್ದು, 1962 ಸಂಖ್ಯೆಯ ಸಹಾಯವಾಣಿಯನ್ನು ನೀಡಲಾಗಿದೆ. ಇದರೊಂದಿಗೆ ಕೃತಕ ಗರ್ಭಧಾರಣೆಯೊಂದಿಗೆ ಉತ್ತಮ ರಾಸುಗಳ ತಳಿಯನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಗ್ರಾಮಗಳಲ್ಲಿ ಲಸಿಕಾ ಅಭಿಯಾನವನ್ನು ಮಾಡಲಾಗುತ್ತಿದೆ. ದೊಡ್ಡ ಜಾನುವಾರುಗಳು ಮರಣ ಹೊಂದಿದರೆ ಅನುಗ್ರಹ ಯೋಜನೆಯಡಿ 15 ಸಾವಿರ ರೂ. ಹಾಗೂ ಚಿಕ್ಕ ಕರುಗಳಾದರೆ ಅವುಗಳ ವಯಸ್ಸಿನ ಅಂತರದಲ್ಲಿ ಸಹಾಯಧನವನ್ನು ನೀಡಲಾಗುತ್ತಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ನೀವು ನಿಮ್ಮ ಗ್ರಾಮಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸಬಹುದು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಇಒ ಕಾಂತರಾಜು, ಕೃಷಿ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ಎಇಇ ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.