ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

HN Valley: ಹೆಚ್.ಎನ್.ವ್ಯಾಲಿ ಶುದ್ಧೀಕರಣಕ್ಕೆ ಆಗ್ರಹಿಸಿ ಸಚಿವರಿಗೆ ಕೊಳಚೆ ನೀರು ಕಳಿಸಿ ಆಕ್ರೋಶ ವ್ಯಕ್ತಪಡಿಸಿದ ಹರೀಶ್‌ರೆಡ್ಡಿ

ಕಂದವಾರ ಕೆರೆಕಟ್ಟೆಯ ಬಳಿ ಬಾಟಲಿಗಳಲ್ಲಿ ನೀರನ್ನು ತುಂಬಿ ಜನಪ್ರತಿನಿಧಿಗಳಿಗೆ ರವಾನಿಸುವ ವಿನೂತನ ಪ್ರತಿಭಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು  ಶ್ರೀಹರಿಕೃಷ್ಣ ಟ್ರಸ್ಟ್ ಅಧ್ಯಕ್ಷ ಆನೆಮಡುಗು ಹರೀಶ್ ರೆಡ್ಡಿ  ಅವರು ಮಾತನಾಡಿದರು.ಈ ವೇಳೆ ಕನ್ನಡ ಸಂಘ ಹಾಗೂ ರೈತ ಸಂಘದ ಕಾರ್ಯಕರ್ತರು  ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು

ಸಚಿವರಿಗೆ ಕೊಳಚೆ ನೀರು ಕಳಿಸಿ ಆಕ್ರೋಶ ವ್ಯಕ್ತಪಡಿಸಿದ ಹರೀಶ್‌ರೆಡ್ಡಿ

-

Ashok Nayak
Ashok Nayak Mar 8, 2026 8:50 AM

ಚಿಕ್ಕಬಳ್ಳಾಪುರ: ಬಜೆಟ್‌ನಲ್ಲಿ ಹೆಚ್.ಎನ್.ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿಡದೆ ನಿರ್ಲಕ್ಷ್ಯ ತೋರಿದ ಸರಕಾರದ ನಡೆಯನ್ನು ಖಂಡಿಸಿ ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಆಹಾರ ಮತ್ತು ಆರೋಗ್ಯ ಸಚಿವರಿಗೆ ಸಮಾಜ ಸೇವಕ ಹರೀಶ್‌ರೆಡ್ಡಿ ಕಂದವಾರ ಕೆರೆಯ ನೀರನ್ನು ಬಾಟಲಿಗೆ ತುಂಬಿಸಿ ಕಳಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ನಗರದ ಕಂದವಾರ ಕೆರೆಕಟ್ಟೆಯ ಬಳಿ ಬಾಟಲಿಗಳಲ್ಲಿ ನೀರನ್ನು ತುಂಬಿ ಜನಪ್ರತಿನಿಧಿಗಳಿಗೆ ರವಾನಿಸುವ ವಿನೂತನ ಪ್ರತಿಭಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮತ್ತು  ಶ್ರೀಹರಿಕೃಷ್ಣ ಟ್ರಸ್ಟ್ ಅಧ್ಯಕ್ಷ ಆನೆಮಡುಗು ಹರೀಶ್ ರೆಡ್ಡಿ  ಅವರು ಮಾತನಾಡಿದರು.ಈ ವೇಳೆ ಕನ್ನಡ ಸಂಘ ಹಾಗೂ ರೈತ ಸಂಘದ ಕಾರ್ಯಕರ್ತರು  ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹರೀಶ್ ರೆಡ್ಡಿ ಮಾತನಾಡಿ, ಹೆಬ್ಬಾಳ–ನಾಗವಾರ ಕೆರೆಯ  ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಈ ಹಿಂದೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅನುದಾನ ನೀಡದಿದ್ದರೆ ಆ ನೀರನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಆಹಾರ ಮತ್ತು ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಭಾಗವಾಗಿ ಕಳುಹಿಸಲಾಗುವುದು ಎಂದೂ ತಿಳಿಸಲಾಗಿತ್ತು.

ಇದನ್ನೂ ಓದಿ: Chikkaballapur city shutdown: ಮಾ.15ಕ್ಕೆ ಹೆಚ್.ಎನ್.ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ಚಿಕ್ಕಬಳ್ಳಾಪುರ ಬಂದ್ : ಸಂದೀಪ್‌ ರೆಡ್ಡಿ ಹೇಳಿಕೆ

ಅದರಂತೆ ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 4..48 ಲಕ್ಷಕೋಟಿಯಷ್ಟು ಬೃಹತ್ ಗಾತ್ರದ 17ನೇ ಬಜೆಟ್‌ನಲ್ಲಿ ಕೂಡ  ಹೆಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ನಯಾಪೈಸೆ ಅನುದಾನ ಘೋಷಣೆ ಮಾಡಿಲ್ಲ. ಹೀಗಾಗಿ ಮಾಧ್ಯಮದವರ ಸಾಕ್ಷಿಯಲ್ಲಿ ಕಂದವಾರ ಕೆರೆಯ ಕೊಳಚೆ ನೀರನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಹೇಳಿದಂತೆ ನಾನು ಮಾಡುತ್ತಿದ್ದೇನೆ ಹೆಚ್.ಎನ್.ವ್ಯಾಲಿ ನೀರನ್ನು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸೇರಿದಂತೆ ಸಂಬಂಧಪಟ್ಟ ಸಚಿವರಿಗೆ ಕಳುಹಿಸುತ್ತೇನೆ. ಆ ನೀರು ಉಪಯೋಗಕ್ಕೆ ಯೋಗ್ಯ ಎಂದು ಅವರು ತಿಳಿಸಿದರೆ ನಾವು ಕೂಡ ಅದನ್ನು ಬಳಸುತ್ತೇವೆ. ಇಲ್ಲವಾದರೆ ತಕ್ಷಣವೇ ಹೆಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

H N valley water

ಇನ್ನು ಈ ನೀರಿನಿಂದ ಯಾವುದೇ ರೀತಿಯ ಸಾವುನೋವು ಉಂಟಾದರೆ ಸಂಬಂಧಪಟ್ಟ ಜನಪ್ರತಿನಿಧಿಗಳೇ ನೇರ ಹೊಣೆ ಹೊರಬೇಕು ಎಂದು ಎಚ್ಚರಿಸಿದರು.

ಈ ನೀರಿನಿಂದ ಯಾರಿಗಾದರೂ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾದರೆ, ಅವರನ್ನು ನಿಮ್ಮ ಮನೆಗಳ ಮುಂದೆ ಬಿಡುತ್ತೇವೆ. ಆಗಲಾದರೂ ಈ ನೀರಿನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ನಿಮಗೆ ಅರಿವು ಬರಬಹುದು ಜ್ಞಾನೋದಯ ಆಗಬಹುದು ಎಂದು ಹೇಳಿದರು.

ಈ ಸರಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಮಾಯಕ ಜನರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ, ಕೂಡಲೇ ಹೆಚ್.ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ತಕ್ಷಣವೇ ಹೆಚ್.ಎನ್. ವ್ಯಾಲಿ ನೀರಿನ ಪೂರೈಕೆಯನ್ನು ನಿಲ್ಲಿಸಬೇಕು ಎಂದೂ ಒತ್ತಾಯಿಸಿದರು.

ಈ ವೇಳೆ ಕನ್ನಡ ರಕ್ಷಣಾ ವೇದಿಕೆಯ ದೇವರಾಜ್, ಮಹಾನಾಯಕ ಅಂಬೇಡ್ಕರ್ ಸೇನೆಯ ಹರೀಶ್,ರೈತಸಂಘದ ಕೃಷ್ಣಮೂರ್ತಿ, ತಿಪ್ಪೇನಹಳ್ಳಿ ಮಾಜಿ ಗ್ರಾಪಂ ಅಧ್ಯಕ್ಷ ಮುರಳಿ, ಮಾನವ ಹಕ್ಕುಗಳ ಸಂಘಟನೆಯ ಟಿ.ಆರ್.ಕೃಷ್ಣಪ್ಪ,ಕೇವರೆಡ್ಡಿ,ಯೂನಸ್, ಮಂಜುನಾಥ್‌ ಗೌಡ ಮತ್ತಿತರರು ಇದ್ದರು.