Sadhguru Shri Madhusudan Sai: ಜಾಗತಿಕ ನಾಗರಿಕರಿಗಾಗಿ ಒಂದು ಸಂವಿಧಾನ ರಚನೆಯಾಗಲಿ: ಸದ್ಗುರು ಶ್ರೀ ಮಧುಸೂದನ ಸಾಯಿ
ಯುದ್ಧದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಕೊಲ್ಲಲಾಗುತ್ತಿದೆ. ಆ ಸಹೋದರ-ಸಹೋದರಿ, ಆ ಮಗು ನಮಗೆ ಸೇರಿದ್ದು ಎಂದು ಭಾವಿಸಬೇಕು. ಯಾವ ದೇಶದ ಮೇಲೆ ಯಾವುದೇ ದೇಶ ಯುದ್ಧ ಮಾಡಿದರೂ ಅದನ್ನು ಪ್ರತಿಭಟಿಸ ಬೇಕು. ಆದರೆ ದುರಾದೃಷ್ಟವಶಾತ್ ಇದು ಆಗುತ್ತಿಲ್ಲ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಒಂದು ಜಗತ್ತು ಒಂದು ಕುಟುಂಬ ಮಿಷನ್ ಮೂಲಕ ಜಗತ್ತನ್ನು ಒಗ್ಗೂಡಿಸಲು ಹೊರಟಿದ್ದಾರೆ.

-

ಚಿಕ್ಕಬಳ್ಳಾಪುರ : ದೇವರ ದೃಷ್ಟಿಯಲ್ಲಿ ಮತ್ತು ಪ್ರಪಂಚದ ಎಲ್ಲ ಧರ್ಮಗಳ ಪ್ರಕಾರ ಎಲ್ಲರೂ ಸಮಾನರು. ಕಾನೂನಿನ ದೃಷ್ಟಿಯಲ್ಲೂ ಇದು ಇರಬೇಕು. ಹೀಗಾಗಿ ಇಡೀ ಜಗತ್ತಿಗೆ ಸೂಕ್ತವಾಗುವ ಒಂದು ಸಂವಿಧಾನವನ್ನು ರಚಿಸಬೇಕಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ( Sadhguru Shri Madhusudan Sai) ಅಭಿಪ್ರಾಯಪಟ್ಟರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ ೬೫ನೇ ದಿನವಾದ ಭಾನುವಾರ (ಅ ೧೯) ಆಶೀರ್ವಚನ ನೀಡಿದ ಸದ್ಗುರು, ಜಗತ್ತಿನ ಎಲ್ಲಾ ನಾಗರಿಕರು ಸಮಾನರು, ಯಾವುದೇ ತಾರತಮ್ಯ ಇರಬಾರದು. ರಾಷ್ಟ್ರಕವಿ ಕುವೆಂಪು ಅವರು ಒಂದೇ ಧರ್ಮ- ಅದು ವಿಶ್ವ ಧರ್ಮ, ಒಂದೇ ಮತ- ಅದು ವಿಶ್ವಮತ, ನಾವೆ ಲ್ಲರೂ ವಿಶ್ವ ಮಾನವರು ಎಂದಿದ್ದರು ಎಂದು ನೆನಪಿಸಿಕೊಂಡರು.
ಕುಪ್ಪಳ್ಳಿಯಲ್ಲಿ ದೊಡ್ಡದಾಗಿ ಬರೆಯಲಾಗಿರುವ ವಿಶ್ವಮಾನವ ಎಂಬುದನ್ನು ಪ್ರತಿಯೊಬ್ಬರೂ ಓದಲೇಬೇಕು. ಬಸವಣ್ಣನವರಿಂದ ಹಿಡಿದು ಕುವೆಂಪು ಅವರವರೆಗೆ ಮಹಾನ್ ನಾಯಕರ ಜಾಗತಿಕ ಸಂದೇಶವು ಇದೇ ಆಗಿದೆ ಎಂದು ವಿವರಿಸಿದರು.
ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಮಾತನಾಡಿ, ಯುದ್ಧದ ಹೆಸರಿನಲ್ಲಿ ಲಕ್ಷಾಂತರ ಜನರನ್ನು ಕೊಲ್ಲಲಾಗುತ್ತಿದೆ. ಆ ಸಹೋದರ-ಸಹೋದರಿ, ಆ ಮಗು ನಮಗೆ ಸೇರಿದ್ದು ಎಂದು ಭಾವಿಸಬೇಕು. ಯಾವ ದೇಶದ ಮೇಲೆ ಯಾವುದೇ ದೇಶ ಯುದ್ಧ ಮಾಡಿದರೂ ಅದನ್ನು ಪ್ರತಿಭಟಿಸ ಬೇಕು. ಆದರೆ ದುರಾದೃಷ್ಟವಶಾತ್ ಇದು ಆಗುತ್ತಿಲ್ಲ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಒಂದು ಜಗತ್ತು ಒಂದು ಕುಟುಂಬ ಮಿಷನ್ ಮೂಲಕ ಜಗತ್ತನ್ನು ಒಗ್ಗೂಡಿಸಲು ಹೊರಟಿದ್ದಾರೆ. ಇದೇ ನಿಜವಾದ ವಸುಧೈವ ಕುಟುಂಬಕಂ ಎಂದು ಹೇಳಿದರು.
ಡೇಟಾ ಪ್ಯಾಟರ್ನ್ಸ್ ಇಂಡಿಯಾ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್ ರಂಗರಾಜನ್, ಪೂರ್ಣಾವಧಿ ನಿರ್ದೇಶಕರಾದ ರೇಖಾ ಮೂರ್ತಿ ರಂಗರಾಜನ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಅಲ್ಲಿನ ಸಂಸತ್ತಿನ ಸದಸ್ಯ ಡಾ ನಿಕ್ಲಸ್ ಸ್ಯಾಮುವೇಲ್ ಗಗ್ಗರ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಸ್ವಿಟ್ಜರ್ಲ್ಯಾಂಡ್ ಪ್ರತಿನಿಧಿ ಸಾಯಿ ಚರಣ್ ಬಾಲಾಜಿ, ಅನಾ ಶಾಪರ್ ಅವರು ತಮ್ಮ ದೇಶ ಹಾಗೂ ಅಧ್ಯಾತ್ಮಿಕ ಪರಿವರ್ತನೆ ಬಗ್ಗೆ ಮಾಹಿತಿ ಹಂಚಿಕೊಂಡರು.