ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SMSIMSR Medical college: ಎಸ್‌ಎಂಎಸ್‌ಐಎಂಎಸ್‌ಆರ್‌ ಮಹತ್ವದ ಸಾಧನೆ: ಎಲ್ಲ ಸಾಮಾನ್ಯ ವಿಮಾ ಕಂಪನಿಗಳ ಸೇರ್ಪಡೆ ಸಾಧಿಸಿದ ಭಾರತದ ಮೊದಲ ಆಸ್ಪತ್ರೆ

Sathya Sai Grama: ಸಾಮಾನ್ಯ ವಿಮೆ ಸೌಲಭ್ಯ ಒದಗಿಸುವ ಎಲ್ಲ ವಿಮಾ ಕಂಪನಿಗಳಿಂದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಮಾನ್ಯತೆ ದೊರೆತಿದೆ. ಇದು ಆರೋಗ್ಯ ವಿಮೆ ಪಡೆದಿರುವ ಎಲ್ಲ ಭಾರತೀಯರಿಗೆ ಅಡೆತಡೆ ಇಲ್ಲದ ಮುಕ್ತ ಆರೋಗ್ಯ ಸೇವೆಯನ್ನು ಖಾತ್ರಿಪಡಿಸುವ ಮಹತ್ವದ ಉಪಕ್ರಮವಾಗಿದೆ.

ಆರೋಗ್ಯ ವ್ಯವಸ್ಥೆಯಲ್ಲಿ ಎಸ್‌ಎಂಎಸ್‌ಐಎಂಎಸ್‌ಆರ್‌ ಮಹತ್ವದ ಸಾಧನೆ

-

Prabhakara R Prabhakara R Oct 12, 2025 8:07 PM

ಮುದ್ದೇನಹಳ್ಳಿ, ಅ.12: ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (SMSIMSR) ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸಿದೆ. ಎಲ್ಲ ಸಾಮಾನ್ಯ ವಿಮಾ ಕಂಪನಿಗಳ ಸೇರ್ಪಣೆ ಸಾಧಿಸಿದ ಭಾರತದ ಮೊದಲ ಆಸ್ಪತ್ರೆ ಎನ್ನುವ ಶ್ರೇಯಕ್ಕೆ ಎಸ್‌ಎಂಎಸ್‌ಐಎಂಎಸ್‌ಆರ್ ಪಾತ್ರವಾಗಿದೆ. ಆಡಳಿತಾತ್ಮಕ ಸಮಸ್ಯೆಗಳು ಅಥವಾ ನೆಟ್‌ವರ್ಕ್ ಆಸ್ಪತ್ರೆಯ ಮಾನ್ಯತೆ ದೊರೆಯುವುದರಲ್ಲಿ ಆಗುವ ಸಮಸ್ಯೆಗಳು ಆರೋಗ್ಯ ವಿಮೆ ಪಡೆದಿರುವ ರೋಗಿಗಳನ್ನು ಎಂದಿಗೂ ಬಾಧಿಸುವುದಿಲ್ಲ. ವಿಮೆ ಮಾಡಲಾದ ರೋಗಿಗೆ ಚಿಕಿತ್ಸೆಯೂ ನಿರಾಕರಣೆಯಾಗುವುದಿಲ್ಲ ಎನ್ನುವುದನ್ನು ಈ ಒಪ್ಪಂದವು ಖಚಿತಪಡಿಸಿಕೊಳ್ಳುತ್ತದೆ.

ಎಸ್‌ಎಂಎಸ್‌ಐಎಂಎಸ್‌ಆರ್ ಮತ್ತು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (GIC) ಪ್ರತಿನಿಧಿಗಳು ಭಾನುವಾರ (ಅ 12) ಈ ಕುರಿತು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಎಲ್ಲರನ್ನೂ ಒಳಗೊಳ್ಳುವ, ಎಲ್ಲರಿಗೂ ಲಭ್ಯವಾಗುವ ಆರೋಗ್ಯ ಸೇವೆಯ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿ ಇದು ಮಹತ್ವದ ವಿದ್ಯಮಾನವಾಗಿದೆ.

SMSIMSR (1)

ಎಸ್‌ಎಂಎಸ್‌ಐಎಂಎಸ್‌ಆರ್‌ನ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ವಾಸುದೇವ ಉಪಾಧ್ಯಾಯ ಕೆ.ಎಸ್. ಮತ್ತು ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್‌ನ ಎಂಡಿ, ಸಿಇಒ ಮತ್ತು ಜಿಐಸಿ ಅಧ್ಯಕ್ಷ ಡಾ ತಪನ್ ಸಿಂಘೆಲ್ ಅವರು ಈ ಒಡಂಬಡಿಕೆಯ ದಾಖಲೆಗೆ ಸಹಿ ಹಾಕಿದರು. ಕರ್ನಾಟಕದ ಸತ್ಯ ಸಾಯಿ ಗ್ರಾಮದಲ್ಲಿ ನಡೆದ ಈ ಬೆಳವಣಿಗೆಯಲ್ಲಿ ಸಾಮಾನ್ಯ ವಿಮೆ ಹಾಗೂ ಆರೋಗ್ಯ ಸೇವಾ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಒಡಂಬಡಿಕೆ ದಾಖಲೆಯನ್ನೂ ವಿನಿಮಯ ಮಾಡಿಕೊಳ್ಳಲಾಯಿತು.

ಈ ಮಹತ್ವದ ಉಪಕ್ರಮವು ಆರೋಗ್ಯ ವಿಮಾ ಪಾಲಿಸಿದಾರರಿಗೆ ಆರೋಗ್ಯ ಸೇವೆ ಸಿಗುವಲ್ಲಿ ಇರುವ ಅಡಚಣೆಯನ್ನು ನಿವಾರಿಸುತ್ತದೆ. ಕೆಲವೊಂದಿಷ್ಟು ಆಸ್ಪತ್ರೆಗಳೊಂದಿಗಷ್ಟೇ ವಿಮಾ ಕಂಪನಿಗಳು ಸಹಭಾಗಿತ್ವದ ಒಪ್ಪಂದ ಮಾಡಿಕೊಂಡಿರುತ್ತವೆ. ಇಂಥ ಒಪ್ಪಂದಗಳಿಂದ ದೂರ ಇರುವ ಆಸ್ಪತ್ರೆಗಳಲ್ಲಿ ಪಾಲಿಸಿದಾರರಿಗೆ ಅನಾನುಕೂಲವಾಗುತ್ತಿತ್ತು. ಇದೀಗ ನಡೆದಿರುವ ಈ ಬೆಳವಣಿಗೆಗಳು ಈ ಸಮಸ್ಯೆಯನ್ನು ಪರಿಹರಿಸಿದೆ. ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಲ್ಲ ವಿಮಾ ಕಂಪನಿಗಳ ಆರೋಗ್ಯ ವಿಮಾ ಪಾಲಿಸಿದಾರರಿಗೂ ಸೇವೆ ಸಿಗಲಿದೆ.

ಆಯುಷ್ಮಾನ್ ಭಾರತ್ - PMJAY, ಆರೋಗ್ಯ ಕರ್ನಾಟಕ - ABArK, ಯಶಸ್ವಿನಿ ಮತ್ತು ಇತರ ಸರ್ಕಾರಿ ಯೋಜನೆಗಳೊಂದಿಗೆ ಈಗಾಗಲೇ ಎಸ್‌ಎಂಎಸ್‌ಐಎಂಎಸ್‌ಆರ್ ಸಹಭಾಗಿತ್ವ ಹೊಂದಿದೆ. ಸಮಾಜದಲ್ಲಿ ಹಿಂದುಳಿದವರು, ಬಡವರು ಸೇರಿದಂತೆ ಎಲ್ಲರಿಗೂ ನೈತಿಕ ಮತ್ತು ಕೈಗೆಟುಕುವ ವೈದ್ಯಕೀಯ ಸೇವೆಯನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಇದು ತೋರಿಸುತ್ತದೆ.

ಈ ಉಪಕ್ರಮದ ವಿವರ ನೀಡಿದ ಡಾ ತಪನ್ ಸಿಂಘೆಲ್, "ಭಾರತದ ವಿಮೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಇದು ಒಂದು ನಿರ್ಣಾಯಕ ಕ್ಷಣವಾಗಿದೆ. ನಾಗರಿಕರಿಗೆ ಆದ್ಯತೆಯ ಮೇಲೆ ಸೇವೆ ಸಿಗುವಂತೆ ಮಾಡಲು ಎರಡೂ ಸಂಸ್ಥೆಗಳನ್ನು ಒಗ್ಗೂಡಿಸುತ್ತದೆ" ಎಂದರು. ಈ ಮಾದರಿಯು ದೇಶಾದ್ಯಂತ ಆರೋಗ್ಯ ವಿಮೆಯನ್ನು ನಿಜವಾದ ಅರ್ಥದಲ್ಲಿ ಸಾರ್ವತ್ರಿಕಗೊಳಿಸಲು ನೀಲನಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ಎಂಎಸ್‌ಐಎಂಎಸ್‌ಆರ್ ಸಂಸ್ಥಾಪಕ ಮತ್ತು ಸಿಇಒ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿ, "ನಿಜವಾದ ಸಾಮಾಜಿಕ ಏಕತೆಗೆ ಅಡೆತಡೆಯಿಲ್ಲದ ಆರೋಗ್ಯ ಸೇವೆಯು ಅಡಿಪಾಯವನ್ನು ಹಾಕುತ್ತದೆ. ನಮ್ಮ ಸಂಸ್ಥೆಯಲ್ಲಿರುವ ಎಲ್ಲ ರೋಗಿಗಳು ನಮ್ಮದೇ ಕುಟುಂಬದ ಭಾಗ. ಏಕೆಂದರೆ ನಮಗೆ ಇಡೀ ಜಗತ್ತೇ ಒಂದು ಕುಟುಂಬ - ವಸುಧೈವ ಕುಟುಂಬಕಂ’ ಎಂದರು.

ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ಸಮಾನ ಆರೋಗ್ಯ ರಕ್ಷಣೆಯತ್ತ ಭಾರತದ ಮುನ್ನಡೆಯನ್ನು ಈ ಸಹಯೋಗವು ಸಾರಿ ಹೇಳುತ್ತದೆ. ಖಾಸಗಿ ವಿಮಾ ಕಂಪನಿಗಳ ಕಾರ್ಯವಿಧಾನಗಳು ಮತ್ತು ಸಾಮಾಜಿಕ ಆರೋಗ್ಯ ರಕ್ಷಣೆಯ ಪ್ರಯತ್ನಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಎಸ್‌ಎಂಎಸ್‌ಐಎಂಎಸ್‌ಆರ್ ಸಹಾನುಭೂತಿ ಮತ್ತು ದಕ್ಷತೆಯು ಒಂದೇ ವ್ಯವಸ್ಥೆಯಲ್ಲಿ ಹೇಗೆ ಜೊತೆಗೂಡಬಹುದು ಎನ್ನುವುದಕ್ಕೆ ಒಂದು ಮಾದರಿಯನ್ನು ನಿರ್ಮಿಸಿಕೊಟ್ಟಿದೆ.

ಈ ಸುದ್ದಿಯನ್ನೂ ಓದಿ | Sathya Sai Grama: ಆರೋಗ್ಯ ಕ್ಷೇತ್ರದಲ್ಲಿ ಎಐ ಕ್ರಾಂತಿ ಸ್ವಾಗತಿಸಲು ಸಜ್ಜಾದ ಸತ್ಯ ಸಾಯಿ ಸಂಸ್ಥೆಗಳು

ಎಲ್ಲರಿಗೂ ಆರೋಗ್ಯ ಸೇವೆ ಸುಲಭ ಲಭ್ಯವಾಗುವಂತೆ ಮಾಡುವ ಉಪಕ್ರಮಕ್ಕೆ ಬೆಂಬಲ ನೀಡುತ್ತಿರುವ ಪ್ರಮುಖ ವಿಮಾ ಕಂಪನಿಗಳ ಹಿರಿಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.