Chikkaballapur News: ಇದು ಸಾಧನಾ ಸಮಾವೇಶ ಅಲ್ಲ ವೇದನಾ ಸಮಾವೇಶ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 'ಸಾಧನಾ ಸಮಾವೇಶ'ವನ್ನು ಟೀಕಿಸಿದ ಛಲವಾದಿ ನಾರಾಯಣಸ್ವಾಮಿ ಇದು ಸಾಧನಾ ಸಮಾವೇಶವಲ್ಲ ವೇದನಾ ಸಮಾವೇಶವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
-
1 ಗುಂಡಿ ಮುಚ್ಚಲು 1 ಲಕ್ಷ ವ್ಯಯಿಸಿರುವ ಕಾಂಗ್ರೆಸ್ನದು ಶೇ.80ರಷ್ಟು ಲೂಟಿಕೋರ ಸರಕಾರ
ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ 'ಸಾಧನಾ ಸಮಾವೇಶ'ವನ್ನು ಟೀಕಿಸಿದ ಛಲವಾದಿ ನಾರಾಯಣಸ್ವಾಮಿ ಇದು ಸಾಧನಾ ಸಮಾವೇಶವಲ್ಲ ವೇದನಾ ಸಮಾವೇಶ ವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ 3 ವರ್ಷದ ಸಾಧನಾ ಸಮಾವೇಶವನ್ನು ತೀವ್ರವಾಗಿ ಟೀಕಿಸಿದ ಅವರು ಇದು 'ಸಾಧನೆಯ ಸಮಾವೇಶ'ವಲ್ಲ, ಬದಲಿಗೆ ಬಡವರಿಗೆ ಮತ್ತು ಜನಸಾಮಾನ್ಯರಿಗೆ ಮಾಡಿದ ಮೋಸವನ್ನು ಬಿಂಬಿಸುವ 'ವೇದನೆಯ ಸಮಾವೇಶ' ಎಂದು ಜರಿದರು.
ತುಮಕೂರಿನಲ್ಲಿ ನಡೆಸುತ್ತಿರುವುದು ಸಾಧನಾ ಸಮಾವೇಶ ಅಲ್ಲ ನಾಚಿಕೆಗೇಡಿನ ಸಮಾವೇಶ. ಇವರಿಗೆ ಸಾರ್ವಜನಿಕ ತೆರಿಗೆ ಹಣದ ಅಪವ್ಯಯವಾದ ಸಾಧನೆಯಾದರೆ ರಾಜ್ಯದ ಜನತೆಗೆ ಬದುಕ ಲೂ ಆಗದಂತಹ ವೇದನೆ ಆಗಿದೆ ಎಂದು ದೂರಿದರು.
ಶೇ.80ರಷ್ಟು ಲೂಟಿಕೋರ ಸರಕಾರ!!
ಕಾಂಗ್ರೆಸ್ ಸರ್ಕಾರದ 3 ವರ್ಷಗಳ ಸಾಧನೆ ಶೂನ್ಯ ಎಂದು ಆರೋಪಿಸಿದ ಛಲವಾದಿ ನಾರಾಯಣ ಸ್ವಾಮಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಕಳೆದ ವರ್ಷ ಒಂದು ಗುಂಡಿ ಮುಚ್ಚಲು ಬೆಂಗಳೂರಿನಲ್ಲಿ 4700 ರೂಪಾಯಿ ಖರ್ಚು ಮಾಡಿದ್ದರೆ, ಪ್ರಸಕ್ತ ಸಾಲಿನಲ್ಲಿ 1 ಲಕ್ಷ ರೂಪಾಯಿ ವ್ಯಯ ಮಾಡುವ ಮೂಲಕ ಶೇ.80ರಷ್ಟು ಭ್ರಷ್ಟಾಚಾರದಲ್ಲಿ ಮುಳು ಗಿದೆ ಎಂದು ಆಡಳಿತ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಎಲ್ಲಾ ರಂಗಗಳಲ್ಲೂ ವಿಫಲ!!
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಕೃಷಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಮತ್ತು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬರ ಹಾಗೂ ಪ್ರವಾಹ ಪರಿಸ್ಥಿತಿಯಲ್ಲಿ ರೈತರಿಗೆ ಸರಿಯಾದ ಬೆಂಬಲ ಸಿಗದೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣಗಳನ್ನು ಪ್ರಸ್ತಾಪಿಸಿದ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ದ್ದಾರೆ. ಅದೇನೆಂದರೆ ಕಳ್ಳತನ ಮಾಡಿ ಮಾಲು ವಾಪಸ್ಸು ಮಾಡಿದರೆ ಕಳ್ಳ ಅಲ್ಲ ಎಂಬತಾಗಿದೆ. 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಯುವಕರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಆಪಾದಿಸಿದರು.
ಆರ್ಥಿಕ ದಿವಾಳಿತನ: ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಲಾ ಗಿದ್ದು, ಅಭಿವೃದ್ಧಿ ಶೂನ್ಯ ಬಜೆಟ್ನಿಂದಾಗಿ ರಾಜ್ಯವು ತೀವ್ರ ಸಾಲದ ಸುಳಿಗೆ ಸಿಲುಕಿದೆ. ರಾಜ್ಯದ ಸಾಲದ ಹೊರೆ ಹೆಚ್ಚಾಗಿರುವುದರಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.
ದಲಿತರಿಗೆ ದ್ರೋಹ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ 42 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಇದರಲ್ಲಿ 21 ಸಾವಿರ ಕೋಟಿ ಬೇರೆ ಬೇರೆ ಇಲಾಖೆಗಳಿಗೆ ಹಂಚಿಕೆ ಮಾಡುತ್ತಾರೆ. ಉಳಿದ 21 ಸಾವಿರದಲ್ಲಿ 14 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಮತ್ತು ಇತರ ಉದ್ದೇಶಗಳಿಗೆ ದುರ್ವಿನಿಯೋಗ ಮಾಡುತ್ತಾ ವಾಸ್ತವದಲ್ಲಿ ದಲಿತ ಸಮುದಾಯಕ್ಕೆ ಐತಿಹಾಸಿಕ ದ್ರೋಹ ಎಸಗಲಾಗುತ್ತಿದೆ ಎಂದು ಕಿಡಿಕಾರಿದರು.
ರಾಜತಾಂತ್ರಿಕ ನಡೆ
ಯುದ್ಧದ ಸಂದರ್ಭದಲ್ಲಿಯೂ ಭಾರತಕ್ಕೆ ತೈಲ ಬರುತ್ತಿದೆ ಎಂದರೆ ಇದಕ್ಕೆ ಕಾರಣ ಪ್ರಧಾನಿ ಅವರ ರಾಜತಾಂತ್ರಿಕ ಸಂಬಂಧವೇ ಆಗಿದೆ.ಜನಸಾಮಾನ್ಯರ ಮೇಲಿನ ಹೋರೆ ತಪ್ಪಿಸಲು ಕೇಂದ್ರವು 10 ರೂಪಾಯಿ ಸೆಸ್ ಕಡಿಮೆ ಮಾಡಿದ್ದಾರೆ.ರಾಜ್ಯ ಸರ್ಕಾರ ಲೀಟರ್ ಮೇಲೆ 30 ರೂಪಾಯಿ ಸೇವಾ ಶುಲ್ಕ ಪಡೆಯುತ್ತಿದ್ದಾರೆ. ಕೇಂದ್ರದತ್ತ ಬೊಟ್ಟು ಮಾಡುವ ಕಾಂಗ್ರೆಸ್ ಮುಖಂಡರು ಯಾಕೆ ಕಡಿಮೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಿತ್ತೊಗೆಯಬೇಕು?
ಪೆಟ್ರೋಲ್ 3 ರೂಪಾಯಿ ಹೆಚ್ಚಳ ಮಾಡಿದಾಕ್ಷಣ ಕಾಂಗ್ರೆಸ್ ಮುಖಂಡರು ಹೋರಾಟ ಮಾಡು ತ್ತಿದ್ದಾರೆ. ಮೋದಿ ಕಡಿಮೆ ಮಾಡಬೇಕು ಕಾಂಗ್ರೆಸ್ ಹೆಚ್ಚು ಮಾಡಬೇಕಾ? ನಿಮ್ಮ ಸಾಧನೆ ಶೂನ್ಯ,೩ ವರ್ಷಗಳಲ್ಲಿ ನಯಪೈಸೆ ಉಪಕಾರ ಆಗಿಲ್ಲ, ಲೂಟಿ ತಪ್ಪಿಲ್ಲ. ಇದನ್ನು ಜನ ಕೇಳಿದರೆ ಉತ್ತರ ಕೊಡಲ್ಲ,ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದರು.
ಕಾಂಗ್ರೆಸ್ ನಾಶಕ್ಕೆ ರಾಹುಲ್ ಸಾಕು!!
ದೇಶದಲ್ಲಿ ಕಾಂಗ್ರೆಸ್ ಮುಗಿಸಲು ಅದರ ನೇತಾರ ರಾಹುಲ್ ಗಾಂಧಿ ಸಾಕು.ಕಾಂಗ್ರೆಸ್ ಕಟ್ಟಿದ್ದು ಎಂ.ಒ.ಹ್ಯೂA ಎಂಬ ಬ್ರಿಟಿಷ್.ಆದರೆ ಕಾಂಗ್ರೆಸ್ ಕಟ್ಟಿದ್ದು ನಾವು ಎಂದು ಗಾಂಧಿ ಮನೆತನ ಹಕ್ಕು ಚಲಾಯಿಸುತ್ತಿದೆ. ವಾಸ್ತವದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿಲ್ಲ. ಸ್ವಾತಂತ್ರ್ಯ ಎಂಬುದು ಕಾಂಗ್ರೆಸ್ನದ್ದು ಸ್ವಂತ ಅಲ್ಲ. ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ನೆಲಸಮ ಆಗಲಿದೆ. ಇತ್ತೀಚೆಗೆ ಕೆರಳದಲ್ಲಿ ಅಧಿಕಾರಕ್ಕೆ ಬಂದಿರುವುದು ಕಿಚಡಿ ಸರ್ಕಾರ.ತೆಲಂಗಾಣ, ಹಿಮಾಚಲ ಪ್ರದೇಶ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಇದ್ದು ಶೀಘ್ರವೇ ಈ ಮೂರು ರಾಜ್ಯಗಳಲ್ಲಿ ನೆಲಸಮ ಆಗಲಿದೆ ಎಂದು ಭವಿಷ್ಯ ನುಡಿದರು.
ನಮ್ಮದು ಶೇ.40 ಸರಕಾರ ಎಂಬ ಆರೋಪ.ಇವರದ್ದು 80 ಪರ್ಸೆಂಟ್ ಸರ್ಕಾರ
ನಿರುದ್ಯೋಗ ತಾಂಡವ ಆಡುತ್ತಿದ್ದರೂ 56432 ಹುದ್ದೆ ತುಂಬುವ ಬಗ್ಗೆ ಕ್ರಮ ವಹಿಸಿಲ್ಲ. ಒಳ ಮೀಸಲಾತಿಯನ್ನು ಗುಡ್ಡೆ ಮಾಂಸದ ರೀತಿ ಹಂಚಿ ಯಾರು ಯಾರ ಬಗ್ಗೆಯಾದರೂ ಮಾತನಾಡ ಬಹುದು ಕಿಡಿಕಾರಬಹುದು ಎಂಬಂತೆ ಮಾಡಿದ್ದಾರೆ. ಹೀಗಾಗಿ ಬಿಜೆಪಿ ದಲಿತ ವಿರೋಧಿ ಎಂಬುದು ಸುಳ್ಳು. ಇದು ನಿಜವೇ ಆಗಿದ್ದಲ್ಲಿ 12 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಮೀಸಲಾತಿ ತೆಗೀಲಿಲ್ಲ. ಬದಲಿಗೆ ಅಂಬೇಡ್ಕರ್ಗೆ ಗೌರವ ಸಲ್ಲಿಸುತ್ತಾ ಸಂವಿಧಾನ ರಕ್ಷಣೆ ಮಾಡುತ್ತಾ ಬರಲಾಗಿದೆ.ಕಾಂಗ್ರೇಸ್ ಆದಿಯಿಂದಲೂ ಅಂಬೇಡ್ಕರ್ ಅವರನ್ನು ಸಹಿಸುತ್ತಿರಲಿಲ್ಲ.
ಇದೇ ಕಾರಣಕ್ಕೆ 1942ರಲ್ಲಿ ಅವರನ್ನು ಸೋಲಿಸಿದೆ. ದಲಿತರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದಲ್ಲಿ ದಲಿತರು ಕೂಡ ಕಾಂಗ್ರೆಸ್ನಂತೆ ನೆಲಕಚ್ಚಲಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಎಸ್ಸಿ ವರ್ಗಕ್ಕೆ ಶೇ.15 ರಿಂದ ಶೇ.17 ಎಸ್ಟಿ ವರ್ಗಕ್ಕೆ ಶೇ.3 ರಿಂದ 7ಕ್ಕೆ ಹೆಚ್ಚಿಸ ಲಾಗಿತ್ತು. ಆದರೆ ಕಾಂಗ್ರೆಸ್ ಸರಕಾರ 17ಕ್ಕೆ ಬದಲಿಗೆ 15 ಮಾಡಿದೆ. ಎಸ್ಟಿ 7 ಇದ್ದಿದ್ದು 3 ಮಾಡಿದೆ ಎಂದು ದೂರಿದರು.
ಧರ್ಮರಾಜಕಾರಣ ಬೇಡ!!
ಓದುವ ಮಕ್ಕಳಲ್ಲಿ ಧರ್ಮದ ವಿಷ ಬೀಜ ಬಿತ್ತಬಾರದು ಎಂದು ಹಿಜಾಬ್ ಸೇರಿ ಧಾರ್ಮಿಕ ವಸ್ತ್ರ ಗಳನ್ನು ಧರಿಸುವುದನ್ನು ತೆಗೆದಿದ್ದೆವು. ಆದರೆ ಕಾಂಗ್ರೆಸ್ ಮತ್ತೆ ಪುನಃ ಪ್ರತಿಷ್ಠಾಪನೆ ಮಾಡಿದೆ. ಹಿಜಾಬ್ ಧರ್ಮದ ಗುರುತು. ಕೇಸರಿ ಶಾಲು ಬೇಡ ಎನ್ನುವವರು ಹಿಜಾಬ್ ತೆಗೀಬೇಕು. ರಾಜ್ಯವನ್ನು ಸುಭದ್ರವಾಗಿ ಮಾಡಬೇಕಾದವರು ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಕಾಂಗ್ರೆಸ್ ಅನ್ನು ರಾಜ್ಯ ಅಲ್ಲ ದೇಶದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಛಲವಾದಿ ನಾರಾಯಣಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ, ಕೊಂಡೇನಹಳ್ಳಿ ಮುರಳಿ, ಚಿಕ್ಕಕಾಡಿಗೇನಹಳ್ಳಿ ಕೃಷ್ಣಮೂರ್ತಿ, ತೇಜೇಂದ್ರ ಬಾಬು, ಲಕ್ಷ್ಮಿಪತಿ, ಅಶೋಕ್, ಬಾಲಕುಂಟಳ್ಳಿ ಗಂಗಾಧರ್, ಮಧುಚಂದ್ರ ಮತ್ತಿತರರು ಇದ್ದರು.