ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು: ಜಿಲ್ಲಾಧಿಕಾರಿ ಜಿ.ಪ್ರಭು

ಪುಟ್ಬಾಲ್, ಖೋ-ಖೋ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡೆಗಳಿಗೆ ಕ್ರೀಡಾಂಗಣಗಳೇ ಜಿಲ್ಲಾ ಕೇಂದ್ರ ದಲ್ಲಿ ಇಲ್ಲ. ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಥ್ರೋಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳನ್ನು ಆಡಲು ಅಗತ್ಯ ಮೂಲ ಸೌಕರ್ಯಗಳು ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ಕೊರತೆಯಲ್ಲಿರುವುದು ಗಮನಕ್ಕೆ ಬಂದಿದೆ.

ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ಜಿಲ್ಲೆಯಲ್ಲಿ ಆಗಬೇಕು

-

Ashok Nayak
Ashok Nayak Jan 20, 2026 12:32 AM

ಚಿಕ್ಕಬಳ್ಳಾಪುರ : ಜಾತಿ, ಮತ, ಭಾಷೆ, ಪ್ರಾದೇಶಿಕತೆ ಹೀಗೆ ಎಲ್ಲ ಎಲ್ಲೆಗಳನ್ನು ಮೀರಿ ಎಲ್ಲರನ್ನು ಒಂದಾಗಿಸುವ ಹಾಗೂ ಎಲ್ಲರನ್ನು ಒಟ್ಟಿಗೆ ಬೆಸೆಯುವ ಶಕ್ತಿ ಇರೋದು ಕ್ರೀಡೆಗೆ ಮಾತ್ರ, ಅಂತಹ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಹ ಕಾರ್ಯಗಳು ಅತ್ಯಗತ್ಯವಾಗಿ ಜಿಲ್ಲೆಯಲ್ಲಿ ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ “ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಪಟುಗಳೊಂದಿಗೆ ಸಭೆ ನಡೆಸಿ ಅಹವಾಲು ಹಾಗೂ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.

ಪುಟ್ಬಾಲ್, ಖೋ-ಖೋ ಸೇರಿದಂತೆ ಇನ್ನಿತರ ಪ್ರಮುಖ ಕ್ರೀಡೆಗಳಿಗೆ ಕ್ರೀಡಾಂಗಣಗಳೇ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ವಾಲಿಬಾಲ್, ಬಾಸ್ಕೆಟ್ ಬಾಲ್, ಕಬಡ್ಡಿ, ಥ್ರೋಬಾಲ್ ಹಾಗೂ ಅಥ್ಲೇಟಿಕ್ಸ್ ಕ್ರೀಡೆಗಳನ್ನು ಆಡಲು ಅಗತ್ಯ ಮೂಲ ಸೌಕರ್ಯಗಳು ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿಯೂ ಕೊರತೆಯಲ್ಲಿರುವುದು ಗಮನಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಯಾವೆಲ್ಲ ಉಪಕ್ರಮಗಳನ್ನು ಕೈಗೊಂಡರೆ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬಹುದು ಎನ್ನುವ ಬಗ್ಗೆ ಕ್ರೀಡಾ ಅಭಿಮಾನಿಗಳು, ಕ್ರೀಡಾ ಪಟುಗಳು, ಕ್ರೀಡಾ ತರಬೇತುದಾರರು ತಿಳಿಸಬೇಕು ಎಂದು ಮನವಿ ಮಾಡಿದರು.  

ಇದನ್ನೂ ಓದಿ: Chimul Election: ಚೀಮುಲ್ ಚುನಾವಣೆ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಚಟುವಟಿಕೆ ಗರಿಗೆದರಿಕೆ

ಇದೇ ರೀತಿ, ಸರ್ಕಾರೇತರ ಸಂಸ್ಥೆಗಳಿಗೆ ಏನೆಲ್ಲಾ ಅಗತ್ಯತೆಗಳು ಬೇಕು, ಕ್ರೀಡಾಂಗಣಕ್ಕೆ ಎಷ್ಟು ಸ್ಥಳ ಬೇಕು ಮತ್ತು ತಮ್ಮ ಬೇಡಿಕೆಗಳು ಏನಿದೆ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಎರಡು ದಿನಗಳ ಒಳಗಾಗಿ ನೀಡುವಂತೆ ವಿವಿಧ ಕ್ರೀಡೆಗಳ ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ಮನವಿಗಳನ್ನು ಸಮರ್ಪಕವಾಗಿ ನೀಡಿದಲ್ಲಿ ನೈಜ ಕ್ರೀಡೆಗಳಿಗೆ ಉತ್ತೇಜನ ನೀಡುವಂತಹ ಕೆಲಸ ವನ್ನು ಜಿಲ್ಲಾಡಳಿತ ಪ್ರಾಮಾಣಿಕವಾಗಿ ಮಾಡಲಿದೆ. ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು, ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಿಗೆ ಅನುದಾನವನ್ನು ಒದಗಿಸಲು ಅವಕಾಶಗಳಿವೆ. ಆದ್ದರಿಂದ ನಿಮ್ಮ ಅಗತ್ಯಗಳು ಏನಿವೆ, ಎಷ್ಟು ಅನುದಾನ ಬೇಕು. ಕ್ರೀಡಾಂಗಣಗಳಿಗೆ ಜಾಗ ಎಷ್ಟು ಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಲ್ಲಿ ಅದಕ್ಕೆ ಪೂರಕವಾಗಿ ಅಗತ್ಯ ಕ್ರಮ ವಹಿಸಬಹುದು. ಅನುದಾನದ ಕೊರತೆ ಆದಲ್ಲಿ ಸಿ.ಎಸ್.ಆರ್ ನಿಧಿಯಿಂದ ಅನುದಾನವನ್ನು ತರಲು ಪ್ರಯತ್ನ ಮಾಡಬಹುದು. ಆದ್ದರಿಂದ ಕ್ರೀಡಾ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿರುವ ತಾವೆಲ್ಲರೂ ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸ ಬೇಕು ಈ ಮೂಲಕ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಠಿ ಸೋಣ ಎಂದು ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ೧೦ ಕೋಟಿ, ಚಿಂತಾಮಣಿ ನಗರದ ಕ್ರೀಡಾಂಗಣ ಅಭಿವೃದ್ಧಿಗೆ 9.25 ಕೋಟಿ ಹಾಗೂ ೭ ಕೋಟಿಯಲ್ಲಿ ಚಿಂತಾಮಣಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಅನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವೇಳೆ ಯಾವ ಯಾವ ಕ್ರೀಡೆಗಳನ್ನು ಆಡಲು ಏನೆಲ್ಲಾ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಬೇಕು. ಆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆ ಆದರೂ ಸಮರ್ಪಕವಾಗಿ ವಿನಿಯೋಗ ಆಗಬೇಕು. ಅನಗತ್ಯ ವಿಳಂಬ ಆದಲ್ಲಿ ಸಹಿಸುವ ಪ್ರಶ್ನೆಯೇ ಇಲ್ಲ ಅಂತಹ ಸ್ಥಿತಿಗೆ ಜಿಲ್ಲೆಯಲ್ಲಿ ಅವಕಾಶ ನೀಡಬಾರದು. ಸರ್ಕಾರೇತರ ಕ್ರೀಡಾ ಸಂಸ್ಥೆಗಳ ಮನವಿಗಳು, ಅಹವಾಲು ಗಳನ್ನು ಹಾಗೂ ಬೇಡಿಕೆಗಳನ್ನು ಸಂಗ್ರಹಿಸಿ ಪರಿಶೀಲಿಸಬೇಕು. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಏನೆಲ್ಲ ಆಡಳಿತಾತ್ಮಕ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಬೇಕು ಅದೆಲ್ಲವನ್ನು ಮಾಡಲು ಕಡತಗಳನ್ನು ತ್ವರಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಂಡಿಸಲು ಕಟ್ಟುನಿಟ್ಟಿನ ಸೂಚನೆಯನ್ನು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.

ಸಭೆಯಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಸರ್ಕಾರೇತರ ಕ್ರೀಡಾ ಸಂಸ್ಥೆ ಗಳ ಮುಖ್ಯಸ್ಥರು, ತರಬೇತುದಾರರು, ಕ್ರೀಡಾಸಕ್ತರು, ಕ್ರೀಡಾ ಪಟುಗಳು ಇನ್ನೂ ಮುಂತಾದವರು ಇದ್ದರು.