ಶೃಂಗೇರಿ ಶಾಸಕರಾಗಿ ಡಿ ಎನ್ ಜೀವರಾಜ್ ಇಂದು ಪ್ರಮಾಣವಚನ
ಶೃಂಗೇರಿ ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಭಾಧ್ಯಕ್ಷ ಯುಟಿ ಖಾದರ್ ಸಮಯ ನಿಗದಿಪಡಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸ್ವೀಕರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿತ್ತು.
ಸಂಗ್ರಹ ಚಿತ್ರ -
ಚಿಕ್ಕಮಗಳೂರು: ಶೃಂಗೇರಿ ( Sringeri) ವಿಧಾನ ಸಭಾ ಕ್ಷೇತ್ರದ ನೂತನ ಶಾಸಕರಾಗಿ ಡಿ ಎನ್ ಜೀವರಾಜ್ (DN Jeevaraj) ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಭಾಧ್ಯಕ್ಷ ಯುಟಿ ಖಾದರ್ ಸಮಯ ನಿಗದಿಪಡಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸ್ವೀಕರ್ ವಿರುದ್ಧ ಬಿಜೆಪಿ ವಿಳಂಬ ಆರೋಪ ಮಾಡಿತ್ತು. ಬಿಜೆಪಿ ಪ್ರತಿನಿಧಿ ಮಂಡಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸ್ಪೀಕರ್ ಲಭ್ಯವಿಲ್ಲದಿದ್ದರೆ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಮನವಿ ಮಾಡಿದ್ದರು. ಇದೀಗ ಸ್ವೀಕರ್ ಖಾದರ್ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಮಯ ಗೊತ್ತು ಮಾಡಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಡಿ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಸೋತಿದ್ದ ಜೀವರಾಜ್ ಅಂಚೆ ಮತಗಳನ್ನು ಮರುಎಣಿಕೆ ಮಾಡಬೇಕೆಂದು ಕೋರ್ಟ್ ಮೊರೆಹೋಗಿದ್ದರು. ಕಳೆದ ವಾರಾಂತ್ಯ ಹೈಕೋರ್ಟ್ ಆದೇಶದಂತೆ ನಡೆದ ಮರುಎಣಿಕೆ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು ಪಡೆದಿದ್ದ 569 ಅಂಚೆ ಮತಗಳಲ್ಲಿ 318 ಮತಗಳು ಅಸಿಂಧು ಎಂದು ಘೋಷಿಸಲ್ಪಟ್ಟಿದ್ದು, ಇದರಿಂದ ಫಲಿತಾಂಶದಲ್ಲಿ ಮಹತ್ತರ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಪಡೆದು ಅಂತಿಮವಾಗಿ ಜಯಗಳಿಸಿದ್ದಾರೆ.
ನೂತನ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, 2023 ಮೇ 13 ರಂದು ಚುನಾವಣಾ ಕೌಂಟಿಂಗ್ ನಡೆದಿದ್ದು, ಕೌಂಟಿಂಗ್ನಲ್ಲಿ ಅಸಿಂಧು ಮತಗಳನ್ನು ಈವರೆಗೆ ಶಾಸಕರಾಗಿದ್ದ ಟಿ.ಡಿ. ರಾಜೇಗೌಡರಿಗೆ ಹಾಕಿದ್ದಾರೆ ಎಂದು ನಾನು ನನ್ನ ಚುನಾವಣಾ ಏಜೆಂಟರ ಮೂಲಕ ಆರ್ಒಗೆ ಆ ದಿನವೇ ದೂರು ಸಲ್ಲಿಕೆ ಮಾಡಿದ್ದೆ. ಆ ದಿನ ಎರಡು ದೂರುಗಳನ್ನು ದಾಖಲು ಮಾಡಿದ್ದೆ. ನನ್ನ ದೂರು ಇದ್ದ ಹಾಗೆಯೇ ಅವರಿಗೆ ಪ್ರಮಾಣ ಪತ್ರವನ್ನು ನೀಡಿದ್ದರು. ಎರಡು ದಿನಗಳ ನಂತರ ಅಂಚೆ ಮೂಲಕ ಉತ್ತರವನ್ನು ನನಗೆ ಕಳಿಸಿಕೊಟ್ಟಿದ್ದರು. ನಾನು ಆ ದಿನವೇ ಗೆದ್ದಿದ್ದೆ, ಆದರೆ ನನಗೆ ಮೋಸ ಮಾಡಿ ಇವರು ಗೆಲುವನ್ನು ಪಡೆದುಕೊಂಡಿದ್ದರು. ಈಗ ನ್ಯಾಯ ಸಿಕ್ಕಿದೆ ಹಾಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ನ್ಯಾಯಾಲಯ ನಿಖರವಾಗಿ ಅಂದೇ ಫಲಿತಾಂಶವನ್ನು ಘೋಷಣೆ ಮಾಡಿ ಎಂದು ಹೇಳಿದ್ದರೂ, ಆದರೆ ಆರ್ ಒ ಕೋರ್ಟ್ ಆದೇಶವನ್ನು ಪಾಲನೆ ಮಾಡಿರಲಿಲ್ಲ. ಈಗ ನಾನು ಅಧಿಕಾರಿಗಳ ಮೇಲೆ ಯಾವುದೇ ಆರೋಪವನ್ನು ಮಾಡಲು ಇಷ್ಟ ಪಡುವುದಿಲ್ಲ. ಸರ್ಕಾರದ ಒತ್ತಡ ಈ ರೀತಿ ಇದ್ದಾಗ ಯಾವ ಅಧಿಕಾರಿಯಯಾದರು ಏನು ಮಾಡಲು ಸಾಧ್ಯ. ಈಗ ನಾನು ಪ್ರಮಾಣ ಪತ್ರವನ್ನು ಸ್ವೀಕಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.