Kalaburagi News: ಲಾರಿ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವು
Kalaburagi News: ಕೆಂಪು ಮಣ್ಣು ತುಂಬಿಕೊಂಡು ಸಿಮೆಂಟ್ ಕಾರ್ಖಾನೆಯೊಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಐದು ವರ್ಷದ ಬಾಲಕನ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.


ಕಲಬುರಗಿ: ಕೆಂಪು ಮಣ್ಣು ತುಂಬಿಕೊಂಡು ಸಿಮೆಂಟ್ ಕಾರ್ಖಾನೆಯೊಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಹರಿದು ಐದು ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಜಿಲ್ಲೆಯ (Kalaburagi News) ಚಿತ್ತಾಪೂರ ತಾಲೂಕಿನ ಅಲೂರ (ಬಿ) ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ (5) ಸ್ಥಳದಲ್ಲೇ ಮೃತಪಟ್ಟಿರುವ ಬಾಲಕ. ಮೂರು ತಿಂಗಳಿಂದ ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೆನ್ ಗೆಟ್ ಪಕ್ಕದಲ್ಲೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.
ರಾಜಶ್ರೀ ಸಿಮೆಂಟ್ ಕಾರ್ಖಾನೆಯೊಳಗಡೆ ತೆರಳುತ್ತಿದ್ದ ಖಾಸಗಿ ಲಾರಿಯೊಂದು ಬಾಲಕನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸೋಮವಾರ ಬೆಳಗ್ಗೆ 7.30ಕ್ಕೆ ಹೊರಗಡೆ ತೆರಳಿ ಮನೆಗೆ ಬರುವ ವೇಳೆ ಕೆಂಪು ಮಣ್ಣಿನ ಖಾಸಗಿ ಲಾರಿ ಬಾಲಕನ ಮೇಲೆ ಹರಿದು ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮಳಖೇಡ ತಾಂಡದ ಸ್ಥಳೀಯರು ರಾಜಶ್ರೀ ಸಿಮೆಂಟ್ ಕಾರ್ಖಾನೆ ಮೇನ್ ಗೆಟ್ ಮುಂದೆ ಬಾಲಕನ ಶವವಿಟ್ಟು ಪ್ರತಿಭಟನೆ ನಡೆಸಿದರು. ರಾಜಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ಧ ಪ್ರಕರಣ ದಾಖಲಿಸಿ, 40 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಚಿಂಚೋಳಿ ಡಿವೈಎಸ್ಪಿ ಸಂಗಮನಾಥ ಹಿರೇಮಠ್, ಸೇಡಂ ಪಿಎಸ್ಐ ಹಾಗೂ ಸಂಘಟನೆ ನಾಯಕರು ಉಪಸ್ಥಿತರಿದ್ದರು.
ಬಟ್ಟೆ ತೊಳೆಯುವ ವೇಳೆ ಕೆರೆಯಲ್ಲಿ ಮುಳುಗಿ ಮೂವರು ಮಹಿಳೆಯರ ಸಾವು
ದಾವಣಗೆರೆ: ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದು ಅಕ್ಕ-ತಂಗಿ ಸೇರಿ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಕ್ಷ್ಮೀಸಾಗರ- ದುಗ್ಗೇನಹಳ್ಳಿ ಗ್ರಾಮದ ಮಧ್ಯೆ ನಡೆದಿದೆ. ಗ್ರಾಮದ ಸಮೀಪದ ಹೊಸಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ದೀಪಾರಾಣಿ(30), ದಿವ್ಯಾ(26) ಮತ್ತು ಚಂದನಾ(19) ಮೃತಪಟ್ಟಿದ್ದಾರೆ. ಮೃತರ ಪೈಕಿ ದಿವ್ಯಾ ಮತ್ತು ಚಂದನಾ ಸಹೋದರಿಯರಾಗಿದ್ದು, ದೀಪಾರಾಣಿ ಪಕ್ಕದ ಮನೆಯ ಯುವತಿಯಾಗಿದ್ದಾಳೆ.
ಮಧ್ಯಾಹ್ನ ಬಟ್ಟೆ ತೊಳೆಯುವಾಗ ಚಂದನಾ ಈಜಲೆಂದು ಕೆರೆಗೆ ಇಳಿದಿದ್ದಾಳೆ. ಕೆಸರಿನಲ್ಲಿ ಸಿಲುಕಿದ ಚಂದನಾಳನ್ನು ಕಾಪಾಡಲು ನೀರಿಗೆ ಇಳಿದ ಅಕ್ಕ ದಿವ್ಯಾ ಪ್ರಯತ್ನಿಸಿ ಆಕೆಯೂ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ಇಬ್ಬರನ್ನು ರಕ್ಷಿಸಲು ಹೋಗಿ ದೀಪಾರಾಣಿ ಕೂಡ ನೀರಿನಲ್ಲಿ ಮುಳುಗಿದ್ದಾಳೆ. ದೀಪಾರಾಣಿ ಮತ್ತು ದಿವ್ಯಾ ಅವರಿಗೆ ವಿವಾಹವಾಗಿದ್ದು, ದೀಪಾರಾಣಿಗೆ ಮೂವರು ಮಕ್ಕಳಿದ್ದಾರೆ. ದಿವ್ಯಾಗೆ ಒಂದು ವರ್ಷದ ಮಗುವಿದೆ.
ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ಮೈಸೂರು, ಕೊಡಗು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ನಿರೀಕ್ಷೆ
ಚನ್ನಗಿರಿ ಅಗ್ನಿಶಾಮಕ ದಳದ ಕುಮಾರ್ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಮೂವರ ಶವಗಳನ್ನು ಹೊರತೆಗೆದಿದ್ದಾರೆ. ತಹಸೀಲ್ದಾರ್ ಎನ್.ಜೆ. ನಾಗರಾಜ್, ವೃತ್ತ ನಿರೀಕ್ಷಕ ಕೆ. ರವೀಶ್ ಸ್ಥಳ ಪರಿಶೀಲನೆ ನಡೆಸಿದ್ದು, ಮೂವರ ಶವಗಳನ್ನು ಚನ್ನಗಿರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.