Priyank Kharge: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಭಗವಾಧ್ವಜಗಳ ತೆರವು
RSS: ಚಿತ್ತಾಪುರದ ಪುರಸಭೆ ನೌಕರರು, ಸಿಬ್ಬಂದಿಗಳು ರಾತ್ರೋ ರಾತ್ರಿ ಆಗಮಿಸಿ, ಪರವಾನಗಿ ಇಲ್ಲದೇ ಅಳವಡಿಸಲಾಗಿದೆ ಎಂದು ಭಗವಾ ಧ್ವಜಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಪೋಸ್ಟರ್ಗಳನ್ನು ಹರಿದುಹಾಕಿದ್ದಾರೆ. ಸಂಘದ ಅಭಿಮಾನಿಗಳು, ಕಾರ್ಯಕರ್ತರು ಇದನ್ನು ವಿರೋಧಿಸಿ ಪುರಸಭೆಗೆ ಧಿಕ್ಕಾರ ಕೂಗಿದ್ದಾರೆ.

-

ಕಲಬುರಗಿ: ಸರಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ (RSS) ಸೇರಿದಂತೆ ಖಾಸಗಿ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ನಿರ್ಬಂಧದ ವಿವಾದದ ಮಧ್ಯೆಯೇ, ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತವರು ಚಿತ್ತಾಪುರ (Chittapura) ಕ್ಷೇತ್ರದಲ್ಲಿ ಅಕ್ಟೋಬರ್ 19ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕಾಗಿ ಅಳವಡಿಸಿದ ಆಲಂಕಾರಿಕ ಭಗವಾ ಧ್ವಜಗಳು, ಬ್ಯಾನರ್ಗಳು, ಕೇಸರಿ ಪತಾಕೆಗಳನ್ನು ತೆರವುಗೊಳಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ವಿಜಯ ದಶಮಿ ಉತ್ಸವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷದ ಸಂಘ ಶತಾಬ್ದಿ ಸಂಭ್ರಮಕ್ಕಾಗಿ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳಲಾಗುತ್ತಿತ್ತು. ಚಿತ್ತಾಪುರ ಪಟ್ಟಣದ ಪ್ರಮುಖ ವೃತ್ತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕೇಸರಿ ಬಣ್ಣದ ಪತಾಕೆ, ಅಭಿಮಾನಿಗಳು ಬ್ಯಾನರ್ಗಳನ್ನು, ಭಗವಾ ಧ್ವಜಗಳನ್ನು ಕಟ್ಟಿದ್ದರು.
ಇದನ್ನೂ ಓದಿ: RSS: ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅಮಾನತು
ಪುರಸಭೆ ನೌಕರರು, ಸಿಬ್ಬಂದಿಗಳು ರಾತ್ರೋ ರಾತ್ರಿ ಆಗಮಿಸಿ, ಪರವಾನಗಿ ಇಲ್ಲದೇ ಅಳವಡಿಸಲಾಗಿದೆ ಎಂದು ಇವುಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಪೋಸ್ಟರ್ಗಳನ್ನು ಹರಿದುಹಾಕಿದ್ದಾರೆ. ಸಂಘದ ಅಭಿಮಾನಿಗಳು, ಕಾರ್ಯಕರ್ತರು ಇದನ್ನು ವಿರೋಧಿಸಿ ಪುರಸಭೆಗೆ ಧಿಕ್ಕಾರ ಕೂಗಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಭಗವಾ ಧ್ವಜದ ಪತಾಕೆಗಳನ್ನು ತೆರವುಗೊಳಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ತಡೆ ಹಾಕಲು ಕೋರಿ ಸಿಎಂಗೆ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದರು. ಅದರಂತೆ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲು ಕ್ಯಾಬಿನಟ್ನಲ್ಲಿ ನಿರ್ಧರಿಸಲಾಗಿದೆ. ನಿನ್ನೆ, ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಪಿಡಿಒ ಒಬ್ಬರನ್ನು ಅಮಾನತು ಮಾಡಲಾಗಿದೆ.