Pratap Simha: ಪೊಲೀಸಪ್ಪಾ ಮಸೀದಿ ರೋಡಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀರಾ?; ಸ್ಟೇಷನ್ಗೆ ನುಗ್ತೀನಿ ಎಂದು ಪ್ರತಾಪ್ ಸಿಂಹ ಕಿಡಿ
T Narasipura Inspector Dhananjaya: ಅಸಹಾಯಕ ಹುಡುಗರ ಮುಂದೆ ನರಸೀಪುರದ ಇನ್ಸ್ಪೆಕ್ಟರ್ ವೀರಾವೇಶದಿಂದ ಮಾತನಾಡಿದ್ದು, ಬ್ರಿಟಿಷರ ಕಾಲದ ಅಧಿಕಾರಿಗಳಂತೆ ದರ್ಪ ಮೆರೆದಿದ್ದಾರೆ. ಮಸೀದಿಯಲ್ಲಿ ಅವರ ದೇವರು ಬಿಟ್ಟರೆ ಯಾರು ಇಲ್ಲಾ ಎಂದು ಕೂಗುತ್ತಾರೆ. ಮೊದಲು ಅವರ ಮೈಕ್ಗಳನ್ನು ನಿಲ್ಲಿಸುವ ತಾಕತ್ ನಿಲ್ಲಿಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಟಿ.ನರಸೀಪುರ ಠಾಣೆ ಇನ್ಸ್ಪೆಕ್ಟರ್ ಧನಂಜಯ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ -
ಮೈಸೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ (T. Narasipura police inspector) ಆಡಿದ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ನಾವು ಸೂಚಿಸಿದ ಮಾರ್ಗದಲ್ಲೇ ಗಣೇಶ ಮೆರವಣಿಗೆ ಸಾಗಬೇಕು. ಈ ಬಾರಿ ಮಸೀದಿ ಮುಂಭಾಗ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇವರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದು, ಪೊಲೀಸ್ ಅಧಿಕಾರಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಪ್ರತಿಕ್ರಿಯಿಸಿ, ಅಸಹಾಯಕ ಹುಡುಗರ ಮುಂದೆ ನರಸೀಪುರದ ಇನ್ಸ್ಪೆಕ್ಟರ್ ವೀರಾವೇಶದಿಂದ ಮಾತನಾಡಿದ್ದು, ಬ್ರಿಟಿಷರ ಕಾಲದ ಅಧಿಕಾರಿಗಳಂತೆ ದರ್ಪ ಮೆರೆದಿದ್ದಾರೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೂಗುವ ಕೂಗಿಗೆ ಇಲ್ಲದ ನಿಯಮ, ಹಿಂದೂಗಳ ಹಬ್ಬಕ್ಕೆ ಮಾತ್ರ ಏಕೆ? ಮಸೀದಿ ಎದುರು ಹೋದ್ರೆ ಗ್ರಹಚಾರ ಬಿಡಿಸ್ತೀನಿ ಎಂದಿದ್ದಾರೆ. ಯಾರಿಗೆ ನೀವು ಧಮ್ಕಿ ಹಾಕ್ತೀರಿ?. ಇನ್ನೊಮ್ಮೆ ಆ ಮಾತು ನಿಮ್ಮ ಬಾಯಿಂದ ಬಂದರೆ, ನಾನೇ ಸ್ವತಃ ಪೊಲೀಸ್ ಠಾಣೆಗೆ ನುಗ್ಗುತ್ತೇನೆ. ಆವತ್ತು ನಿಮ್ಮ ಪೌರುಷ ತೋರಿಸಿ, ನೋಡೋಣ ಎಂದು ಕಿಡಿಕಾರಿದ್ದಾರೆ.
ನಾನು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಲು ಬಯಸುತ್ತೇನೆ. ಮಸೀದಿ ಮುಂದೆ ಡಾನ್ಸ್ ಮಾಡಿದರೆ ಏನು ಆಗುತ್ತದೆ. ಮಸೀದಿಯಲ್ಲಿ ಅವರ ದೇವರು ಬಿಟ್ಟರೆ ಯಾರು ಇಲ್ಲಾ ಎಂದು ಕೂಗುತ್ತಾರೆ. ಮೊದಲು ಅವರ ಮೈಕ್ಗಳನ್ನು ನಿಲ್ಲಿಸಿ, ಅವರ ಧ್ವನಿ ಹಿಂದೂಗಳ ಮನೆಗಳಿಗೂ ಕೇಳಿಸಬಾರದು. ಆ ರೀತಿ ಮಾಡಲು ನಿಮಗೆ ಸಾಧ್ಯವಾಗಿಲ್ಲ ಎಂದಾದರೆ ಹಿಂದುಗಳಿಗೆ ಯಾಕೆ ಧಮ್ಕಿ ಹಾಕ್ತೀರಿ ಎಂದು ಪ್ರಶ್ನಿಸಿದ್ದಾರೆ.
ಮೆರವಣಿಗೆ ನಿರ್ಬಂಧಿಸುವುದು ತಪ್ಪು: ಯದುವೀರ್ ಒಡೆಯರ್
ಇನ್ಸ್ಪೆಕ್ಟರ್ ಹೇಳಿಕೆಗೆ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಹಿಂದುಗಳ ಆಚರಣೆಗೆ ಧಕ್ಕೆ ಮಾಡುವ ರೀತಿ ರಾಜ್ಯ ಸರ್ಕಾರ ನಡೆದುಕೊಳ್ಳತ್ತಿದೆ. ಈ ಹಿಂದೆ ನಾಗಮಂಗಲ ಸೇರಿ ಹಲವೆಡೆ ಕಲ್ಲುತೂರಾಟ ಪ್ರಕರಣ ನಡೆದಿದೆ. ಎಲ್ಲಾ ಧರ್ಮದ ಜನರಿಗೆ ತಮ್ಮ ಆಚರಣೆಗಳನ್ನು ಮಾಡುವ ಅಧಿಕಾರವಿದೆ. ದೇವಸ್ಥಾನ ಅಥವಾ ಮಸೀದಿ ಇದೆ ಎಂದು ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ನಿರ್ಬಂಧಿಸುವುದು ತಪ್ಪು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೇಕಾದರೆ ಮಾರ್ಗ ಕೊಡಲಿ, ಆದರೆ, ಮಸೀದಿ ಇದೆ ಎಂದು ಮೆರವಣಿಗೆ ಮಾರ್ಗ ಬದಲಿಸುವುದು ತಪ್ಪು ಎಂದು ಟೀಕಿಸಿದ್ದಾರೆ.