Lokayukta Raid: ಎರಡೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್ಚಂದ್ರ ಲೋಕಾಯುಕ್ತ ಬಲೆಗೆ
Tumkur News: ಅರಣ್ಯ ಇಲಾಖೆಯಿಂದ ಮಂಜೂರಾದ ಕಾಮಗಾರಿ ಕೆಲಸ ಮಾಡಲು ಕಾಂಟ್ರಾಕ್ಟರ್ ಒಬ್ಬರಿಂದ 2,60,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ಪಡೆಯುತ್ತಿದ್ದ ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್ಚಂದ್ರ ಕೆ.ಎಸ್., ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ದಾಳಿ ಮತ್ತು ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್ಚಂದ್ರ ಕೆ.ಎಸ್. (ಸಂಗ್ರಹ ಚಿತ್ರ) -
ತುಮಕೂರು, ಸೆ. 11: ಅರಣ್ಯ ಇಲಾಖೆಯಿಂದ ಮಂಜೂರಾದ ಕಾಮಗಾರಿ ಕೆಲಸ ಮಾಡಲು ಕಾಂಟ್ರಾಕ್ಟರ್ ಒಬ್ಬರಿಂದ 2,60,000 ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ಹಣ ಪಡೆಯುತ್ತಿದ್ದ ಗುಬ್ಬಿ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಸತೀಶ್ಚಂದ್ರ ಕೆ.ಎಸ್., ಲೋಕಾಯುಕ್ತ ಪೊಲೀಸರ ಬಲೆಗೆ (Lokayukta Raid) ಬಿದ್ದಿದ್ದಾರೆ.
ದೂರುದಾರರಾದ ಬಿ.ಜೆ. ಶಿವರಾಜು ಅರಣ್ಯ ಮತ್ತು ಸಿವಿಲ್ ಕಾಂಟ್ರಾಕ್ಟರ್ ಆಗಿದ್ದು, ಗುಬ್ಬಿ ಅರಣ್ಯ ವಲಯದ ಸಿಸಿಟಿ ಅಗೆಯುವಿಕೆ ಮತ್ತು ಬದುಗಳ ಮೇಲೆ ಗಿಡ ನೆಡುವ ಕಾಮಗಾರಿ ನಡೆಸಲು ಅವರಿಗೆ 2026ರ ಜುಲೈ 13ರಂದು ಕಾರ್ಯಾದೇಶ ಹೊರಡಿಸಲಾಗಿತ್ತು. ಕೆಲಸ ಆರಂಭಿಸುತ್ತಿದ್ದಂತೆ ಅರಣ್ಯಾಧಿಕಾರಿ ಸತೀಶ್ಚಂದ್ರ ಕೆ.ಎಸ್. ಲಂಚ ನೀಡಬೇಕೆಂದು ತಾಕೀತು ಮಾಡಿ ಅದರಂತೆ ಮೊದಲ ಕಂತಾಗಿ 50,000 ರೂಪಾಯಿ ತಮ್ಮ ಸರ್ಕಾರಿ ವಸತಿ ಗೃಹದಲ್ಲಿ ಬಲವಂತವಾಗಿ ಪಡೆದಿದ್ದರು ಹಾಗೂ ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಲೋಕಾಯುಕ್ತರಿಗೆ ದೂರು
ಲಂಚ ನೀಡಲು ಇಷ್ಟವಿಲ್ಲದ ಕಾಂಟ್ರಾಕ್ಟರ್ ಶಿವರಾಜು ಶುಕ್ರವಾರ (ಸೆಪ್ಟೆಂಬರ್ 11) ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಅವರ ಸೂಚನೆ ಮೇರೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಟ್ರ್ಯಾಪ್ ಕಾರ್ಯಾಚರಣೆ ಮತ್ತು ರೇಡ್
ಶುಕ್ರವಾರ ಮಧ್ಯಾಹ್ನ ಲೋಕಾಯುಕ್ತ ಪೊಲೀಸರು ಹಮ್ಮಿಕೊಂಡ ಟ್ರ್ಯಾಪ್ ಕಾರ್ಯಾಚರಣೆ ವೇಳೆ, ಅರಣ್ಯಾಧಿಕಾರಿ ಸತೀಶ್ಚಂದ್ರ ಕೆ.ಎಸ್. ಅವರ ಸೂಚನೆಯಂತೆ ಅವರ ಕಚೇರಿ ಹೊರಗುತ್ತಿಗೆ ನೌಕರ (ಕ್ಯಾಂಪ್ ವಾಚರ್) ಶೋಖಿತ್ ಎಂಬವವರು ದೂರುದಾರರಿಂದ 2,00,000 ರುಪಾಯಿಗಳ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ, ಡಿವೈಎಸ್ಪಿಗಳಾದ ಡಾ. ಸಂತೋಷ್ ಕೆ.ಎಂ. ಹಾಗೂ ಮಂಜುನಾಥ್ ಎಂ. ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶಾಂತನಾಥ ಜಿ. ವನ್ನೂರ ಮತ್ತು ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.