PM Narendra Modi: ಮದುವೆಗೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಬಂತು ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ. ಈ ಬಗ್ಗೆ ಯುವಕನ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ರಾಜೇಶ್ ನಾಯಕ್ ದಂಪತಿ. -
ರಾಯಚೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮದುವೆ ಆಹ್ವಾನ ಪತ್ರ ಕಳುಹಿಸಿದ್ದ ರಾಯಚೂರಿನ ಯುವಕನಿಗೆ ಇದೀಗ ಪ್ರಧಾನಿ ಕಚೇರಿಯಿಂದ ಮದುವೆ ಶುಭಾಶಯ ಪತ್ರ ಬಂದಿದ್ದು, ಯುವಕ ಸಂತಸ ವ್ಯಕ್ತಪಡಿಸಿದ್ದಾರೆ. ರಾಯಚೂರು (Raichur) ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ರಾಜೇಶ್ ನಾಯಕ್ ಅವರು ಪ್ರಧಾನಿ ಮೋದಿಗೆ ಮದುವೆ ಆಹ್ವಾನ ಪತ್ರಿಕೆ ಕಳುಹಿಸಿದ್ದರು. ಈಗ ಪ್ರಧಾನಿ ಕಚೇರಿಯಿಂದ ನವ ದಂಪತಿಗೆ ಶುಭಾಶಯ ಪತ್ರ ಬಂದಿದೆ.
ಏ.13ರಂದು ರಾಜೇಶ್ ನಾಯಕ್ ಹಾಗೂ ಸವಿತಾ ಮದುವೆ ನಡೆದಿದ್ದು, ಕೊನೆಗೂ ನವಜೋಡಿಗೆ ಪ್ರಧಾನಿ ಮೋದಿಯಿಂದ ಶುಭಾಶಯ ಪತ್ರ ಬಂದಿದೆ. ದಾಂಪತ್ಯ ಜೀವನಕ್ಕೆ ಶುಭ ಹಾರೈಸಿ ಪತ್ರ ಬರೆದಿದ್ದು, ಪ್ರಧಾನಿ ಕಚೇರಿಯಿಂದ ಪತ್ರ ಬಂದಿರುವುದಕ್ಕೆ ರಾಜೇಶ್ ಅವರು ಖುಷಿ ವ್ಯಕ್ತಪಡಿಸಿ, ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, 'ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು' ಎಂದು ಹಾರೈಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜೇಶ್ ನಾಯಕ್, ಪ್ರಧಾನಿ ಮೋದಿಯವರಿಗೆ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದೆ. ಅವರ ಕಡೆಯಿಂದ ಕನಿಷ್ಠ ಉತ್ತರವಾದರೂ ಬರಬಹುದೆಂದು ನಿರೀಕ್ಷಿಸಿದ್ದೆ. ಆದರೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಇದೀಗ ಪ್ರಧಾನಿಯವರಿಂದ ಶುಭಾಶಯ ಪತ್ರ ಬಂದಿದೆ. ಇದು ನನಗಷ್ಟೇ ಎಲ್ಲ ನಮ್ಮ ಕುಟುಂಬದವರಿಗೂ ಖುಷಿ ತಂದಿದೆ ಎಂದು ಹೇಳಿದ್ದಾರೆ.