Shivamogga News: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ, ಪರಿಶೀಲನೆ
Madhu Bangarappa: ಶಿವಮೊಗ್ಗ ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಡಯಾಲಿಸಿಸ್ ವಿಭಾಗ, ಚರ್ಮ ರೋಗ ವಿಭಾಗ ಹಾಗೂ ಜನರಲ್ ಮೆಡಿಸಿನ್ ವಾರ್ಡ್ ಸೇರಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ, ಸಾರ್ವಜನಿಕರು ಹಾಗೂ ಆಸ್ಪತ್ರೆ ನಾನ್ ಕ್ಲಿನಿಕಲ್ ಸಿಬ್ಬಂದಿಗಳೊಂದಿಗೆ ಮಾತನಾಡಿ, ಕುಂದು ಕೊರತೆ ಆಲಿಸಿದರು.


ಶಿವಮೊಗ್ಗ: ನಗರದ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ (Shivamogga News) ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು (Madhu Bangarappa) ಸೋಮವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಡಯಾಲಿಸಿಸ್ ವಿಭಾಗ, ಚರ್ಮ ರೋಗ ವಿಭಾಗ ಹಾಗೂ ಜನರಲ್ ಮೆಡಿಸಿನ್ ವಾರ್ಡ್ ಸೇರಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳೊಂದಿಗೆ, ಸಾರ್ವಜನಿಕರು ಹಾಗೂ ಆಸ್ಪತ್ರೆ ನಾನ್ ಕ್ಲಿನಿಕಲ್ ಸಿಬ್ಬಂದಿ ಜತೆ ಮಾತನಾಡಿ, ಕುಂದು ಕೊರತೆ ಆಲಿಸಿದರು.
ಹೊರ ಜಿಲ್ಲೆಗಳ ರೋಗಿಗಳ ಮಾಹಿತಿ ಹಾಗೂ ಎಂಆರ್ಐ ಸ್ಕ್ಯಾನ್ ಸೇರಿ ವಿವಿಧ ವಿಭಾಗಗಳ ಮಾಹಿತಿ ನೀಡಲು ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ವೈದ್ಯರು, ಮುಖಂಡರು, ಉಪಸ್ಥಿತರಿದ್ದರು.
ಬಳಿಕ ಆಸ್ಪತ್ರೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು, ಹೊಸ ಓಪಿಡಿ ಕೌಂಟರ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲು , 5 ಡಯಾಲಿಸಿಸ್ ಯಂತ್ರಗಳು, ಡಾರ್ಮೆಟರಿ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲು ಸೂಚನೆ ನೀಡಿದರು.
ಈ ಸುದ್ದಿಯನ್ನೂ ಓದಿ | DK Shivakumar: ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸಲು ಪ್ರಯತ್ನ- ಡಿ.ಕೆ. ಶಿವಕುಮಾರ್
ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ರೀತಿಯಲ್ಲಿ ಪರಿಣಾಮಕಾರಿ ಕ್ರಮ ವಹಿಸಲು ಸೂಚಿಸಿದ ಸಚಿವರು, ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ವೆಂಟಿಲೇಟರ್ಗಳ ಮಾಹಿತಿ ನೀಡುವಂತೆ ಹಾಗೂ ಎನ್ಐಸಿಯು, ಎಂಸಿಎಚ್ (ತಾಯಿ ಮತ್ತು ಮಕ್ಕಳ ವಿಭಾಗ) ಬ್ಲಾಕ್ ವಿವರ, ಒಬಿಜಿ, ಪಿಡಿಯಾಟ್ರಿಕ್ ಸೇರಿದಂತೆ ವಿವಿಧ ವಿಭಾಗಗಳ ನೀರು ಲೀಕೇಜ್ ಸಮಸ್ಯೆ ಸೇರಿದಂತೆ ಆಸ್ಪತ್ರೆಯ ಒಟ್ಟಾರೆ ಸಮಸ್ಯೆಗಳು ಹಾಗೂ ಅಗತ್ಯವಿರುವ ಸೌಲಭ್ಯಗಳ ಕುರಿತು ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದರು.