Language Row: ಬೆಂಗಳೂರಲ್ಲಿ ಕನ್ನಡ ಮಾತಾಡೋದೇ ತಪ್ಪಾ?; ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಉಪನ್ಯಾಸಕ ವಜಾ!
Language Row: ಬೆಂಗಳೂರಿನ ಆರ್ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ವಜಾ ಮಾಡಲಾಗಿದೆ. ಒಂದು ವೇಳೆ ರಾಜೀನಾಮೆಗೆ ಸಹಿ ಹಾಕದಿದ್ದರೆ ಕಾಲೇಜಿನ ಇನ್ನೊಂದು ಶಾಖೆಯಲ್ಲಿರುವ ನಿಮ್ಮ ಮಗಳ ಸರ್ಟಿಫಿಕೇಟ್ ಕೊಡಲ್ಲ ಎಂದು ಬೆದರಿಸಿ ರಾಜೀನಾಮೆ ಪಡೆದಿರುವ ಆರೋಪ ಕಾಲೇಜು ವಿರುದ್ಧ ಕೇಳಿಬಂದಿದೆ.


ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕನ್ನಡಿಗ ಉಪನ್ಯಾಸಕನ ಮೇಲೆ ದಬ್ಬಾಳಿಕೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಬಲವಂತವಾಗಿ ರಾಜೀನಾಮೆ ಕೊಡಿಸಿ, ವಜಾ ಮಾಡಲಾಗಿದೆ. ಇದರಿಂದ ಕರ್ನಾಟಕದಲ್ಲಿ ಕನ್ನಡ ಮಾತನಾಡುವುದೂ ಅಪರಾಧವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲೇ ಉತ್ತರಿಸಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಬೆಂಗಳೂರಿನ ಆರ್ವಿ ಲರ್ನಿಂಗ್ ಹಬ್ ಸಂಸ್ಥೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ವಜಾ ಮಾಡಲಾಗಿದೆ. ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ, ಕನ್ನಡದಲ್ಲಿ ಪ್ರಶ್ನೆ ಕೇಳಿದ್ದಾನೆ. ಹೀಗಾಗಿ ಕನ್ನಡದಲ್ಲೇ ಉಪನ್ಯಾಸಕ ಉತ್ತರಿಸಿದರಂತೆ. ಆದರೆ, ಮತ್ತೊಬ್ಬ ವಿದ್ಯಾರ್ಥಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನೀವು ಕನ್ನಡದಲ್ಲಿ ಪಾಠ ಮಾಡಬೇಡಿ, ಇಂಗ್ಲಿಷ್ನಲ್ಲೇ ಮಾತನಾಡಿ, ನಮಗೆ ಕನ್ನಡ ಬರಲ್ಲ ಎಂದು ವಾದ ಮಾಡಿದ್ದಾನೆ. ಈ ವೇಳೆ ಕನ್ನಡ ಈ ನೆಲದ ಭಾಷೆ, ಕ್ರಿಮಿನಲ್ ಭಾಷೆ ಅಲ್ಲ ಎಂದು ಉಪನ್ಯಾಸಕ ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ, ನನಗೆ ಕನ್ನಡ ಬರಲ್ಲ, ಇಂಗ್ಲಿಷ್ನಲ್ಲೇ ಪಾಠ ಮಾಡಬೇಕು ಅಂತ ಮತ್ತೆ ವಿದ್ಯಾರ್ಥಿ ಪಟ್ಟುಹಿಡಿದಿದ್ದಾನೆ.
ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ
— ಚೇತನ್ ಸೂರ್ಯ ಎಸ್ - Chethan Surya S (@Chethan_Surya_S) June 14, 2025
ಗತಿ ಬಂದಿದೆ ನೋಡಿ.!
ಏನ್ ನಡೀತಿದೆ #ಕನ್ನಡ ನಾಡಿನಲ್ಲಿ.?
ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ.!
ಕರ್ನಾಟಕದಲ್ಲಿ ಇಂಗ್ಲೀಷ್ ಸಾರ್ವಭೌಮವೇ.? pic.twitter.com/qzSZSd0JyD
ಈ ಘಟನೆ ನಡೆದ ಮರುದಿನ ಉಪನ್ಯಾಸಕರು ಕ್ಲಾಸ್ಗೆ ತೆರಳಿದ್ದೆ. ಆದರೆ ಪ್ರಾಂಶುಪಾಲರು ಕರೆದು ರಾಜೀನಾಮೆಗೆ ಆಗ್ರಹಿಸಿದರು. ಒಂದು ವೇಳೆ ರಾಜೀನಾಮೆಗೆ ಸಹಿ ಹಾಕದಿದ್ದರೆ ಕಾಲೇಜಿನ ಇನ್ನೊಂದು ಶಾಖೆಯಲ್ಲಿರುವ ನಿಮ್ಮ ಮಗಳ ಸರ್ಟಿಫಿಕೇಟ್ ಕೊಡಲ್ಲ ಎಂದು ಬೆದರಿಸಿ ರಾಜೀನಾಮೆ ಪಡೆದಿದ್ದಾರೆ ಎಂದು ಉಪನ್ಯಾಸಕ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | SSLC Exam 2 Result 2025: ಒಂದು ಅಂಕಕ್ಕಾಗಿ ಮತ್ತೊಮ್ಮೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಟಾಪರ್ ಆದ ಶಿವಮೊಗ್ಗದ ವಿದ್ಯಾರ್ಥಿನಿ!
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಉಪನ್ಯಾಸಕ, ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಿ ಕೆಲಸ ಹೋಗುವಂತಹ ನನ್ನಂತಹ ಸ್ಥಿತಿ ಯಾರಿಗೂ ಬರದಿರಲಿ ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾಲೇಜು ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ವಿಡಿಯೋಗೆ ಹಲವು ಕನ್ನಡಿಗರು ಕಮೆಂಟ್ ಮಾಡಿದ್ದು, ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ! ಏನ್ ನಡೀತಿದೆ ಕನ್ನಡ ನಾಡಿನಲ್ಲಿ?ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ! ಕರ್ನಾಟಕದಲ್ಲಿ ಇಂಗ್ಲಿಷ್ ಸಾರ್ವಭೌಮವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.