KN Rajanna: ಬ್ಲೂ ಜೀನ್ಸ್ ಹುಡುಗಿ ಹನಿ ಟ್ರ್ಯಾಪ್ ಮಾಡಲು ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ
KN Rajanna: ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಇಂದು ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡುತ್ತಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.


ತುಮಕೂರು: ಬ್ಲೂ ಜೀನ್ಸ್ ಹುಡುಗಿ, ತನ್ನನ್ನು ಹನಿ ಟ್ರ್ಯಾಪ್ ಮಾಡಲು ಬಂದಿದ್ದಳು ಎಂದು ಸಚಿವ ರಾಜಣ್ಣ ತಿಳಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ಹನಿ ಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು. ಎರಡು ಬಾರಿಯೂ ಬಂದಿದ್ದು ಬೇರೆ ಬೇರೆ ಹುಡುಗಿಯರು. ಮೊದಲ ಬಾರಿ ತಾನು ಲಾಯರ್ ಎಂದು ಹೇಳಿರಲಿಲ್ಲ. ಎರಡನೇ ಬಾರಿ ಬಂದವಳು ತಾನು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡು ಬಂದಿದ್ದಳು ಎಂದು ಹೇಳಿದ್ದಾರೆ.
ತಾನು ಲಾಯರ್, ನಿಮ್ಮ ಬಳಿ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ಹುಡುಗಿ ಬಂದಿದ್ದಳು. ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಇಂದು ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಹನಿ ಟ್ರ್ಯಾಪ್ ವಿಚಾರ ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಹನಿಟ್ರ್ಯಾಪ್ ರಹಸ್ಯವನ್ನು ಬಿಚ್ಚಿಟ್ಟು ಗೃಹ ಸಚಿವರಿಗೆ ಮೂರು ಪುಟಗಳಲ್ಲಿ ದೂರು ನೀಡುತ್ತೇನೆ. ಯುವಕನೊಬ್ಬನಿಂದ ಈ ಘಟನೆ ನಡೆದಿದ್ದು, ಪ್ರತಿ ಬಾರಿಯೂ ಬೇರೆ, ಬೇರೆ ಯುವತಿಯರನ್ನು ಕರೆ ತರುತ್ತಿದ್ದ. ಆದರೆ ಹನಿ ಟ್ರ್ಯಾಪ್ ಮಾಡಲು ಎರಡೂ ಬಾರಿ ಯತ್ನಿಸಿದಾಗಲೂ ಆ ಯುವತಿಯರನ್ನು ಹೈಕೋರ್ಟ್ನ ವಕೀಲೆ ಎಂದು ಪರಿಚಯಿಸಿದ್ದ ಎಂದು ಹೇಳಿದ್ದಾರೆ.
ಯುವತಿಯರು ಮನೆಗೆ ಬಂದು ಹೋದ ಸಿಸಿಟಿವಿ ದೃಶ್ಯ ಇಲ್ಲ, ಅವರು ಬಂದ ಹೋದ ವಿಡಿಯೋ ಇಲ್ಲ. ಅಲ್ಲದೇ ಹನಿ ಟ್ರ್ಯಾಪ್ ಮಾಡುವ ದಾಖಲೆ ನನ್ನ ಬಳಿ ಇಲ್ಲ. ಆದರೆ ಹುಡುಗಿಯರನ್ನು ಕರೆ ತರುತ್ತಿದ್ದ ಯುವಕ ಎರಡೂ ಬಾರಿಯೂ ಕೂಡ ವಕೀಲೆ ಎಂದಿದ್ದ. ನನ್ನನ್ನು ಟಾರ್ಗೆಟ್ ಮಾಡಿ ಎರಡೂ ಬಾರಿ ಹನಿ ಟ್ರ್ಯಾಪ್ ಮಾಡಲು ಪ್ರಯತ್ನ ನಡೆದಿತ್ತು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Hari Paraak Column: ಹನಿ ಹನಿ 'ಫ್ರೇಮ್' ಕಹಾನಿ
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹನಿಟ್ರ್ಯಾಪ್ ಪ್ರಕರಣ; ಪಿಐಎಲ್ ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಹನಿಟ್ರ್ಯಾಪ್ ಪ್ರಕರಣ (Honey Trap Case) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯದ ಹಿರಿಯ ಸಚಿವರು, ಶಾಸಕರು, ರಾಜಕೀಯ ನಾಯಕರು ಹಾಗೂ ನ್ಯಾಯಾಧೀಶರು ಸೇರಿ 48 ಜನರನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರೆದುರು ಸೋಮವಾರ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣವನ್ನು ನಾಳೆ ಪಟ್ಟಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಮಾರ್ಚ್ 20ರಂದು ರಾಜ್ಯ ವಿಧಾನಸಭೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮನ್ನು ಹನಿ ಟ್ರ್ಯಾಪ್ಗೆ ಕೆಡವುವ ಸಂಚು ನಡೆದಿತ್ತು ಎಂದು ಆರೋಪಿಸಿದ್ದರು. ನ್ಯಾಯಾಧೀಶರು ಸೇರಿ ಪಕ್ಷಾತೀತವಾಗಿ 48 ಜನರನ್ನು ಗುರಿಯಾಗಿಸಿಕೊಂಡ ಗ್ಯಾಂಗ್ ಒಂದು ತಮಗೂ ಹನಿ ಟ್ರ್ಯಾಪ್ ಬೀಸಿತ್ತು ಎಂದು ಅವರು ದೂರಿದ್ದರು. ಈ ಮಧ್ಯೆ, ಹನಿ ಟ್ರ್ಯಾಪ್ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆದು 18 ಬಿಜೆಪಿ ಶಾಸಕರನ್ನು ಅಮಾನತುಗೊಂಡಿದ್ದರು. ಕೃತ್ಯದ ತನಿಖೆಗೆ ಒತ್ತಾಯ ಕೇಳಿಬಂದಿರುವುದರ ಮಧ್ಯೆಯೇ ಸುಪ್ರೀಂ ಕೋರ್ಟ್ಗೆ ಪಿಐಎಲ್ ಸಲ್ಲಿಸುವ ಮೂಲಕ ಪ್ರಕರಣ ನ್ಯಾಯಾಲಯದ ಅಂಗಳ ತಲುಪಿದೆ.
ಇದು ಗಂಭೀರ ಸ್ವರೂಪದ ಪ್ರಕರಣವಾಗಿರುವುದರಿಂದ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣದಲ್ಲಿ ನ್ಯಾಯಮೂರ್ತಿಗಳ ಹೆಸರು ಉಲ್ಲೇಖವಾಗಿರುವುದರಿಂದ ಇದು ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಸಾರ್ವಜನಿಕರ ನಂಬಿಕೆ ಹುಸಿಗೊಳಿಸಲಿದೆ. ಹೀಗಾಗಿ ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Udayagiri Stone Pelting: ಉದಯಗಿರಿ ಕಲ್ಲುತೂರಾಟ, ಮೌಲ್ವಿಗೆ ಜಾಮೀನು ನಿರಾಕರಣೆ
ಹನಿ ಟ್ರ್ಯಾಪ್ ಬಗ್ಗೆ ಸಚಿವರು ದೂರು ನೀಡದೆ ತನಿಖೆ ನಡೆಸಲು ಆಗಲ್ಲ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಹನಿ ಟ್ರ್ಯಾಪ್ ಪ್ರಕರಣಕ್ಕೆ (Honey Trap Case) ಸಂಬಂಧಿಸಿದಂತೆ ಎಫ್ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿರುವ ಅವರು, ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ದೂರು ನೀಡದೇ ನಾನೇನು ಮಾಡಲಿ? ಅವರು ದೂರು ನೀಡಲಿ. ಎಫ್ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದಿದ್ದಾರೆ.
ರಾಜಣ್ಣ ಏನು ಮಾಡುತ್ತಾರೋ ನೋಡೋಣ. ರಾಜಣ್ಣ ಅವರಿಗೆ ಬಹಳ ಜನ ಆಪ್ತರಿದ್ದಾರೆ. ಅವರು ಯಾರ ಜತೆ ಯಾವ ರೀತಿ ಮಾತನಾಡುತ್ತಾರೆ ನನಗೇನು ಗೊತ್ತು? ರಾಜಣ್ಣ ದಿನವಿಡೀ ನನ್ನ ಜೊತೆಯೇ ಇದ್ದರೂ ಈ ಬಗ್ಗೆ ಏನೂ ಹೇಳಿಲ್ಲ. ಅವರಿಗೆ ನನ್ನನ್ನೂ ಸೇರಿದಂತೆ ಬಹಳ ಜನ ಆಪ್ತರಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Hari Paraak Column: ಹನಿ ಹನಿ 'ಫ್ರೇಮ್' ಕಹಾನಿ