Chikkanayakanahalli (Tumkur) News:ಹೇಮಾವತಿ ನೀರು ಹರಿಸಲು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದೇನೆ : ಸಿಬಿಎಸ್
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜುಲೈ ಮೊದಲ ವಾರದಲ್ಲಿಯೇ ಸಾಸಲು ಕೆರೆಯಿಂದ ಗುರುತ್ವಾ ಕರ್ಷಣೆ ಮೂಲಕವೇ ಹುಳಿಯಾರುವರೆಗೂ ಸಿಗುವ ಕೆರೆಗಳಿಗೆ ಹೇಮೆ ಹರಿಯುವ ವಿಶ್ವಾಸವಿದೆ. ಬಿಳಿಗೆರೆ ಯಿಂದ ಸಾಸಲು ಕೆರೆಯವರೆಗಿನ ನಾಲೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು 28 ಲಕ್ಷಕ್ಕೆ ಟೆಂಡರ್ ಕರೆದು ಅನುಮೋದನೆ ನೀಡಲಾಗಿದೆ


ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ಯೋಜನೆಗಳಿಗೆ ತಾಲ್ಲೂಕಿಗೆ ನಿಗದಿಯಾಗಿರುವ ಹೇಮಾವತಿ ನೀರನ್ನು ಹರಿಸಲು ಪ್ರಾಮಾಣಿಕವಾಗಿ ಶ್ರಮ ಹಾಕುತ್ತಿದ್ದೇನೆ ಎಂದು ಶಾಸಕ ಸಿ.ಬಿ. ಸುರೇಶಬಾಬು ತಿಳಿಸಿದರು.
ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜುಲೈ ಮೊದಲ ವಾರದಲ್ಲಿಯೇ ಸಾಸಲು ಕೆರೆಯಿಂದ ಗುರುತ್ವಾ ಕರ್ಷಣೆ ಮೂಲಕವೇ ಹುಳಿಯಾರುವರೆಗೂ ಸಿಗುವ ಕೆರೆಗಳಿಗೆ ಹೇಮೆ ಹರಿಯುವ ವಿಶ್ವಾಸವಿದೆ. ಬಿಳಿಗೆರೆಯಿಂದ ಸಾಸಲು ಕೆರೆಯವರೆಗಿನ ನಾಲೆಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಲು 28 ಲಕ್ಷಕ್ಕೆ ಟೆಂಡರ್ ಕರೆದು ಅನುಮೋದನೆ ನೀಡಲಾಗಿದೆ. ಬಾಕ್ಸ್ ಕಲ್ವಾರ್ಟ್ಗಳಲ್ಲಿ ಹೂಳು ತುಂಬಿಕೊಂಡಿದ್ದು ಅದನ್ನು ತಗೆಯುವುದು ಸವಾಲಾಗಿದೆ. ದೊಡ್ಡ ಯಂತ್ರಗಳನ್ನು ಬಳಸಿಕೊಂಡು ಮಣ್ಣು ತೆಗೆಯುವ ಕೆಲಸ ಮಾಡಬೇಕಾಗಿದೆ. ನಿರಂತರ ಮಳೆಯಿಂದ ಈ ಕೆಲಸಕ್ಕೆ ಹಿನ್ನಡೆ ಯಾಗಿತ್ತು. ಇದಾದರೆ ಸಾಸಲು, ಶೆಟ್ಟಿಕೆರೆ, ತಿಮ್ಲಾಪುರ ಕೆರೆಯ ಮೂಲಕ ಹುಳಿಯಾರು ಕೆರೆಗಳಿಗೆ ನೀರು ಹರಿಯಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: Chikkanayakanahalli(Tumkur) News: ಹಳ್ಳಿಗಳು ಆಹಾರ ಉತ್ಪತ್ತಿಯ ನೆಲೆ ಬೀಡು, ಇದರ ಸಂರಕ್ಷಣೆ ಎಲ್ಲರ ಹೊಣೆ
ಹಾಲ್ಕುರಿಕೆ ಶಾಖಾ ನಾಲೆ ಮತ್ತು ಚಿಕ್ಕನಾಯಕನಹಳ್ಳಿ ಶಾಖಾ ವಿತರಣಾ ಫೀಡರ್ ಕಾಲುವೆ ಮೂಲಕ ತಾಲ್ಲೂಕಿನ 12 ಕೆರೆಗಳಿಗೆ ಸೌಲಭ್ಯ ಸಿಗಲಿದೆ. ಹಾಲ್ಕುರಿಕೆ ಶಾಖಾ ನಾಲೆಯ 79 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಇದರಲ್ಲಿ 32 ಎಕರೆಗೆ ಅವಾರ್ಡ್ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ಶಾಖಾ ನಾಲೆಯ ಕಾಮಾಗಾರಿಗೆ 168 ಎಕರೆ ಭೂಮಿ ಸ್ವಾಧೀನಪಡಿಸಿ ಕೊಂಡಿದ್ದು 93 ಎಕರೆ ಅವಾರ್ಡ್ ಮಾಡಲಾಗಿದೆ. ರೈತರು ಅಗತ್ಯ ದಾಖಲೆಗಳನ್ನು ಒದಗಿಸಿದರೆ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದರು.
ನಾನು ಜಾತ್ಯತೀತ ನಾಯಕ
ನಾನು ಜಾತ್ಯತೀತ ನಾಯಕ ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುತ್ತೇನೆ. ಸರ್ವ ಧರ್ಮ ಸಮ್ಮೇಳನ ನಡೆಸಿದ್ದು ಒಂದು ಕೋಮಿನ ದೇವರ ಮೆರವಣಿಗೆಗೆ ಅಡ್ಡಿಪಡಿಸಿದವರನ್ನು ಖಂಡಿಸಿದ್ದೇ ಕಳೆದ ಬಾರಿಯ ನನ್ನ ಸೋಲಿಗೆ ಕಾರಣವಾಯಿತು. ಲಿಂಗಾಯತರು ನನ್ನ ಮತದಾರರಲ್ಲ ಅವರಿಗೆ ಅನ್ಯಾಯ ಮಾಡಲು ತಾಲ್ಲೂಕಿನಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳ ಕುರಿತು ಶಾಸಕರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬ ಚಿತ್ರ ನಿರ್ದೇಶಕ ಲಿಂಗದೇವರು ಅವರ ಗಂಭೀರ ಆರೋಪಕ್ಕೆ ಶಾಸಕ ಸುರೇಶಬಾಬು ಈ ರೀತಿ ಪ್ರತಿಕ್ರಿಯಿಸಿದರು. ನೀರಾವರಿ ಯೋಜನೆ ಸೌಲಭ್ಯ ಗಳನ್ನು ಜಾತಿ ನೋಡಿ ಮಾಡಿಲ್ಲ ಎಂದರು. ನೀರಾವರಿ ಹೋರಾಟಕ್ಕೆ ಅವರ ಕೊಡುಗೆ ಏನು ? ನಿರ್ದೇಶಕರು ಹತಾಶರಾಗಿದ್ದಾರೆ. ಅವರು ಏನು ಆಸೆ ಇಟ್ಟುಕೊಂಡಿದ್ದರೋ ಈಗ ಭ್ರಮನಿರಸನ ಗೊಂಡಿದ್ದಾರೆ ಹೀಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.