Karnataka Weather: ಇಂದು ಬೆಂಗಳೂರಿನಲ್ಲಿ ಮುಂಜಾನೆ ದಟ್ಟ ಮಂಜು, ಉಳಿದೆಡೆ ಒಣ ಹವೆ
ಕರ್ನಾಟಕ ರಾಜ್ಯ ಹವಾಮಾನ: ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಳವಾಗುತ್ತಿದೆ. ಮುಂದಿನ ಎರಡು ದಿನ ಕನಿಷ್ಠ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮುಂದಿನ 5 ದಿನ ಹವಾಮಾಣ ಹೇಗಿರಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ.16: ರಾಜ್ಯದಲ್ಲಿ ಚಳಿಯ ತೀವ್ರತೆ ಮುಂದುವರಿದಿದ್ದು, ಮುಂದಿನ ಎರಡು ದಿನ ಕನಿಷ್ಠ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಮುಖ್ಯವಾಗಿ ಸ್ಪಷ್ಟ ಆಕಾಶ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 14°C ಇರುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ (Karnataka Weather) ಮಾಹಿತಿ ನೀಡಿದೆ.
ಕರ್ನಾಟಕದ ಸಮತಟ್ಟಾದ ಪ್ರದೇಶಗಳಲ್ಲಿ ದಾವಣಗೆರೆ, ಬೀದರ್ ಮತ್ತು ಹಾವೇರಿಯಲ್ಲಿ ಭಾನುವಾರ ರಾಜ್ಯದಲ್ಲೇ ಅತಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆ. ದಾಖಲಾಗಿದೆ. ಈ ಮೂರು ಜಿಲ್ಲೆಗಳಲ್ಲಿ ಶೀತ ಗಾಳಿಯಿಂದ ಚಳಿಯ ತೀವ್ರತೆ ಹೆಚ್ಚಾಗಿತ್ತು. ಇನ್ನು ಡಿ. 16ರಿಂದ 21ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣ ಹವಾಮನ ಇರಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ರಾಯಚೂರು ಮತ್ತು ಹಾವೇರಿ ಮತ್ತು ಆಗುಂಬೆ, ಬೆಂಗಳೂರು ದಾವಣಗೆರೆ, ಹಾಸನ, ಚಿಂತಾಮಣಿ ಮತ್ತು ಶಿವಮೊಗ್ಗದಲ್ಲಿ ಕನಿಷ್ಠ ಉಷ್ಣಾಂಶವು 10- 12.8°C ವ್ಯಾಪ್ತಿಯಲ್ಲಿತ್ತು. ಕೊಪ್ಪಳ, ಕಲಬುರಗಿ ಮತ್ತು ಬೆಂಗಳೂರು ನಗರ, ಚಿತ್ರದುರ್ಗ, ಮಂಡ್ಯ ಮತ್ತು ಮೈಸೂರು ದಕ್ಷಿಣ ಒಳನಾಡಿನಲ್ಲಿ ಮತ್ತು ಕರಾವಳಿ ಕರ್ನಾಟಕದಲ್ಲಿ 18-19.6 °C ವ್ಯಾಪ್ತಿಯಲ್ಲಿತ್ತು.
Health Tips: ರಾಗಿ ತಿಂದವ ನಿರೋಗಿ! – ಚಳಿಗಾಲದಲ್ಲಿ ಹೀಗಿರಲಿ ನಿಮ್ಮ ಫುಡ್ ಸಿಸ್ಟಮ್
ಇನ್ನು ರಾಜ್ಯದ ಕೆಳಭಾಗದ ಉಷ್ಣವಲಯದಲ್ಲಿ ಈಶಾನ್ಯದಿಂದ ಆಗ್ನೆಯ ದಿಕ್ಕಿನತ್ತ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ತಮಿಳುನಾಡು ಮತ್ತು ನೆರೆಹೊರೆ ಪ್ರದೇಶಗಳಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.