ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹೊಸಪೇಟೆ ಜಿಲ್ಲೆ ಮಟ್ಟಿಗೆ ಸಾಧನೆ
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1249.64 ಹೆಕ್ಟೇರ್ ಪ್ರದೇಶ ಕಬ್ಬು ಬೆಳೆಯಲಾಗುತ್ತಿದೆ. ಕೊಳವೆ ಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ.


ಅನಂತ ಪದ್ಮನಾಭರಾವ್, ಹೊಸಪೇಟೆ
ನಡೆದಿದೆ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸಿದ್ಧತೆ
ಎಚ್.ಬಿ.ಹಳ್ಳಿ ತಾಲೂಕಿನಲ್ಲಿ ಭೂಮಿ ನಿಗದಿ
ಬಂಗಾರು ಶುಗರ್ಸ್ ಕಂಪನಿಯಿಂದ ತಯಾರಿ
ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಹೆಚ್ಚಿದ ಸಂತ
ವಿಜಯನಗರ (ಹೊಸಪೇಟೆ) ಜಿಲ್ಲೆಯ ಮಟ್ಟಿಗೆ ಭೌಗೋಳಿಕವಾಗಿ ಮಧ್ಯ ಪ್ರದೇಶದಂತಿದೆ ಹಗರಿ ಬೊಮ್ಮನಹಳ್ಳಿ. ಈ ತಾಲೂಕಿನ ಕೆಚ್ಚಿನಬಂಡಿ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. ಇದರಿಂದಾಗಿ ಜಿಲ್ಲೆಯ ಪಶ್ಚಿಮ ತಾಲೂಕುಗಳ ರೈತರಲ್ಲಿ, ಕಬ್ಬು ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.
ಎಷ್ಟು ಕಬ್ಬಿನ ಪ್ರದೇಶ : ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1249.64 ಹೆಕ್ಟೇರ್ ಪ್ರದೇಶ ಕಬ್ಬು ಬೆಳೆಯಲಾಗುತ್ತಿದೆ. ಕೊಳವೆಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ. ಇದುವರೆಗೂ ತಾಲೂಕಿನ ರೈತರು ದುಗ್ಗಾವತಿ, ಮೈಲಾರ ಮತ್ತು ಮುಂಡರಗಿ ಬಳಿ ಇರುವ ಕಾರ್ಖಾನೆಯನ್ನು ಅವಲಂಬಿಸಿದ್ದು, ಸಾಗಣೆ ವೆಚ್ಚ ಹೊರೆಯಾಗಿತ್ತು. ಕಾರ್ಖಾನೆ ಸ್ಥಾಪನೆಯಾದಲ್ಲಿ ಪಶ್ಚಿಮ ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ.
ಸಕ್ಕರೆ ಕಾರ್ಖಾನೆ ಏಳು ಬೀಳು: ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಒಂದು ಖಾಸಗಿ ಸಕ್ಕರೆ ಕಾರ್ಖಾನೆ ಇತ್ತು. ಅದು ಪೂರ್ತಿ ಬಂದ್ ಆಗಿ ಸುಮಾರು ಇಪ್ಪತ್ತೈದು ವರ್ಷಗಳೇ ಆಗಿ ಹೋಗಿವೆ. ಅದಾಗ ಹೊಸಪೇಟೆಯಲ್ಲಿದ್ದ ಒಂದು ಖಾಸಗಿ ಸಕ್ಕರೆ ಕಾರ್ಖಾನೆ ಕೂಡ ಏಳೆಂಟು ವರ್ಷಗಳ ಹಿಂದೆಯೇ ಮುಚ್ಚಿ ಹೋಗಿದೆ. ಬಹುತೇಕ ಆರ್ಥಿಕ ಲಾಭ ನಷ್ಟಗಳ ಲೆಕ್ಕಾಚಾರದ ಕಾರಣಗಳಿಗೆ ಇವೆರಡೂ ಕಾರ್ಖಾನೆ ಬಂದ್ ಆಗಿ ಇತಿಹಾಸದ ಪುಟ ಸೇರಿವೆ. ಇನ್ನು ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಸಕ್ಕರೆ ಕಾರ್ಖಾನೆ ಸುಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಇದೀಗ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ತಲೆ ಎತ್ತುವ ಹೊಸ ಸಕ್ಕರೆ ಕಾರ್ಖಾನೆ ಈ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಹೊಸ ಭರವಸೆಯ ಆಶಾಕಿರಣವಾಗುವ ಸಾಧ್ಯತೆಗಳಿವೆ.
ಅಗತ್ಯ ಭೂಮಿ ಖರೀದಿ: ಕರ್ನಾಟಕ ಬಂಗಾರು ಶುಗರ್ಸ್ ಪ್ರೈವೇಟ್ ಲಿಮಿಟೆಡ್ನಿಂದ ಕಾರ್ಖಾನೆ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಖರೀದಿಸಿದೆ. ಈ ಕುರಿತಂತೆ ಸರಕಾರಕ್ಕೆ ಫೆ.22 ಮತ್ತು ಮೇ 20, 2024ರಂದು ಪ್ರಸ್ತಾವ ಸಲ್ಲಿಸಲಾಗಿದೆ. ಈಗಾಗಲೇ ತಾಲೂಕಿನ ತಹಸೀಲ್ದಾರ್ ಹಾಗೂ ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಂಟಿಯಾಗಿ ಸರ್ವೇ ಮಾಡಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಈ ಕುರಿತು ಸರ್ವೇ ಆಫ್ ಇಂಡಿಯಾದ ನಿರ್ದೇಕರು ನೀಡಿರುವ ವರದಿಯನ್ನಾಧರಿಸಿ ಅಂತರ ಪ್ರಮಾಣ ಪತ್ರ ನೀಡಲು ಹಾಗೂ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಆಯಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗೆ 2025ರ ಮೆ 21ರಂದು ಪತ್ರ ಬರೆದಿದ್ದಾರೆ.
ಮೂರು ಕಡೆ ಸಂಪರ್ಕ ರಸ್ತೆ : ಕಾರ್ಖಾನೆಯ ಸಂಪರ್ಕಕ್ಕೆ ಅಗತ್ಯವಾದ ಮೂರು ರಸ್ತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಹೊಸಪೇಟೆ- ಶಿವಮೊಗ್ಗ ಹೆದ್ದಾರಿ, ಆನೇಕಲ್ಲು- ಹಂಪಾಪಟ್ಟಣ, ಕೆಚ್ಚಿನಬಂಡಿ-ಹಲಗಾಪುರ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಕಾರ್ಖಾನೆ ಉದ್ದೇಶಿತ ಸ್ಥಳದ ಜಮೀನುಗಳ ಅಕ್ಕ ಪಕ್ಕದಲ್ಲಿಯೇ ಪರಿಶಿಷ್ಟ ಜಾತಿಯ ರೈತರ ಜಮೀನುಗಳಿವೆ. ಬದುಕು ಕಟ್ಟಿ ಕೊಳ್ಳಲು ಈ ಜಮೀನುಗಳೇ ಆಸರೆಯಾಗಿದ್ದು, ಯಾವುದೇ ಕಾರಣಕ್ಕೂ ಭೂಮಿ ಸ್ವಾಧೀನ ಪಡಿಸಿ ಕೊಳ್ಳಬಾರದು ಎಂದು ಪರಿಶಿಷ್ಟ ಜಾತಿಯ ರೈತರ ಒತ್ತಾಯವೂ ಇದೆ. ಆದರೆ ಕಾರ್ಖಾನೆ ಸ್ಥಾಪನೆಗೆ ಅನುಮತಿಗಾಗಿ ಆಡಳಿತಾತ್ಮಕ ಚಟುವಟಿಕೆ ವೇಗ ಪಡೆದುಕೊಂಡಿವೆ.
*
ಜಿಲ್ಲೆಯಲ್ಲಿ ಇನ್ನೂ ಹತ್ತು ಸಕ್ಕರೆ ಕಾರ್ಖಾನೆ ಬಂದರೂ ಸ್ವಾಗತಿಸುವೆ. ರೈತರಿಗೆ ಅನುಕೂಲವಾಗುವು ದಾದರೇ ಕಾರ್ಖಾನೆ ಸ್ಥಾಪನೆ ಮಾಡುವುದರಲ್ಲಿ ಏನು ಸಮಸ್ಯೆ ಇಲ್ಲ. ನಮ್ಮ ವಿಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೈತರ ಸಲುವಾಗಿ ಈ ಹಿಂದೆ ಹೇಳಿದಂತೆ ಸಕ್ಕರೆ ಕಾರ್ಖಾನೆ ತೆರೆಯಲಾಗು ವುದು.
-ಎಚ್.ಆರ್. ಗವಿಯಪ್ಪ ಶಾಸಕರು,
ವಿಜಯನಗರ ಕ್ಷೇತ್ರ. ಸಕ್ಕರೆ ಕಾರ್ಖಾನೆ ಸ್ಥಾಪನೆಯಿಂದ ರೈತರಿಗೆ ಒಳ್ಳೆಯದು ಆಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಒಂದೇ ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪಿಸಬಾರದು ಎಂಬುದೇನಿಲ್ಲ. ಇದರಿಂದ ರೈತರ ಸಂಕಷ್ಟವೂ ನೀಗುವ ವಿಶ್ವಾಸವಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಎಲ್ಲಾ ಅಧಿಕೃತ ಮಾಹಿತಿ ಹಂಚಿಕೊಳ್ಳುವೆ.
-ರಾಣಿ ಸಂಯುಕ್ತಾ, ಕಾಂಗ್ರೆಸ್ ನಾಯಕಿ, ಹೊಸಪೇಟೆ