ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಾರ್ಖಂಡ್ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನ

Sudivya Kumar: ಜಾರ್ಖಂಡ್ ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಿರಿಯ ನಾಯಕ ಸುದಿವ್ಯಾ ಕುಮಾರ್ ಸೋನು (56) ಶನಿವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಯಲ್ಲಿದ್ದಾಗ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಅವರು ನಿಧನರಾಗಿದ್ದಾರೆ.

ಜಾರ್ಖಂಡ್ ಉನ್ನತ ಶಿಕ್ಷಣ ಸಚಿವ ಸುದಿವ್ಯಾ ಕುಮಾರ್ ನಿಧನ

ಸಂಗ್ರಹ ಚಿತ್ರ -

ಜಾರ್ಖಂಡ್: ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ( Jharkhand Higher Education Minister) ಸುದಿವ್ಯಾ ಕುಮಾರ್ ಸೋನು (56) (Sudivya Kumar sonu) ಅವರು ಶನಿವಾರ ತಡರಾತ್ರಿ ಹೃದಯಾಘಾತದಿಂದ (Cardiac Arrest) ನಿಧನರಾಗಿದ್ದಾರೆ. ಗಿರಿದಿಹ್‌ನಲ್ಲಿ ಎರಡು ಬಾರಿ ಶಾಸಕರಾಗಿದ್ದ ಅವರು ಮನೆಯಲ್ಲಿದ್ದಾಗ ಅಸ್ವಸ್ಥರಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಮೃತಪಟ್ಟಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಿರಿಯ ನಾಯಕರಾಗಿದ್ದ ಸುದಿವ್ಯಾ ಕುಮಾರ್ ಸೋನು ಗಿರಿದಿಹ್‌ನಲ್ಲಿ ಎರಡು ಬಾರಿ ಶಾಸಕರಾಗಿದ್ದರು.

ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ನಗರಾಭಿವೃದ್ಧಿ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಯುವ ವ್ಯವಹಾರಗಳು ಸೇರಿದಂತೆ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿರುವ ಸುದಿವ್ಯಾ ಕುಮಾರ್ ಸೋನು ಅವರನ್ನು ಶನಿವಾರ ರಾತ್ರಿ ಗಿರಿದಿಹ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ವೇಳೆ ನಿಧನರಾಗಿದ್ದಾರೆ.

ಉಚಿತ ಲ್ಯಾಪ್‌ಟಾಪ್ ಯೋಜನೆ ಹೆಸರಿನಲ್ಲಿ ವಂಚನೆ: ವಿದ್ಯಾರ್ಥಿಗಳಿಗೆ PIB ಎಚ್ಚರಿಕೆ

ಹಿರಿಯ ನಾಯಕನ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ, ಅವರ ಅಗಲಿಕೆ ಪಕ್ಷ, ಸರ್ಕಾರ ಮತ್ತು ಜಾರ್ಖಂಡ್‌ಗೆ ಭರಿಸಲಾಗದ ನಷ್ಟ. ಅವರ ಹೋರಾಟ, ಸೇವೆ ಮತ್ತು ಕೊಡುಗೆಗಳನ್ನು ಯಾವಾಗಲೂ ಸ್ಮರಣೀಯವಾಗಿಡಲಾಗುವುದು. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬ ಮತ್ತು ಎಲ್ಲಾ ಒಡನಾಡಿಗಳಿಗೆ ಶಕ್ತಿ ನೀಡಲಿ ತಿಳಿಸಿದೆ.



ಜೆಎಂಎಂ ನಾಯಕ ಮತ್ತು ರಾಜ್ಯ ಸಾರಿಗೆ ಸಚಿವ ದೀಪಕ್ ಬಿರುವಾ ಅವರು ಕೂಡ ಆಘಾತ ವ್ಯಕ್ತಪಡಿಸಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಇದು ಜೆಎಂಎಂ ಕುಟುಂಬಕ್ಕೆ ಭಾರಿ ನಷ್ಟ ಎಂದು ತಿಳಿಸಿದರು.

ಸುದಿವ್ಯ ಕುಮಾರ್ ಸೋನು ಯಾರು?

1970ರಲ್ಲಿ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಜನಿಸಿರುವ ಸುದಿವ್ಯ ಕುಮಾರ್ ಸೋನು ಅವರು ಜೆಎಂಎಂನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಆಪ್ತ ಸಹಾಯಕರಾಗಿದ್ದ ಇವರು 1989ಕ್ಕೂ ಮೊದಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. 2019ರಲ್ಲಿ ಗಿರಿದಿಹ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಸುದಿವ್ಯ ಕುಮಾರ್ ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದ ಸೋನು ಅವರು ಗಮನ ಸೆಳೆದಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಗೆ ಸಂಬಂಧಿಸಿ ಹಿಮಾಚಲ ಸಿಎಂ ಸುಖವಿಂದರ್ ಸಿಂಗ್ ಸುಖು ರಾಜೀನಾಮೆಗೆ ಒತ್ತಾಯಿಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಬಳಿಕ ಅವರು ನೀಡಿದ ಸ್ಪಷ್ಟಿಕರಣವು ಕೂಡ ವಿವಾದಾತ್ಮಕವಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿ ಅವರು ಹೆಚ್ಚಿನ ವಿವರಣೆಯನ್ನು ನೀಡಿರಲಿಲ್ಲ.

2024 ರಲ್ಲಿ ಭೂ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಕುಮಾರ್ ಸೋರೆನ್ ಬಂಧನದ ಬಳಿಕ ಹಲವಾರು ರಾಜಕೀಯ ಸವಾಲುಗಳನ್ನು ಎದುರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸುದಿವ್ಯ ಕುಮಾರ್ ಅವರು ಇತ್ತೀಚೆಗೆ ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ನಿರ್ವಹಣಾ ಪದ್ಧತಿಗಳನ್ನು ಅಧ್ಯಯನ ಮಾಡಲು ಜಾರ್ಖಂಡ್ ಸರ್ಕಾರದ ನಿಯೋಗದ ನೇತೃತ್ವ ವಹಿಸಿ ಕರ್ನಾಟಕಕ್ಕೆ ಬಂದಿದ್ದು, ಪ್ರವಾಸೋದ್ಯಮ ಮತ್ತು ಅರಣ್ಯ ನಿರ್ವಹಣೆಯಲ್ಲಿ ಸಹಯೋಗಕ್ಕೆ ಸಂಬಂಧಿಸಿ ಕರ್ನಾಟಕ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಶಿಕ್ಷಕರ ದಿನಾಚರಣೆ ನಿಮಿತ್ತ ಬೃಹತ್ ರಕ್ತದಾನ ಶಿಬಿರ: ಸಿಇಒ ರಾಹುಲ್ ಶಿಂಧೆ ಕರೆಗೆ ಭರ್ಜರಿ ಸ್ಪಂದನೆ, ರಕ್ತ ಸಂಗ್ರಹದಲ್ಲಿ ದಾಖಲೆ ಬರೆದ ಬೆಳಗಾವಿ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಕೂಡ ಸುದಿವ್ಯ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು ಈ ಸಾವು ನನಗೆ ವೈಯಕ್ತಿಕ ನಷ್ಟ. ರಾಜ್ಯದ ಗುರುತು ಮತ್ತು ಹಕ್ಕುಗಳಿಗೆ ಅವರು ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ.