Operation Sindoor: ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣಕ್ಕೆ ಭಾರತದ ಡ್ರೋನ್ ದಾಳಿ, ಪಿಎಸ್ಎಲ್ ಪಂದ್ಯ ರದ್ದು
Operation Sindoor: ಪಾಕ್ ಹಾಗೂ ಇಂಗ್ಲೆಂಡ್ನ ಆಟಗಾರರು ಇರುವ ತಂಡಗಳ ಪಂದ್ಯ ನಡೆಯುವುದಕ್ಕೆ ಸ್ವಲ್ಪವೇ ಮೊದಲು ರಾವಲ್ಪಿಂಡಿಯ ಕ್ರಿಕೆಟ್ ಕ್ರೀಡಾಂಗಣದ ಬಳಿ ಭಾರತ ಡ್ರೋನ್ ದಾಳಿ ನಡೆಸಿದೆ. ಇದೀಗ, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸುವ ಕ್ರಿಕೆಟಿಗರು ರಾವಲ್ಪಿಂಡಿಯನ್ನು ತೊರೆಯುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಚ್ಚರಿಸಿದೆ.

ರಾವಲ್ಪಿಂಡಿಯಲ್ಲಿ ಡ್ರೋನ್ ದಾಳಿ

ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವಿನ ಯುದ್ಧ ಸನ್ನಿವೇಶ ಇನ್ನಷ್ಟು ಉಲ್ಬಣಗೊಂಡಿದೆ. ಆಪರೇಶನ್ ಸಿಂದೂರ್ (Operation Sindoor) ಮುಂದುವರಿದಿದ್ದು, ಪೇಶಾವರ್ ಝಲ್ಮಿ ವರ್ಸಸ್ ಕರಾಚಿ ಕಿಂಗ್ಸ್ ಪಿಎಸ್ಎಲ್ 2025 ಪಂದ್ಯಕ್ಕೆ (PSL match) ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ಬಳಿ ಡ್ರೋನ್ ದಾಳಿ (Drone attack) ನಡೆದಿದೆ. ಇದರಿಂದ ಕಂಗಾಲಾಗಿರುವ ಪಿಸಿಬಿ (ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್) ಕೂಡಲೇ ರಾವಲ್ಪಿಂಡಿ ತೊರೆಯುವಂತೆ ಎಲ್ಲ ಕ್ರಿಕೆಟ್ ಆಟಗಾರರಿಗೆ ಕರೆ ನೀಡಿದೆ. ಸದ್ಯ ಎಲ್ಲ ಆಯೋಜಿತ ಕ್ರಿಕೆಟ್ ಪಂದ್ಯಗಳು ರದ್ದಾಗಿವೆ.
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದ ಬಳಿ ಡ್ರೋನ್ ಪತನಗೊಂಡು ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ದಾಳಿ ಕ್ರೀಡಾಂಗಣದ ಪಕ್ಕದಲ್ಲಿರುವ ರೆಸ್ಟೋರೆಂಟ್ ಕಟ್ಟಡಕ್ಕೆ ಭಾಗಶಃ ಹಾನಿಯನ್ನುಂಟುಮಾಡಿದೆ. ಅಧಿಕಾರಿಗಳು ಪ್ರದೇಶವನ್ನು ಸುತ್ತುವರೆದಿದ್ದಾರೆ. ಡ್ರೋನ್ನ ಮೂಲ ಮತ್ತು ಅದರ ಪೇಲೋಡ್ ಅನ್ನು ನಿರ್ಧರಿಸಲಾಗುತ್ತಿದೆ. ಡ್ರೋನ್ ದಾಳಿ ವೇಳೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿವೆ.
🚨 An Indian drone crashed near the food street adjacent to #Rawalpindi Cricket Stadium after colliding with a tree. The crash caused a fire at the site. On one hand, we are attacking India through social media; on the other hand, all of this is being watched . What's going on? pic.twitter.com/tKs10Nikd1
— Islamabadies (@Islamabadies) May 8, 2025
ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 8ರ ಗುರುವಾರ ರಾತ್ರಿ 8ಗಂಟೆಗೆ ಪೇಶಾವರ್ ಝಲ್ಮಿ vs ಕರಾಚಿ ಕಿಂಗ್ಸ್ PSL 2025 ಪಂದ್ಯವನ್ನು ಆಯೋಜಿಸಲಾಗಿತ್ತು. ಪಿಎಸ್ಎಲ್ನಲ್ಲಿರುವ ಇಂಗ್ಲೆಂಡ್ ತಂಡವು ಈ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕ್ನಲ್ಲಿಯೇ ಉಳಿಯಬೇಕೆ ಅಥವಾ ತಮ್ಮ ದೇಶಕ್ಕೆ ಮನೆಗೆ ಮರಳಬೇಕೆ ಗೊಂದಲ ಇದ್ದಾಗಲೇ ಈ ದಾಳಿ ನಡೆದಿದೆ. ಇದೀಗ, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸುವ ಕ್ರಿಕೆಟಿಗರು- ಸ್ಥಳೀಯ ಮತ್ತು ವಿದೇಶಿ ಕ್ರಿಕೆಟಿಗರು ಸೇರಿದಂತೆ - ರಾವಲ್ಪಿಂಡಿಯನ್ನು ತೊರೆಯುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಚ್ಚರಿಸಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿನ ಸೋಲಿನ ನಂತರ ಪಾಕಿಸ್ತಾನ ಸೂಪರ್ ಲೀಗ್ ಸ್ವಲ್ಪ ಆದಾಯವನ್ನು ಒದಗಿಸುತ್ತಿತ್ತು. ಇದೀಗ ದಾಳಿಗಳಿಂದ ಪಿಸಿಬಿಗೆ ಹಿನ್ನಡೆಯಾಗಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಆಟಗಾರರ ಸುರಕ್ಷತೆಯನ್ನು ಪರಿಶೀಲಿಸಲು ತುರ್ತು ಸಭೆ ನಡೆಸಿವೆ. ಹೆಚ್ಚಿನ ಇಂಗ್ಲೆಂಡ್ ಕ್ರಿಕೆಟಿಗರು ಪ್ರಸ್ತುತ ಭದ್ರತಾ ವ್ಯವಸ್ಥೆಗಳನ್ನು ನಂಬಿ ಪಾಕಿಸ್ತಾನದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಆದರೆ ಕೆಲವು ಆಟಗಾರರು ಯುಕೆಗೆ ಮರಳಲು ಮುಂದಾಗಿದ್ದಾರೆ.
ಗುರುವಾರ ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿ ನಗರಗಳಲ್ಲಿ ಸರಣಿ ಸ್ಫೋಟಗಳು ನಡೆದಿವೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ ನಗರದಲ್ಲಿ ಇಂದು ಬೆಳಿಗ್ಗೆ ಮೂರು ಸ್ಫೋಟಗಳು ಸಂಭವಿಸಿದ್ದು, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಅವರು ಜೀವ ಭಯದಿಂದ ತಮ್ಮ ಮನೆಗಳನ್ನು ತೊರೆದು ಪರಾರಿಯಾಗಿದ್ದಾರೆ.
ಕರಾಚಿಯಲ್ಲಿ, ಮಾಲಿರ್ನ ಶರಫಿ ಗೋತ್ ಬಳಿ ನಿವಾಸಿಗಳು ಸ್ಫೋಟದ ಶಬ್ದವನ್ನು ಕೇಳಿದ್ದಾರೆ. ವಾಲ್ಟನ್ ರಸ್ತೆಯಲ್ಲಿ ಸತತ ಮೂರು ಸ್ಫೋಟಗಳ ನಂತರ ನಿವಾಸಿಗಳು ಓಡಿಹೋಗುತ್ತಿದ್ದಂತೆ ಲಾಹೋರ್ನಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಬೀದಿಗಳಲ್ಲಿ ಭೀತಿ ಹರಡುತ್ತಿದ್ದಂತೆ ನಗರದ ಆಕಾಶವನ್ನು ಹೊಗೆಯ ಮೋಡಗಳು ತುಂಬಿದವು. ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನದವರೆಗೆ ಲಾಹೋರ್ ಮತ್ತು ಸಿಯಾಲ್ಕೋಟ್ ವಿಮಾನ ನಿಲ್ದಾಣಗಳಲ್ಲಿ ವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ಮಧ್ಯಾಹ್ನ ಪತ್ರಿಕಾ ಹೇಳಿಕೆಯಲ್ಲಿ, ಭಾರತದ ರಕ್ಷಣಾ ಸಚಿವಾಲಯವು ಹೀಗೆ ಹೇಳಿದೆ: "ಇಂದು ಬೆಳಿಗ್ಗೆ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದವು. ಪಾಕಿಸ್ತಾನ ದಾಳಿಯನ್ನು ತೀವ್ರಗೊಳಿಸಲು ಯತ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಲಾಗಿದೆ. ಲಾಹೋರ್ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಗೊಳಿಸಲಾಗಿದೆ" ಎಂದಿದೆ.
ಇದನ್ನೂ ಓದಿ: Operation Sindoor: ಆಪರೇಷನ್ ಸಿಂಧೂರ್ ನಂತರ ನೇರಪ್ರಸಾರದ ವೇಳೆ ಕಣ್ಣೀರಿಟ್ಟ ಪಾಕಿಸ್ತಾನಿ ನ್ಯೂಸ್ ಆ್ಯಂಕರ್