ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajendra Bhat column: ತಮಿಳುನಾಡಿನ ಚಹರೆಯನ್ನೇ ಬದಲಾಯಿಸಿದ ಮಹಾ ನಾಯಕ!

ತಮಿಳುನಾಡಿನ ಕೋಟಿ ಕೋಟಿ ಭಾವುಕ ಅಭಿಮಾನಿಗಳು ತಮಿಳುನಾಡಿನಲ್ಲಿ ಜನಿಸಿರದ, ತಮಿಳನೂ ಅಲ್ಲದ ಒಬ್ಬ ಸಿನೆಮಾ ಸ್ಟಾರನ್ನು ದೇವರು ಮಾಡಿ ಪೂಜೆ ಮಾಡಿದ್ದು ಒಂದು ಅದ್ಭುತವೇ! ಅವರು ಎಂಜಿಆರ್.

ತಮಿಳುನಾಡಿನ ಚಹರೆಯನ್ನೇ  ಬದಲಾಯಿಸಿದ ಮಹಾ ನಾಯಕ‌ ಎಂಜಿಆರ್!

-

ಹರೀಶ್‌ ಕೇರ
ಹರೀಶ್‌ ಕೇರ Jan 18, 2025 7:29 AM

ಬಿಲೇಟೆಡ್ ಹ್ಯಾಪಿ ಬರ್ತ್‌ಡೇ ಪುರುಚ್ಚಿ ತಲೈವರ್ ಎಂಜಿಆರ್

- ರಾಜೇಂದ್ರ ಭಟ್ ಕೆ.

rajendra bhat

Rajendra Bhat Column: ತಮಿಳುನಾಡಿನ (Tamil Nadu) ಸಿನಿಮಾರಂಗ, ರಾಜಕೀಯ ರಂಗ ಮತ್ತು ಸಾಂಸ್ಕೃತಿಕ ಅಸ್ಮಿತೆಗಳ ಚಹರೆಯನ್ನು ಬದಲಾಯಿಸಿದ ಒಂದು ಹೆಸರು ಇದ್ದರೆ ಅದು ಖಚಿತವಾಗಿಯೂ ಎಂ.ಜಿ. ರಾಮಚಂದ್ರನ್ (MG Ramachandran) ಎಂದು ಹೇಳಬಹುದು. ಅವರ ಬದುಕಿನ ಪ್ರತೀ ಪುಟವೂ ಅವರ ಸಿನೆಮಾಗಳ ಹಾಗೆ ವರ್ಣರಂಜಿತ ಮತ್ತು ಸ್ಫೂರ್ತಿದಾಯಕ ಸಂಗತಿ!

ಅನಾಥವಾದ ಬಾಲ್ಯದ ಅಸಹಾಯಕತೆ

ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಎಂ.ಜಿ. ಆರ್ ಹುಟ್ಟಿದ್ದು ತಮಿಳುನಾಡಿನಲ್ಲಿ ಅಲ್ಲ. ಅವರು ಹುಟ್ಟಿದ್ದು ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ! ಅದೂ ಮಲಯಾಳಿ ಕುಟುಂಬದಲ್ಲಿ!

ಎರಡೂವರೆ ವರ್ಷದ ಬಹಳ ಸಣ್ಣ ಪ್ರಾಯದಲ್ಲಿ ಅಪ್ಪನನ್ನು ಕಳೆದುಕೊಂಡಾಗ ತನ್ನ ಇಬ್ಬರು ಗಂಡು ಮಕ್ಕಳನ್ನು ಎದೆಗೆ ಅವುಚಿಕೊಂಡು ಅವರ ಅಮ್ಮ ಸತ್ಯಭಾಮ ಮಾಡದ ಕೆಲಸಗಳೇ ಇಲ್ಲ! ಈ ಭಾರೀ ಕಷ್ಟಗಳ ನಡುವೆ ಅಣ್ಣ ತಮ್ಮಂದಿರಾದ ರಾಮಚಂದ್ರನ್ ಮತ್ತು ಚಕ್ರಪಾಣಿ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಡ್ರಾಪ್ ಔಟ್ ಆದರು! ಹೊಟ್ಟೆಪಾಡಿಗೆ ಅವರು ಸೇರಿದ್ದು ನಾಟಕ ಮಂಡಳಿಯನ್ನು. ಆರಂಭದಲ್ಲಿ ರಾಮಚಂದ್ರನ್ ಮಾಡಿದ್ದು ಸ್ತ್ರೀ ಪಾತ್ರಗಳನ್ನು. ಮುಂದೆ ಅವರಿಬ್ಬರೂ ಪ್ರಸಿದ್ಧ ನಾಟಕ ಕಲಾವಿದರಾದರು.

ಹತ್ತೊಂಬತ್ತನೆಯ ವಯಸ್ಸಿಗೇ ಸಿನೆಮಾ ಹೀರೋ ಆದರು

1936ರಲ್ಲಿ 'ಸತೀ ಶೀಲವತಿ' ಎಂಬ ಸಿನೆಮಾದ ಮೂಲಕ ತಮಿಳು ಸಿನೆಮಾ ರಂಗವನ್ನು ಪ್ರವೇಶಿಸಿದಾಗ ಅವರಿಗೆ ಕೇವಲ 19 ವರ್ಷ! ಯಾವುದೇ ಗಾಡ್ ಫಾದರ್ ಅಥವಾ ಸಪೋರ್ಟರ್ ಇಲ್ಲದೆ ಅವರು ಸಿನಿಮಾರಂಗದಲ್ಲಿ ಮುಂದೆ ಅರ್ಧ ಶತಕಗಳ ಕಾಲ ಸೂಪರ್ ಸ್ಟಾರ್ ಆಗಿ ಮಿಂಚಿದ್ದು ತನ್ನ ಸ್ವಂತ ಪ್ರತಿಭೆಯಿಂದ! ಆಗ ಅವರಿಗೆ ಚಿತ್ರಕತೆ ಮತ್ತು ಸಂಭಾಷಣೆಗಳನ್ನು ಬರೆಯುತ್ತಿದ್ದ ಕರುಣಾನಿಧಿ ಮುಂದೆ ಅವರ ರಾಜಕೀಯದ ಕಡು ವೈರಿ ಆದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು!

MGR3

ರಾಜಕೀಯ ಗುರು ಅಣ್ಣಾದೊರೈ ಅವರ ದಟ್ಟ ಪ್ರಭಾವ!

ಒಂದರ ಹಿಂದೆ ಒಂದು ಸಿನೆಮಾ ಸೂಪರ್ ಹಿಟ್ ಆಗುತ್ತಾ ಹೋದಹಾಗೆ ರಾಮಚಂದ್ರನ್ ತಮಿಳು ಸಿನಿಮಾದಲ್ಲಿ 'ಡೆಮಿ ಗಾಡ್ 'ಎಂದು ಕರೆಸಿಕೊಂಡರು! ಅವರಿಗೆ ತಮಿಳುನಾಡಿನಲ್ಲಿ ಕೋಟಿ ಕೋಟಿ ಅಭಿಮಾನಿಗಳು. ಆ ಕಾಲದಲ್ಲಿ ತಮಿಳು ಸಿನಿಮಾದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದವರು ಇಬ್ಬರೇ. ಒಬ್ಬರು ಎಂ. ಜಿ. ಆರ್ ಆದರೆ ಮತ್ತೊಬ್ಬರು ಶಿವಾಜಿ ಗಣೇಶನ್. ಇಬ್ಬರ ನಡುವೆ ಯಾವ ಸ್ಪರ್ಧೆ ಇರದಿದ್ದರೂ ಅವರ ಅಭಿಮಾನಿಗಳ ಫ್ಯಾನ್ ವಾರ್ ಜೋರಾಗಿಯೇ ಇತ್ತು.

ಜನರು MGR ಅವರಿಗೆ ಇಟ್ಟ ಹೆಸರು ಪುರುಚ್ಚಿ ತಲೈವರ್ (ಕ್ರಾಂತಿಕಾರಿ ನಾಯಕ)! ಜನಪ್ರಿಯತೆಯ ಶಿಖರದಲ್ಲಿ ಇರುವಾಗಲೇ ಅವರು ರಾಜಕೀಯ ರಂಗ ಪ್ರವೇಶಿಸಿದರು. ಆಗ ತಮಿಳುನಾಡಿನ ರಾಜಕೀಯ ಪಿತಾಮಹರಾದ ಅಣ್ಣಾದೊರೈ ಅವರ ಪ್ರಭಾವಕ್ಕೆ ಒಳಗಾಗಿ ಎಂ.ಜಿ ಆರ್ ಅವರು ಅಣ್ಣಾ ದೊರೈ ಅವರ ದ್ರಾವಿಡ ಮುನ್ನೆತ್ರ ಕಳಗಮ್ ( DMK) ಪಕ್ಷ ಸೇರಿದರು ಮತ್ತು ಬಹಳ ಬೇಗ ಆ ಪಕ್ಷದ ಯುವರಾಜ ಆದರು!

ಅಣ್ಣಾ ಪಕ್ಷದ ಯುವರಾಜ!

ಅಣ್ಣಾ ದೊರೈ ಮತ್ತು ರಾಮಚಂದ್ರನ್ ಅವರ ಗುರು ಶಿಷ್ಯರ ಸಂಬಂಧವು ಕೊನೆಯವರೆಗೂ ಮಧುರವಾಗಿಯೆ ಇತ್ತು! ಮುಂದೆ ಅಣ್ಣಾ ದೊರೈ ತೀರಿದ ಬಳಿಕ ರಾಜಕೀಯ ಪಕ್ಷದಲ್ಲಿ ಕರುಣಾನಿಧಿ ಕಾರುಬಾರು ಹೆಚ್ಚಾದ ಹಾಗೆ ಎಂ.ಜಿ. ಆರ್ ಅವರು ಆ ಪಕ್ಷದಿಂದ ಹೊರಗೆ ಬಂದು ಆಲ್ ಇಂಡಿಯಾ ಅಣ್ಣಾ ಡಿಎಂಕೆ (AIDMK) ಎಂಬ ಹೊಸ ಪಕ್ಷದ ಸ್ಥಾಪನೆ ಮಾಡಿದರು. ಮುಂದೆ ಅವರೇ ಆ ಪಕ್ಷದ ಗೆಲ್ಲುವ ಕುದುರೆ ಆದರು. ಸತತವಾಗಿ ವಿಧಾನಸಭೆಗೆ ಆಯ್ಕೆ ಆಗುತ್ತಾ ಹೋದರು. ಸೋಲಿಲ್ಲದ ಸರದಾರ ಎಂದು ತಮ್ಮ ಪಕ್ಷದಲ್ಲಿ ಕರೆದುಕೊಂಡರು. ತನ್ನ ಸಹನಟಿ ಆಗಿದ್ದ ಜಯಲಲಿತ ಮೊದಲಾದವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆದುಕೊಂಡು ಬಂದರು. ಸಾವಿರಾರು ಮಂದಿಯನ್ನು ಬೆಳೆಸಿದರು.

MGR4

ಕರುಣಾನಿಧಿ vs ಎಂ. ಜಿ. ಆರ್

ಅವರಿಬ್ಬರ ವಿರಸ ಅನ್ನುವುದು ತಮಿಳುನಾಡಿನ ಸಂಘರ್ಷ ರಾಜಕೀಯದ ವರ್ಣರಂಜಿತ ಅಧ್ಯಾಯ ಎಂದು ಮೊದಲೇ ಹೇಳಿದ್ದೇನೆ. ಆರಂಭದಲ್ಲಿ ಕರುಣಾನಿಧಿ ಬರೆದುಕೊಡುತ್ತಿದ್ದ ಸಂಭಾಷಣೆಗಳನ್ನು ಸಿನೆಮಾದಲ್ಲಿ ಹೇಳುತ್ತಿದ್ದ ಎಂ.ಜಿ. ಆರ್ ಮುಂದೆ ತಮ್ಮ ಪವರ್ಫುಲ್ ಭಾಷಣಗಳ ಮೂಲಕ ಕರುಣಾನಿಧಿಯವರನ್ನು ವ್ಯಂಗ್ಯವಾಗಿ ತಿವಿಯುತ್ತ ಹೋದರು. ಕರುಣಾನಿಧಿ ಏನು ಕಡಿಮೆ ತಾಕತ್ತಿನವರೇ? ಡಿಎಂಕೆ ಮತ್ತು ಎಐ ಡಿಎಂಕೆ ಪಕ್ಷಗಳ ಬೃಹತ್ ರಾಲಿಗಳು ಉರಿಚೆಂಡಿನ ಭಾಷಣಗಳನ್ನು ಕೇಳಿದವು.

ಮುಂದೆ ಎಂ ಜಿ ಆರ್ ಅವರು 1977ರಿಂದ 1987ರವರೆಗೆ ತಮಿಳುನಾಡಿನ ಮುಖ್ಯಮಂತ್ರಿ ಕೂಡ ಆದರು. ಅವರಿಬ್ಬರ ಸಂಘರ್ಷವನ್ನು ಕ್ಯಾನ್ವಾಸ್ ಮಾಡಿಕೊಂಡು ಮಣಿರತ್ನಂ ಅವರು ಮುಂದೆ 'ಇರುವರ್ ' ಎಂಬ ಸಿನೆಮಾವನ್ನು ಕೂಡ ಮಾಡಿದರು.

ದಾಖಲೆಯ ಮೇಲೆ ದಾಖಲೆ!

ಒಂದು ಕಡೆಯಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆದ ಮೊದಲ ಸಿನೆಮಾ ನಟ ಅವರು ಎಂಬ ಕೀರ್ತಿ! ಇನ್ನೊಂದೆಡೆ ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಸಿನೆಮಾ ನಟ ಎಂಬ ದಾಖಲೆ! ತಮಿಳುನಾಡಿನಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಸಿನೆಮಾಗಳ ನಟ ಎಂಬ ಕೀರ್ತಿ !

ಅವರ ಉಲಗಮ್ ಸುಟ್ರು ವಾಲಿಬನ್, ಕಾವಲ ಕಾರನ್, ರಿಕ್ಷಾಕಾರನ್ ಮೊದಲಾದ ಸಿನೆಮಾಗಳು ಭಾರೀ ಮಟ್ಟದ ಜನಪ್ರಿಯತೆಯನ್ನು ಪಡೆದವು. ರಿಕ್ಷಾಕಾರನ್ ಸಿನೆಮಾದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಯು ಅವರಿಗೆ ದೊರೆಯಿತು. ಅವರ ಮತ್ತು ಜಯಲಲಿತ ಅವರ ಜೋಡಿಯು ಸೂಪರ್ ಹಿಟ್ ಜೋಡಿ ಆಯ್ತು. MGR ಅವರ ಉದ್ದುದ್ದವಾದ ಸಂಭಾಷಣೆ ಒಪ್ಪಿಸುವ ರೀತಿ, ಫೈಟಿಂಗ್ ದೃಶ್ಯಗಳು, ಭಾವನಾತ್ಮಕ ಅಭಿನಯ, ಕತ್ತಿ ವರಸೆ, ಕುದುರೆ ಸವಾರಿ, ರೋಮಾನ್ಸ್, ವಿಶಿಷ್ಟವಾದ ಬಾಡಿ ಲ್ಯಾಂಗ್ವೇಜ್, ಕ್ಯಾಚಿಂಗ್ ವಾಯ್ಸ್ ಎಲ್ಲದರಲ್ಲೂ ಅವರು ಗೆಲ್ಲುತ್ತಾ ಬಂದರು. ಹಾಗೆಯೇ ತಮಿಳುನಾಡಿನ ಆರಾಧ್ಯ ದೇವರು ಆಗಿಬಿಟ್ಟರು.

MGR5

ತಮಿಳುನಾಡಿನ ಆರಾಧ್ಯ ದೇವರು!

ಆ ಕಾಲದಲ್ಲಿ ತಮಿಳುನಾಡಿನ ಪ್ರತೀ ಮನೆಯಲ್ಲಿಯೂ ದೇವರ ಕೋಣೆಯಲ್ಲಿ ಎಂ ಜಿ ಆರ್ ಫೋಟೋ ಇಟ್ಟು ಜನರು ಪೂಜೆ ಮಾಡುತ್ತಿದ್ದರು! ಅದಕ್ಕೆ ಕಾರಣ ಅವರ ಅಭಿನಯ ಸಾಮರ್ಥ್ಯ, ಜನಪರ ಕಾಳಜಿ ಮತ್ತು ಸೇವಾ ಮನೋಭಾವಗಳು ಎಂದು ನನ್ನ ಅನಿಸಿಕೆ. ಹನ್ನೊಂದು ವರ್ಷಗಳಷ್ಟು ಸುದೀರ್ಘ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಅವರು ತನ್ನ ಬಜೆಟ್ಟಿನ 60% ಭಾಗವನ್ನು ಬಡವರ ಏಳಿಗೆಗೆ ಮೀಸಲು ಇಟ್ಟರು. 1987ರಲ್ಲಿ ಅವರು ಸ್ವರ್ಗಸ್ಥರಾಗುವವರೆಗೆ ಅವರು ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿ ಆಗಿದ್ದರು.

ಅವರು ಆಗಲಿ ಎಷ್ಟೋ ವರ್ಷಗಳ ನಂತರವೂ AIDMK ರಾಲಿಗಳಿಗೆ ಜನರು ಅವರನ್ನು ಹುಡುಕಿಕೊಂಡು ಬರುತ್ತಿದ್ದರು. ಅವರು ಇನ್ನೂ ಜೀವಂತವಾಗಿ ಇದ್ದಾರೆ ಎಂದು ನಂಬುವ ಅಂಧಾಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಿದೆ. ಮುಂದೆ ರಾಜೀವ್ ಗಾಂಧಿ ಸರಕಾರವು ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಕೂಡ ಘೋಷಣೆ ಮಾಡಿತು!

ಅವರ ಮೇಲೆ ಗುಂಡಿನ ದಾಳಿಯೂ ನಡೆದಿತ್ತು!

ಅವರು ಜನಪ್ರಿಯತೆಯ ಶಿಖರದಲ್ಲಿ ಇರುವಾಗಲೇ ಒಮ್ಮೆ ಅವರ ಮೇಲೆ ನಿರ್ಮಾಪಕರೊಬ್ಬರು ಹತ್ತಿರದಿಂದ ಗುಂಡಿನ ದಾಳಿ ನಡೆಸಿದ್ದರು. ಅದರಿಂದ ಅವರ ಒಂದು ಕಿವಿ ಕಿವುಡು ಆಯಿತು. ಧ್ವನಿಯು ತನ್ನ ಹರಿತ ಕಳೆದುಕೊಂಡಿತು. ಆದರೂ ಅವರ ಸ್ಟಾರ್ ಪಟ್ಟವು ಒಂದಿಷ್ಟೂ ಅಲುಗಾಡಲಿಲ್ಲ. ಅವರ ಇಚ್ಛಾಶಕ್ತಿಯ ಮುಂದೆ ಸಾವು ಕೂಡ ಸೋತು ಕೈಚೆಲ್ಲಿತು!

ಅವರು ಸತ್ತ ಮೇಲೆ ಕೂಡ ತಮಿಳರ ಹೃದಯದಲ್ಲಿ ಬದುಕಿದ್ದಾರೆ!

ಇಂದು ತಮಿಳುನಾಡಿನ ಎಲ್ಲ ಪ್ರಮುಖ ನಗರಗಳಲ್ಲಿ ಅವರ ಆಳೆತ್ತರದ ಮೂರ್ತಿಗಳನ್ನು ಸ್ಥಾಪನೆ ಮಾಡಲಾಗಿದೆ. ಅವರ ಹೆಸರಿನಲ್ಲಿ ನೂರಾರು ರಸ್ತೆಗಳು, ಬೃಹತ್ ಆದ ರೈಲು ಸ್ಟೇಷನಗಳು, ವಿಮಾನ ನಿಲ್ದಾಣಗಳು, ಬಸ್ ಸ್ಟಾಂಡಗಳು, ಉದ್ಯಾನಗಳು ತಮಿಳುನಾಡಿನಲ್ಲಿ ಇವೆ! ಜನರು ಈಗಲೂ ಮುಗಿಬಿದ್ದು ಅವರ ಸಿನೆಮಾಗಳನ್ನು ನೋಡುತ್ತಿದ್ದಾರೆ. ಅವರ ಬದುಕಿನ ಬಗ್ಗೆ 400ಕ್ಕಿಂತ ಹೆಚ್ಚು ಅದ್ಭುತವಾದ ಪುಸ್ತಕಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿವೆ ಮತ್ತು ಎಲ್ಲವೂ ಭಾರೀ ಜನಪ್ರಿಯ ಆಗಿವೆ.

ತಮಿಳುನಾಡಿನ ಕೋಟಿ ಕೋಟಿ ಭಾವುಕ ಅಭಿಮಾನಿಗಳು ತಮಿಳುನಾಡಿನಲ್ಲಿ ಜನಿಸಿರದ, ತಮಿಳನೂ ಅಲ್ಲದ ಒಬ್ಬ ಸಿನೆಮಾ ಸ್ಟಾರನ್ನು ದೇವರು ಮಾಡಿ ಪೂಜೆ ಮಾಡಿದ್ದು ಒಂದು ಅದ್ಭುತವೇ!

ಇಂದವರಿಗೆ ಬಿಲೆಟೆಡ್ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳೋಣ ಅಲ್ಲವೇ?