ಸಿಎಂ ವಿಜಯ್ ನಡೆಗೆ ಬಹುಪರಾಕ್ ಹೇಳಿದ ಕಮಲ್ ಹಾಸನ್; ʻದಳಪತಿʼ ಹೆಸರು ಹೇಳ್ತಿದ್ದಂತೆ ಕೈಮುಗಿದು ಹೊರಟ ರಜನಿಕಾಂತ್!
ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನಟ ವಿಜಯ್ ಸಮಾಜಮುಖಿ ನಿರ್ಧಾರ ಕೈಗೊಂಡಿದ್ದಾರೆ. ದೇವಸ್ಥಾನ, ಶಾಲೆ ಹಾಗೂ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ವಿಜಯ್ ಅವರ ಈ ನಡೆಯನ್ನು ನಟ ಕಮಲ್ ಹಾಸನ್ ಮುಕ್ತವಾಗಿ ಶ್ಲಾಘಿಸಿದ್ದಾರೆ.
-
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನಟ ವಿಜಯ್ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ದೇವಸ್ಥಾನಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಅವರು ಆದೇಶ ನೀಡಿದ್ದಾರೆ. ವಿಜಯ್ ಅವರ ಈ ನಡೆಯನ್ನು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಶ್ಲಾಘಿಸಿದ್ದಾರೆ.
ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಮಲ್
"ಪ್ರಾರ್ಥನಾ ಮಂದಿರಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳ ಸಮೀಪವಿರುವ ಮದ್ಯ ಮಾರಾಟ ಮಳಿಗೆಗಳನ್ನು ತೆರವುಗೊಳಿಸಬೇಕು ಎಂಬುದು ತಮಿಳು ಕುಟುಂಬಗಳ ನಿರೀಕ್ಷೆಯಾಗಿತ್ತು. ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ, ಸಹೋದರ ವಿಜಯ್ ಅಧಿಕಾರ ವಹಿಸಿಕೊಂಡ ತಕ್ಷಣವೇ ಈ ಕ್ರಮ ಕೈಗೊಂಡಿದ್ದಾರೆ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು
"ಮದ್ಯ ಮಾರಾಟವು ಎಂದಿಗೂ ಸರ್ಕಾರದ ಕೆಲಸವಾಗಬಾರದು, ಮದ್ಯದ ಹರಿವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ತಮಿಳುನಾಡು ಸರ್ಕಾರ ಈ ನಿಟ್ಟಿನಲ್ಲಿ ಸಾಗಬೇಕು. ಇಂದು 717 ಮದ್ಯದ ಅಂಗಡಿಗಳನ್ನು ಮುಚ್ಚುವ ಮೂಲಕ ಇದು ಆರಂಭವಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಮತ್ತು ಈ ಕ್ರಮ ಮುಂದುವರಿಯಬೇಕು. ಅಭಿನಂದನೆಗಳು" ಎಂದು ಅವರು ಹೇಳಿದ್ದಾರೆ.
ವಿಜಯ್ ಹೆಸರು ಹೇಳ್ತಿದ್ದಂತೆಯೇ ರಜನಿ ಸೈಲೆಂಟ್!
ಇನ್ನು, ಚೆನ್ನೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟ ರಜನಿಕಾಂತ್ ಅವರನ್ನು ಮಾಧ್ಯಮ ಮಂದಿ ಪ್ರಶ್ನೆ ಮಾಡಿದ್ದಾರೆ. "ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ವಹಿಸಿಕೊಂಡಿದ್ದಾರೆ... ನಿಮ್ಮ ಪ್ರತಿಕ್ರಿಯೆ ಏನು " ಎಂದು ರಜನಿಕಾಂತ್ಗೆ ಕೇಳುತ್ತಿದ್ದಂತೆಯೇ, ಅವರು ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ಪ್ರತಿಕ್ರಿಯೆ ನಿಡದೇ ರಜನಿಕಾಂತ್, ಕೇವಲ ಕಿರುನಗೆ ಬೀರುತ್ತಾ, ಕೈಮುಗಿದು ಮುಂದೆ ಸಾಗಿದರು. ಈ ಕುರಿತ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚೆನ್ನೈ ಏರ್ಪೋರ್ಟ್ನಲ್ಲಿ ರಜನಿಕಾಂತ್
వైరల్ వీడియో -
— Sreenivas Gandla (@SreenivasPRO) May 12, 2026
సీఎం విజయ్ గురించి స్పందించకుండా వెళ్లిపోయిన రజినీకాంత్#Rajnikanth #VijayTNCM pic.twitter.com/nWQ5tS5sXQ
ವಿಜಯ್ಗೆ ಶುಭ ಹಾರೈಸಿದ್ದ ರಜನಿ
ಮಾಧ್ಯಮಗಳಿಗೆ ರಜನಿಕಾಂತ್ ಪ್ರತಿಕ್ರಿಯೆ ನೀಡದೇ ಇದ್ದರೂ, ತಮಿಳುನಾಡು ಚುನಾವಣಾ ಫಲಿತಾಂಶ ಪ್ರಕಟವಾದಾಗಲೇ ವಿಜಯ್ಗೆ ಅಭಿನಂದನೆ ಸಲ್ಲಿಸಿದ್ದರು ರಜನಿಕಾಂತ್. "ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷರಾದ ವಿಜಯ್ ಅವರಿಗೆ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು" ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ವಿಜಯ್, "ಸೂಪರ್ಸ್ಟಾರ್ ರಜನಿಕಾಂತ್ ಅವರ ಆತ್ಮೀಯ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು" ಎಂದು ಹೇಳಿದ್ದರು.