ಪತ್ರಕರ್ತ ರವಿ ಬೆಳಗೆರೆ ಅವರು ಬರೆದಿರುವ ʻಭೀಮಾತೀರದ ಹಂತಕರುʼ ಕೃತಿ ಈಗ ಸಿನಿಮಾ ಆಗುತ್ತಿದೆ. ಇದನ್ನು ನಿರ್ದೇಶನ ಮಾಡುತ್ತಿರುವವರು ಕಬಡ್ಡಿ ನರೇಂದ್ರ ಬಾಬು. ಸ್ಯಾಂಡಲ್ವುಡ್ನಲ್ಲಿ ಕಬಡ್ಡಿ, ಸಂತೆಯಲ್ಲಿ ನಿಂತ ಕಬೀರ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ನರೇಂದ್ರ ಬಾಬು, ಇದೀಗ ʻಭೀಮಾತೀರದ ಹಂತಕರುʼ ಸಿನಿಮಾ ಮಾಡುತ್ತಿದ್ದಾರೆ.
ಭಾವನಾ ಬೆಳಗೆರೆ ನಟನೆ
90ರ ತೊಂಭತ್ತರ ದಶಕದಲ್ಲಿ ಭೀಮಾತೀರದ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಎರಡು ಕುಟುಂಬಗಳ ನಡುವಿನ ಘನಘೋರ ರಕ್ತಚರಿತ್ರೆಯನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ ನರೇಂದ್ರ ಬಾಬು. ಈಚೆಗೆ 'ಭೀಮಾತೀರದ ಹಂತಕರು' ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ, ಈ ಕಥೆಯಲ್ಲಿ ಬರುವ ರವಿ ಬೆಳಗೆರೆ ಪಾತ್ರವನ್ನು ಅವರ ಪುತ್ರಿ ಭಾವನಾ ಬೆಳಗೆರೆ ಅವರು ನಿಭಾಯಿಸುತ್ತಿದ್ದಾರೆ. ಶ್ರೀ ಗವಿ ರಂಗನಾಥಸ್ವಾಮಿ ಪಿಕ್ಚರ್ಸ್ ಹಾಗೂ ಆಂಜನೇಯ ಪ್ರೊಡಕ್ಷನ್ಸ್ ಮೂಲಕ ಶೃತಿ ಅನಿಲ್ ಕುಮಾರ್ ಹಾಗೂ ಸುಮಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಭೀಮಾತೀರದ ಹಂತಕರು
"ಕ್ರಿಸ್ತ ಪೂರ್ವದಿಂದ ಈವರೆಗೂ ಭೀಮೆಯ ತಟದಲ್ಲಿ ಯುದ್ದ ನಡೆಯುತ್ತಲೇ ಇದೆ. ಒಂದು ಸಣ್ಣ ಬದುವಿಗೋಸ್ಕರ ಚಂದಪ್ಪ ಹರಿಜನ ಹಾಗೂ ಕೇಶಪ್ಪ ತಾವರಖೇಡ ಕುಟುಂಬಗಳ ನಡುವೆ ಶುರುವಾಗುವ ಗಲಾಟೆ, ದೊಡ್ಡಮಟ್ಟದಲ್ಲಿ ಮುಂದುವರೆದುಕೊಂಡು ಹೋಗಿ ಘೋರ ಕೊಲೆಗಳೇ ನಡೆದು ಹೋಗುತ್ತವೆ. ರವಿ ಬೆಳಗೆರೆ ಅವರು ಘಟನೆ ನಡೆದ ಸ್ಥಳಕ್ಕೇ ಹೋಗಿ ವಸ್ತುಸ್ಥಿತಿ ಅಧ್ಯಯನ ಮಾಡಿ ಬರೆದ ಕೃತಿಯನ್ನು ಯಥಾವತ್ತಾಗಿ ತೆರೆಮೇಲೆ ತರುತ್ತಿದ್ದೇವೆ. ಭಾವನಾ ಅವರು ನಮಗೆ ಸಾಥ್ ನೀಡುತ್ತಿದ್ದಾರೆ. ಇದರಲ್ಲಿ ತುಂಬಾ ಕಂಟೆಂಟ್ ಇರೊದ್ರಿಂದ ಚಿತ್ರವನ್ನು ಎರಡು ಭಾಗದಲ್ಲಿ ಹೇಳುತ್ತಿದ್ದೇವೆ. ಮೊದಲ ಭಾಗದ ಸ್ಕ್ರಿಪ್ಟ್ ಈಗಾಗಲೇ ರೆಡಿ ಇದೆ. ಸಿದ್ದಪ್ಪ ಹತ್ಯೆವರೆಗೂ ನಡೆಯುವ ಘಟನೆಗಳನ್ನು ಇದರಲ್ಲಿ ದಾಖಲಿಸಿದ್ದೇನೆ. ಸದ್ಯದಲ್ಲೇ ಚಿತ್ರೀಕರಣಕ್ಕೆ ಹೋಗುತ್ತಿದ್ದೇವೆ" ಎಂದು ಹೇಳುತ್ತಾರೆ ನರೇಂದ್ರ ಬಾಬು.
"ಈ ಸಿನಿಮಾದಲ್ಲಿ ನಾನು ಅಪ್ಪನ ಪಾತ್ರ ಮಾಡುತ್ತಿರುವುದು ನನಗೆ ಖುಷಿ ನೀಡಿದೆ. ಈ ಹಿಂದೆ ಬಂದಿದ್ದ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸವಿರುತ್ತದೆ. ಒಂದು ಕಾಲದಲ್ಲಿ ಭೀಮೆಯ ತಟದಲ್ಲಿ ರಕ್ತದೋಕುಳಿಯೇ ಹರಿದಿತ್ತು. ಆ ಘಟನೆಯಲ್ಲಿ 60-70 ತಲೆಗಳು ಉರುಳಿದ್ದವು. ಆ ಜಿದ್ದು ಈಗಲೂ ಇದೆ. ಒಂದು ಮರಕ್ಕೆ ಹುಟ್ಟಿಕೊಳ್ಳುವಂಥ ದ್ವೇಷವದು. ನಾವು ಅವರ ಮನೆಗೆ ಹೋಗಿ ಊಟ ಮಾಡಿದ್ದೇವೆ. ಅಪ್ಪ ಬರೆದ ಪುಸ್ತಕದಲ್ಲಿ ಹೇಗಿದೆಯೋ ಹಾಗೇ ಚಿತ್ರವೂ ಬರಬೇಕೆನ್ನುವುದು ನನ್ನ ಆಸೆ" ಅಂತಾರೆ ಭಾವನಾ ಬೆಳಗೆರೆ.
ಕೆ. ಎಸ್. ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನವನ್ನ ಲೋಕಿ ತವಸ್ಯ ಮಾಡುತ್ತಿದ್ದು, ಈ ಚಿತ್ರಕ್ಕಾಗಿ ಗೋಪಾಲ ವಾಜಪೇಯಿ ಅವರು ಬರೆದಿದ್ದ ಒಂದು ಹಾಡನ್ನು ಬಳಸಿಕೊಳ್ಳಲಾಗುತ್ತಿದೆಯಂತೆ. ಈ ಚಿತ್ರದಲ್ಲಿ ಚಂದಪ್ಪ ಹರಿಜನ ಪಾತ್ರವನ್ನು ಲಿಖಿತ್ ಮಾಡುತ್ತಿದ್ದಾರೆ. ಜಯವರ್ಧನ, ಸಯ್ಯಾಜಿ ಶಿಂಧೆ, ಶರತ್ ಲೋಹಿತಾಶ್ವ, ಸೋನು ಸೂದ್ ಪ್ರಮುಖ ಪಾತ್ರಗಳನ್ನು ಬಣ್ಣ ಹಚ್ಚಲಿದ್ದಾರೆ. ಸಂಕಲನದ ಹೊಣೆ ಹರೀಶ್ ಕೊಮ್ಮೆ ಅವರದ್ರು. ಸಾಹಸ ಸಂಯೋಜನೆಯನ್ನು ರವಿವರ್ಮ ಮಾಡಲಿದ್ದಾರೆ.