ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಎಲಿಮಿನೇಟ್ ಆಗಿ, ವಾರದ ನಂತರ ಪುನಃ ಮನೆಯೊಳಗೆ ಬಂದು ಇದೀಗ ಫಿನಾಲೆ ತಲುಪಿದ್ದಾರೆ ತುಳುನಾಡಿನ ಹುಡುಗಿ ರಕ್ಷಿತಾ ಶೆಟ್ಟಿ. ಸದ್ಯ ಅವರು ಮನೆಯೊಳಗೆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಂದಹಾಗೆ, ಈ ಸೀಸನ್ನಲ್ಲಿ ರಕ್ಷಿತಾ ಕೂಡ ಕಿಚ್ಚನ ಚಪ್ಪಾಳೆಯನ್ನು ಪಡೆದುಕೊಂಡಿದ್ದರು. ಬಿಗ್ ಬಾಸ್ ಮನೆಯೊಳಗೆ ಆ ಕ್ಷಣವನ್ನು ನೆನಪು ಮಾಡಿಕೊಂಡಿರುವ ರಕ್ಷಿತಾ, ನಿರೂಪಕ ಕಿಚ್ಚ ಸುದೀಪ್ ಅವರಿಗೆ ತಂದೆ ಸ್ಥಾನವನ್ನು ಕೊಟ್ಟಿದ್ದಾರೆ.
ಅಭಿಮಾನಿಗಳ ಎದುರು ರಕ್ಷಿತಾ ಮಾತು
ಸುದೀಪ್ ಕುರಿತು ಮಾತನಾಡಿದ ರಕ್ಷಿತಾ ಶೆಟ್ಟಿ, "ಕಿಚ್ಚನ ಚಪ್ಪಾಳೆ ನಾನು ತಗೊಂಡಿದ್ದೆ. ನಾನು ತುಂಬಾ ಎಮೋಷನಲ್ ಆಗಿಬಿಟ್ಟಿದ್ದೆ. ನಾವು ಎಂಥ ಆದರೂ ತಪ್ಪು ಮಾಡಿದ್ರೆ ಸುದೀಪ್ ಸರ್ ಬಂದು ಬೈತಾರೆ. ನಿಮಗೆ ಆ ಫೀಲಿಂಗ್ ಎಂಥ ಅಂತ ಗೊತ್ತಿಲ್ಲ. ಅವರು ಬೈದು ಹೋಗ್ತಾರೆ ಅಲ್ವಾ, ಆ ದಿವಸ ಹೇಗೆ ಇರುತ್ತದೆ ಅಂದರೆ, ಜೀವದಲ್ಲಿ ಜೀವನೇ ಇರೋದಿಲ್ಲ. ಅವರು ಎಷ್ಟೇ ಬೈದರೂ, ಹೋಗುವ ಮುಂಚೆ ನಮಗೆ ಸಮಾಧಾನ ಮಾಡಿಯೇ ಹೋಗ್ತಾರೆ. ಸುದೀಪ್ ಸರ್ಗೆ ನಾನು ಎರಡನೇ ಅಪ್ಪ ಅಂತ ಹೇಳಬಹುದು" ಎಂದು ಹೇಳಿದ್ದಾರೆ.
ರಕ್ಷಿತಾ ಜರ್ನಿಯಲ್ಲಿದೆ ಸಾಕಷ್ಟು ಟ್ವಿಸ್ಟ್
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕಿರಿಯ ಸ್ಪರ್ಧಿ ಎನಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ಬಂದ ದಿನವೇ ಎಲಿಮಿನೇಟ್ ಆಗಿದ್ದರು. ಮನೆಯವರೆಲ್ಲಾ ಸೇರಿಕೊಂಡು ರಕ್ಷಿತಾ ಅವರನ್ನು ಶೋನಿಂದ ಆಚೆ ಕಳುಹಿಸಿದ್ದರು. ಟ್ವಿಸ್ಟ್ ಏನಪ್ಪ ಅಂದ್ರೆ, ಅವರೇ ಈಗ ಫಿನಾಲೆ ತಲುಪಿದ್ದಾರೆ. ಆಟದ ಮಧ್ಯದಲ್ಲಿ ಒಂದು ವಾರ ಸಿಕ್ರೇಟ್ ರೂಮ್ಗೂ ಹೋಗಿಬಂದಿದ್ದರು ರಕ್ಷಿತಾ. ಹೀಗೆ ಇತರೆ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ, ಸಾಕಷ್ಟು ಟ್ವಿಸ್ಟ್ ಆಂಡ್ ಟರ್ನ್ಗಳನ್ನು ರಕ್ಷಿತಾ ಕಂಡಿದ್ದಾರೆ.
Bigg Boss Kannada 12: ಧ್ರುವಂತ್ ತುಂಬಾ ಪಾಪ, ಕೆಟ್ಟ ಮನುಷ್ಯ ಅಲ್ಲ; ರಕ್ಷಿತಾ ಶೆಟ್ಟಿಗೆ ಮೂಡಿದೆ ಅನುಕಂಪ
ಖಡಕ್ ಸ್ಪರ್ಧಿ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಅವರನ್ನೇ ಎದುರು ಹಾಕಿಕೊಂಡಿದ್ದರು ರಕ್ಷಿತಾ. ಮನೆಯ ಸ್ಪರ್ಧಿಗಳು ಮೊದಲ ದಿನವೇ ರಕ್ಷಿತಾ ಅವರನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಆಟದ ಮೇಲೆ ಪೋಕಸ್ಡ್ ಆಗಿದ್ದ ರಕ್ಷಿತಾ ಮಾತ್ರ, ತಮ್ಮ ಆಟವನ್ನು ಆಡುತ್ತಾ, ಫಿನಾಲೆ ತಲುಪಿದ್ದಾರೆ.