ʻಬಿಗ್ ಬಾಸ್ʼ ಕನ್ನಡ ಸೀಸನ್ 12ರಲ್ಲಿ ವಿಜೇತರಾದ ಬಳಿಕ ಗಿಲ್ಲಿ ನಟ ಅವರಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಅಂದಹಾಗೆ, ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ʻಸೂಪರ್ ಹಿಟ್ʼ ಸಿನಿಮಾದಲ್ಲಿ ನಟಿಸಿದ್ದರು. ವಿಜಯಾನಂದ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಗಿಲ್ಲಿ ನಟ ಕೂಡ ಹೀರೋ. ಸದ್ಯ ಈ ಚಿತ್ರಕ್ಕೆ ಗಿಲ್ಲಿಯಿಂದಾಗಿ ಅದೃಷ್ಟ ಖುಲಾಯಿಸಿದೆ ಎಂದು ಸ್ವತಃ ನಿರ್ದೇಶಕರೇ ಹೇಳಿದ್ದಾರೆ.
ಗಿಲ್ಲಿ ಗೆದ್ದಮೇಲೆ ಸಿನಿಮಾ ರೇಂಜ್ ಬದಲಾಗಿದೆ
"ನಾನು ಅನೌನ್ಸ್ ಮಾಡುವವರೆಗೂ ನಮ್ಮ ಸಿನಿಮಾ ಎಲೆಮರೆಕಾಯಿಯಂತೆ ಇತ್ತು. ಆದರೆ, ಯಾವಾಗ ನಮ್ಮ ಸಿನಿಮಾದ ಹೀರೋ ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ ಆದರೋ, ನಮ್ಮ ಸೂಪರ್ ಹಿಟ್ ಚಿತ್ರದ ಹೈಪ್ ಬೇರೆ ರೇಂಜ್ಗೆ ಹೋಗಿದೆ. ಅದರ ಪ್ರಭಾವ ನಮ್ಮ ಸಿನಿಮಾದ ಬ್ಯುಸಿನೆಸ್ ಮೇಲೂ ಬಿದ್ದಿದೆ. ಸೂಪರ್ ಹಿಟ್ ಚಿತ್ರ ಈಗ ಕರ್ನಾಟಕದ ತುಂಬಾ ವೈರಲ್ ಆಗುತ್ತಿದೆ" ಎಂದು ನಿರ್ದೇಶಕ ವಿಜಯಾನಂದ್ ಹೇಳಿದ್ದಾರೆ.
Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ
ನಾನು ಹೀರೋ ಅಲ್ಲ!
"ಈ ಸಿನಿಮಾಗೆ ನಾನು ಮಾತ್ರ ಹೀರೋ ಅಲ್ಲ, ಈ ಚಿತ್ರದಲ್ಲಿ ಎಲ್ಲಾ ದೊಡ್ಡ ದೊಡ್ಡ ಕಲಾವಿದರು ಇದ್ದಾರೆ. ಎಲ್ಲರೂ ಹೀರೋಗಳೇ. ಇದರಲ್ಲೊಂದು ಕಾರು ಇದೆ. ಅದು ಕೂಡ ಈ ಚಿತ್ರದ ಹೀರೋ. ಅದಂತೂ ನಮಗೆ ತುಂಬಾ ತೊಂದರೆ ಕೊಟ್ಟಿತ್ತು" ಎಂದು ಶೂಟಿಂಗ್ ಸಂದರ್ಭದ ತಮಾಷೆಯ ಪ್ರಸಂಗಗಳನ್ನು ನೆನಪು ಮಾಡಿಕೊಂಡರು ಗಿಲ್ಲಿ ನಟ. ಇದೇ ವೇಳೆ ತಮ್ಮ ಬಗ್ಗೆ ಚಿತ್ರತಂಡವೊಂದು ದೂರು ನೀಡಿರುವುದರ ಕುರಿತು ಗಿಲ್ಲಿ ಪ್ರತಿಕ್ರಿಯಿಸಿದರು.
ಫೆಬ್ರವರಿ 27ಕ್ಕೆ ತೆರೆಗೆ ಬರಲಿದೆ ʻಸೂಪರ್ ಹಿಟ್ʼ
ಈ ಚಿತ್ರವು ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಿ. ನಾಗೇಂದ್ರ ಪ್ರಸಾದ್ ಅವರ ಸಹೋದರರಾದ ವಿಜಯಾನಂದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ ನಿರ್ಮಾಪಕ ಜಿ. ಉಮೇಶ್. "ನಿರ್ಮಾಪಕರ ಸಿನಿಮಾ ಪ್ರೇಮದ ಬಗ್ಗೆ ಎಷ್ಟು ಹೇಳಿದರೂ ಸಾಲದು. ತಮ್ಮ ಮದುವೆಗಾಗಿ ಕೂಡಿಟ್ಟಿದ್ದ ಹಣವನ್ನು ಅವರು ಈ ಚಿತ್ರಕ್ಕಾಗಿ ಖರ್ಚು ಮಾಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗೋದು ಗ್ಯಾರಂಟಿ. ಸೂಪರ್ ಹಿಟ್ ಚಿತ್ರದ ಓಟಿಟಿ ಹಕ್ಕುಗಳನ್ನು ಹೊಸ ಸಂಸ್ಥೆಯೊಂದು ದೊಡ್ದ ಮೊತ್ತಕ್ಕೆ ಖರೀದಿಸಿದೆ" ಎಂದು ವಿಜಯಾನಂದ್ ಹೇಳಿದರು.
Gilli Nata: ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ
ಕಲಾವಿದರ ದಂಡೇ ಇದೆ
ಸೂಪರ್ ಹಿಟ್ ಸಿನಿಮಾದಲ್ಲಿ ಗಿಲ್ಲಿ ನಟ ಜೊತೆಗೆ ಗೌರವ್ ಶೆಟ್ಟಿ ಕೂಡ ಹೀರೋ ಆಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಟೆನ್ನಿಸ್ ಕೃಷ್ಣ, ಗಿರಿ ಶಿವಣ್ಣ, ವಿ. ನಾಗೇಂದ್ರ ಪ್ರಸಾದ್, ಕರಿ ಸುಬ್ಬು, ವಂಶಿ, ಗೋವಿಂದೇಗೌಡ, ಡ್ರ್ಯಾಗನ್ ಮಂಜು ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ಹೊಣೆಯನ್ನು ವಿ. ನಾಗೇಂದ್ರ ಪ್ರಸಾದ್ ಹೊತ್ತುಕೊಂಡಿದ್ದಾರೆ. ವಿಜಯಲಕ್ಷ್ಮಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಈ ಸಿನಿಮಾ ಫೆಬ್ರವರಿ 27ರಂದು 200ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ.