Daali Wedding: ಡಾಲಿ ಧನಂಜಯ್ ಅದ್ಧೂರಿ ಆರತಕ್ಷತೆ; ಗಣ್ಯರ ಆಗಮನ
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಆರತಕ್ಷತೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಆರತಕ್ಷತೆಯ ವೇದಿಕೆ ಮೈಸೂರಿನ ಥೀಮ್ನಲ್ಲಿ ಮೂಡಿ ಬಂದಿದ್ದು, ಗಮನ ಸೆಯುತ್ತಿದೆ. ಈಗಾಗಲೇ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ನೂತನ ವಧು-ವರರನ್ನು ಹಾರೈಸಿದ್ದಾರೆ.

ಧನಂಜಯ್ ಮತ್ತು ಧನ್ಯತಾ.

ಮೈಸೂರು: ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ (Dhananjaya) ಮತ್ತು ಡಾ. ಧನ್ಯತಾ (Dr. Dhanyatha) ಆರತಕ್ಷತೆ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ (Daali Wedding). ಖ್ಯಾತ ಕಲಾ ನಿರ್ದೇಶಕ, ನಟ ಅರುಣ್ ಸಾಗರ್ ಅವರು ಮೈಸೂರು ಎಕ್ಸಿಬಿಷನ್ ಆವರಣದಲ್ಲಿ ಆರತಕ್ಷತೆಯ ಸೆಟ್ ಹಾಕಿಸಿದ್ದಾರೆ. ಆರತಕ್ಷತೆಯ ವೇದಿಕೆ ಮೈಸೂರಿನ ಥೀಮ್ನಲ್ಲಿ ಮೂಡಿ ಬಂದಿದ್ದು, ಗಮನ ಸೆಯುತ್ತಿದೆ. ಈಗಾಗಲೇ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಆಗಮಿಸಿ ನೂತನ ವಧು-ವರರನ್ನು ಹಾರೈಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಲಾವಿದರಾದ ಅವಿನಾಶ್-ಮಾಳವಿಕಾ ದಂಪತಿ, ಶ್ರೀಮುರಳಿ, ನವೀನ್ ಶಂಕರ್, ಶರ್ಮಿಳಾ ಮಾಂಡ್ರೆ, ಇಂದ್ರಜಿತ್ ಲಂಕೇಶ್, ರಕ್ಷಿತಾ ಪ್ರೇಮ್, ಉಪೇಂದ್ರ-ಪ್ರಿಯಾಂಕಾ ದಂಪತಿ, ಧ್ರುವ ಸರ್ಜಾ, ಶ್ರುತಿ ಹರಿಹರನ್, ಮಲೈಕಾ ವಸುಪಾಲ್, ಝೈದ್ ಖಾನ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ಕೆ. ಮಂಜು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಜಕಾರಣಿಗಳಾದ ಪ್ರದೀಪ್ ಈಶ್ವರ್, ಬಿ.ಶ್ರೀರಾಮುಲು, ಅಶ್ವತ್ಥ್ ನಾರಾಯಣ್, ಜಮೀರ್ ಅಹಮ್ಮದ್ ಖಾನ್, ಬಿ.ವೈ.ವಿಜಯೇಂದ್ರ ಮತ್ತಿತರರು ಆಗಮಿಸಿದ್ದಾರೆ.
ವಿವಾಹ ಸಮಾರಂಭದ ಅಂಗವಾಗಿ ಪ್ರೇಮಿಗಳ ದಿನದಂದು ಅಂದರೆ ಫೆಬ್ರವರಿ 14ರಂದು ನಂಜನಗೂಡು ಬಳಿಯ ರಿವರ್ ರೇಂಜ್ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ಅರಿಶಿನ ಶಾಸ್ತ್ರ ನಡೆದಿದ್ದು, ಧನಂಜಯ್ ಹಾಗೂ ಧನ್ಯತಾ ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮಾಜಿ ಸಚಿವರಾದ ಬಿ. ಸಿ ಪಾಟೀಲ್, ಜರ್ಮನ್ ಡೈರೆಕ್ಟರ್ ಕ್ಕ್ರಿಸ್ಟೆನ್ ಸ್ಟುಕೆಲ್, ನಟಿ ಸಪ್ತಮಿ ಗೌಡ ಕೂಡ ಈ ಸಮಾರಂಭಕ್ಕೆ ಭೇಟಿ ನೀಡಿದ್ದು, ಧನಂಜಯ್ ಮತ್ತು ಧನ್ಯತಾ ಅವರ ಕುಟುಂಬದವರು, ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು.