‘ನನ್ನ ತಂದೆ ಸಾಯುವುದಕ್ಕೆ ನಾನೇ ಸಹಾಯ ಮಾಡಿದೆ’; ಹೃದಯವಿದ್ರಾವಕ ಸತ್ಯ ಬಿಚ್ಚಿಟ್ಟ ನಟ ರಾಮ್ ಕಪೂರ್! ಅಷ್ಟಕ್ಕೂ ಆಗಿದ್ದೇನು?
'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟ ರಾಮ್ ಕಪೂರ್ ತಮ್ಮ ತಂದೆಯ ಸಾವಿನ ಅತ್ಯಂತ ಹೃದಯವಿದ್ರಾವಕ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ತಂದೆಯ ಅಂತಿಮ ಇಚ್ಛೆಯಂತೆ, ಅವರು ಗೌರವಯುತವಾಗಿ ಕೊನೆಯುಸಿರೆಳೆಯಲು ತಾವೇ ನೆರವಾಗಿದ್ದಾಗಿ ಹೇಳಿದ್ದಾರೆ.
-
‘ಲಾಕ್ ಅಪ್ ಸೀಸನ್ 2’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರುವ ನಟ ರಾಮ್ ಕಪೂರ್ ತಮ್ಮ ಜೀವನದ ಅತ್ಯಂತ ನೋವಿನ, ಹೃದಯವಿದ್ರಾವಕ ಘಟನೆಯೊಂದನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ಭಾವಪರವಶರನ್ನಾಗಿ ಮಾಡಿದ್ದಾರೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ತಮ್ಮ ತಂದೆಯ ಅಂತಿಮ ಇಚ್ಛೆಯಂತೆ ಅವರು ಗೌರವಯುತವಾಗಿ ಕೊನೆಯುಸಿರೆಳೆಯಲು ತಾವೇ ನೆರವಾಗಿದ್ದಾಗಿ ರಾಮ್ ಕಪೂರ್ ಬಹಿರಂಗಪಡಿಸಿದ್ದಾರೆ.
18 ಬಾರಿ ಕಿಮೊಥೆರಪಿ, ಮರುಕಳಿಸಿದ ಕ್ಯಾನ್ಸರ್
ತಮ್ಮ ತಂದೆಯ ಅನಾರೋಗ್ಯದ ದಿನಗಳನ್ನು ನೆನಪಿಸಿಕೊಂಡ ರಾಮ್ ಕಪೂರ್, "ನನ್ನ ತಂದೆಗೆ 63ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಕಾಣಿಸಿಕೊಂಡಾಗ 18 ಬಾರಿ ಕಿಮೊಥೆರಪಿ ಚಿಕಿತ್ಸೆ ಪಡೆದು ಗೆದ್ದು ಬಂದಿದ್ದರು. ಆದರೆ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ 73ನೇ ವಯಸ್ಸಿನಲ್ಲಿ ಕ್ಯಾನ್ಸರ್ ಮತ್ತೆ ಮರುಕಳಿಸಿತು. ಆ ಸಮಯದಲ್ಲಿ ಅವರು ಮತ್ತೆ ಚಿಕಿತ್ಸೆ ಪಡೆದು ನರಳಲು ಇಷ್ಟಪಡಲಿಲ್ಲ" ಎಂದು ತಿಳಿಸಿದರು.
'ನನ್ನ ಜೊತೆ ಇರುತ್ತೀಯಾ?' ಎಂದು ಕೇಳಿದ್ದ ತಂದೆ
ತಂದೆಯ ಕೊನೆಯ ದಿನಗಳ ಬಗ್ಗೆ ಮಾತನಾಡಿದ ನಟ ರಾಮ್ ಕಪೂರ್, "ಕೋವಿಡ್ ಸಮಯದಲ್ಲಿ ನನ್ನ ತಂದೆ ನನಗೂ ಮತ್ತು ನನ್ನ ಪತ್ನಿ ಗೌತಮಿಗೂ ಕರೆ ಮಾಡಿ, ಮತ್ತೆ ಚಿಕಿತ್ಸೆ ಪಡೆಯುವುದಿಲ್ಲ ಎಂದರು. ಅವರಿಗೆ ಸಾವಿನ ಭಯವಿರಲಿಲ್ಲ, ಆದರೆ ಕೊನೆಯ ಕ್ಷಣದಲ್ಲಿ ಒಂಟಿಯಾಗಲು ಭಯವಿತ್ತು. 'ನಾನು ಸಾಯುವಾಗ ನನ್ನ ಜೊತೆ ಇರುತ್ತೀಯಾ? ನನಗೆ ಸಹಾಯ ಮಾಡುತ್ತೀಯಾ? ನೀನು ಇರದಿದ್ದರೆ ನಾನೇ ಒಂಟಿಯಾಗಿ ಮಾಡಿಕೊಳ್ಳುತ್ತೇನೆ' ಎಂದು ನೇರವಾಗಿ ಕೇಳಿದರು. ಅವರ ಇಷ್ಟದಂತೆ ನಡೆದುಕೊಳ್ಳುವುದು ಬಿಟ್ಟು ನನಗೆ ಬೇರೆ ದಾರಿಯೇ ಇರಲಿಲ್ಲ" ಎಂದಿದ್ದಾರೆ.
ಅವರನ್ನು ಐಸಿಯುಗೆ (ICU) ದಾಖಲಿಸಿದ್ದರೂ ಅಲ್ಲಿ ಯಾವುದೇ ಚಿಕಿತ್ಸೆ ನಡೆಯುತ್ತಿರಲಿಲ್ಲ ಎಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ತಂದೆಯ ಕೈ ಹಿಡಿದು ಅವರು ಪ್ರಶಾಂತವಾಗಿ ಕಣ್ಣುಮುಚ್ಚಲು ರಾಮ್ ಕಪೂರ್ ಸಾಥ್ ನೀಡಿದ್ದರು. ತಮ್ಮ ಅಂತ್ಯಕ್ರಿಯೆಯಲ್ಲಿ ಯಾರೂ ಅಳಬಾರದು ಎಂಬುದು ರಾಮ್ ಕಪೂರ್ ಅವರ ತಂದೆಯ ಬಯಕೆಯಾಗಿತ್ತು.
5 ವರ್ಷಗಳಿಂದ ಮಾತನಾಡದ ತಾಯಿ ಮತ್ತು ಸಹೋದರಿ
ಈ ಘಟನೆಯು ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದ ರಾಮ್ ಕಪೂರ್, "ಈ ವಿಷಯ ತಿಳಿದ ನನ್ನ ತಾಯಿ ಮತ್ತು ಸಹೋದರಿ ಕಳೆದ 5 ವರ್ಷಗಳಿಂದ ನನ್ನೊಂದಿಗೆ ಮಾತನಾಡುತ್ತಿಲ್ಲ. ಆದರೆ ಒಬ್ಬ ಮಗನಾಗಿ ತಂದೆಗೆ ನೀಡಬಹುದಾದ ಅತ್ಯುತ್ತಮ ಗೌರವ ಇದಾಗಿತ್ತು ಎಂದು ಭಾವಿಸುತ್ತೇನೆ. ಪ್ರತಿಯೊಬ್ಬರೂ ರಾಜನಂತೆ ಜೀವಿಸುತ್ತಾರೆ, ಆದರೆ ನನ್ನ ತಂದೆ ನಿಜಕ್ಕೂ ರಾಜನಂತೆಯೇ ಮರಣಹೊಂದಿದರು" ಎಂದು ಭಾವುಕರಾದರು ರಾಮ್ ಕಪೂರ್.
ಮರಣವನ್ನು ಇಷ್ಟು ಹತ್ತಿರದಿಂದ ಕಂಡ ಮೇಲೆಯೇ ತಮಗೆ ಜೀವನದ ನಿಜವಾದ ಅರ್ಥ ತಿಳಿಯಿತು ಮತ್ತು ಈಗ ತಮಗೆ ಯಾವುದೇ ಭಯವಿಲ್ಲ ಎಂದು ರಾಮ್ ಕಪೂರ್ ಹೇಳಿದ್ದಾರೆ.