"ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ" ಎಂಬುದನ್ನು ಖ್ಯಾತ ನಟ ಜಗ್ಗೇಶ್ ಅವರ ಪತ್ನಿ ಡಾ. ಪರಿಮಳ ಜಗ್ಗೇಶ್ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಕನ್ನಡಿಗರ ಹೆಮ್ಮೆಯ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ 'ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ' ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ "3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್ಶಿಪ್ - 2026" ರಲ್ಲಿ ಪರಿಮಳ ಅವರು ಪಾಲ್ಗೊಂಡಿದ್ದರು. ಇದರಲ್ಲಿ ಅವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
28 ವರ್ಷಗಳಿಂದ ಜಗ್ಗೇಶ್ ಕಾರು ಚಾಲಕನಾಗಿದ್ದ ಪದ್ಮನಾಭ ನಿಧನ; ʻನಶ್ವರ ಈ ಜಗತ್ತು..ʼ ಎಂದು ಕಂಬನಿಮಿಡಿದ ʻನವರಸ ನಾಯಕʼ
ಜಗ್ಗೇಶ್ ಏನಂದ್ರು?
ಪತ್ನಿಯ ಸಾಧನೆ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್ ಅವರು, "ಪರಿಮಳ ನಾನು ಬದುಕಲ್ಲಿ ಆಯ್ಕೆ ಮಾಡಿಕೊಂಡ ಶ್ರೇಷ್ಠ ವ್ಯಕ್ತಿತ್ವದ ಛಲಗಾತಿ. ಆಕೆ ಚಿಂತನೆ ಸದಾ ಆಶಾದಾಯಕ. ಎಸ್ಎಸ್ಎಲ್ಸಿ ಓದುವಾಗ ನಮ್ಮ ಮದುವೆಯಾಯಿತು. ಆಗ ನಾನು ತಂದೆಯಿಂದ ದೂರವಾಗಿ ಸಾಮಾನ್ಯರಲ್ಲಿ ಸಾಮಾನ್ಯ ಜೀವಿ, ಒಂದು ದಿನದ ಸಣ್ಣ ಪಾತ್ರಕ್ಕೆ ಅಲೆಯುತ್ತಿದ್ದ ದಿನಗಳು.. ಆಗ ಅವಳ ಬೇಡಿಕೆ, ದಯವಿಟ್ಟು ನನ್ನ ಓದಿಸು ಎಂದು, ಅದಕ್ಕೆ ನಾನು ಒಪ್ಪಿ ಈಸ್ಟ್ವೆಸ್ಟ್ ಕಾಲೇಜಿಗೆ ಸೇರಿಸಿದೆ" ಎಂದು ಬರೆದುಕೊಂಡಿದ್ದಾರೆ.
ಎಲ್ರಿಗಿಂತ ಮುಂಚೆ ಗಿಲ್ಲಿ ನಟನ ಬಗ್ಗೆ ಭವಿಷ್ಯ ನುಡಿದಿದ್ದ ಜಗ್ಗೇಶ್; ಗೆದ್ದ ಪಳಾರ್ಗೆ ಸನ್ಮಾನಿಸಿದ ʻನವರಸ ನಾಯಕʼ
"ಪಿಯುಸಿಯಲ್ಲಿ ಪ್ರಥಮ ರ್ಯಾಂಕ್ ನಂತರ ಬಿಎಂಎಸ್ ಕಾಲೇಜಿನಲ್ಲಿ ಬಿಇ, ನಂತರ ಕಂಪ್ಯೂಟರ್ ಡಿಪ್ಲೋಮಾ, ನಂತರ ಮೆಡಿಕಲ್ ಟ್ರಾನ್ಸ್ಕ್ರಿಪ್ಟಿವ್ನ್ ನಂತರ ಡಯಟ್ ಕಂಪನಿ. ಪ್ರಧಾನಿ ಮೋದಿ ಅವರ ಉತ್ತೇಜನ ಪ್ರಯುಕ್ತ ಶ್ರೀ ಅನ್ನ ಆಹಾರ ಪದ್ಧತಿಯ ಬಗ್ಗೆ ಪುಸ್ತಕ ಬರವಣಿಗೆ. ಇತ್ತೀಚೆಗೆ ಅಂದರೆ 57ನೇ ವಯಸ್ಸಿನಲ್ಲಿ ಹೊಸ ಪ್ರಯತ್ನ. ಶೂಟಿಂಗ್ ಅಕಾಡೆಮಿ ಸೇರ್ಪಡೆಗೊಂಡು ಇಂದು ರಾಜ್ಯ ಮಟ್ಟದ ಶೂಟಿಂಗ್ ನಲ್ಲಿ ಬೆಳ್ಳಿ ಪದಕ" ಎಂದು ಜಗ್ಗೇಶ್ ಹೇಳಿದ್ದಾರೆ.
"ಇದನ್ನ ಉಲ್ಲೇಖಿಸಲು ಕಾರಣ, ಮನುಷ್ಯರಾಗಿ ನಾವು ಹುಟ್ಟಿದ್ದೇ ಜಗತ್ತು ಗೆಲ್ಲಲು ವಿನಃ ಏನು ಆಗದು ನನ್ನಿಂದ ಎಂದು ಕಾರಣ ಹೇಳಿ ಆಯುಷ್ಯ ಮುಗಿಸಿ ಹೋಗಲು ಅಲ್ಲಾ. ಪರಿಮಳನ ಪ್ರತಿಭೆ ಪ್ರಯತ್ನದಂತೆ ನನ್ನ ಎಲ್ಲಾ ನಲ್ಮೆಯ ಹೆಣ್ಣುಕುಲ ಯತ್ನಿಸಿ, ನೀವು ಹೆಣ್ಣಾಗಿ ಹುಟ್ಟಿದರೆ ಅದು ನಿಮ್ಮ ಅದೃಷ್ಟ ಹಾಗು ದೇವರ ಕೃಪೆಯಿಂದ ಎಂದು ಸಂತೋಷಪಡಿ. ಗಂಡ ಮಕ್ಕಳು ಸಂಸಾರ ಸರಿಯಾಗಿ ತೂಗಿಸಿ ಜೊತೆ ಜೊತೆಗೆ ಸಾಧಕರಾಗಿ ಎಂಬುದು ನನ್ನ ಹಾರೈಕೆ ಆಶಯ. ಗಂಡನಾಗಿ ಮಡದಿ ಪರಿಮಳನಿಗೆ ಹೃದಯಪೂರ್ವಕ ಶುಭಕಾಮನೆಗಳು" ಎಂದು ಜಗ್ಗೇಶ್ ಹೇಳಿದ್ದಾರೆ.
ಜಗ್ಗೇಶ್ ಇನ್ಸ್ಟಾಗ್ರಾಮ್ ಪೋಸ್ಟ್
ಮಧುಮೇಹ ಮೆಟ್ಟಿ ನಿಂತರು
1994ರಿಂದಲೂ ಮಧುಮೇಹದಿಂದ ಬಳಲುತ್ತಿರುವ ಡಾ. ಪರಿಮಳ ಅವರಿಗೆ ಕ್ರೀಡಾ ಲೋಕಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್ ಎನ್ನುವುದು ಅತ್ಯಂತ ಏಕಾಗ್ರತೆ ಮತ್ತು ದೈಹಿಕ ಸ್ಥಿರತೆಯನ್ನು ಬೇಡುವ ಕ್ರೀಡೆ. ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ರಿಕವರಿ ಪ್ಲಾನ್ ರೂಪಿಸಿಕೊಂಡು ಅಭ್ಯಾಸ ನಡೆಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಶೂಟಿಂಗ್ ರೇಂಜ್ನಲ್ಲಿ ಅಭ್ಯಾಸ ನಡೆಸುತ್ತಿದ್ದರು.
"ಟಾರ್ಗೆಟ್ ಶೂಟಿಂಗ್ ನನಗೆ ಕೇವಲ ಗುರಿ ಹೊಡೆಯುವುದನ್ನು ಮಾತ್ರವಲ್ಲ, ಒತ್ತಡದ ಸಮಯದಲ್ಲಿ ಮನಸ್ಸನ್ನು ಶಾಂತವಾಗಿಡುವುದು ಮತ್ತು ಶಿಸ್ತಿನ ಬದುಕು ಅಳವಡಿಸಿಕೊಳ್ಳುವುದನ್ನು ಕಲಿಸಿದೆ" ಎನ್ನುತ್ತಾರೆ ಡಾ. ಪರಿಮಳ ಜಗ್ಗೇಶ್.