ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡೋದ್ಯಾರು? ಕುತೂಹಲ ಮೂಡಿಸಿದ‌ ನಿರ್ದೇಶಕ ಪ್ರಶಾಂತ್ ವರ್ಮಾ ಪ್ಲ್ಯಾನ್!

'ಹನು-ಮಾನ್' ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ನಟಿಸುತ್ತಿದ್ದಾರೆ. ಈ ಪೌರಾಣಿಕ ಸಿನಿಮಾದಲ್ಲಿ ಅತ್ಯಂತ ಮಹತ್ವದ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಚಿತ್ರದಲ್ಲಿ ರಾಮನ ಪಾತ್ರ ಮಾಡೋದ್ಯಾರು?

-

Avinash GR
Avinash GR Aug 15, 2026 1:20 PM

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ 'ಹನು-ಮಾನ್' ಚಿತ್ರದ ನಂತರ, ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸಿನಿಮಾಟಿಕ್ ಯೂನಿವರ್ಸ್‌ನ (PVCU) ಬಹುನಿರೀಕ್ಷಿತ ಸೀಕ್ವೆಲ್ 'ಜೈ ಹನುಮಾನ್' ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಮೊದಲ ಭಾಗವು ಗ್ರಾಮೀಣ ಹಿನ್ನೆಲೆಯ ಸೂಪರ್‌ಹೀರೋ ಕಥೆಯಾಗಿದ್ದರೆ, ಈ ಸೀಕ್ವೆಲ್ ಸಂಪೂರ್ಣವಾಗಿ ಪೌರಾಣಿಕ ಮತ್ತು ದೈವಿಕ ಅಂಶಗಳೊಂದಿಗೆ ಮೂಡಿಬರಲಿದೆ. 'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಇದರಲ್ಲಿ ಹನುಮಂತನ ಪಾತ್ರ ನಿರ್ವಹಿಸುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಆದರೆ, ಈ ಚಿತ್ರದಲ್ಲಿ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬುದು ಸದ್ಯಕ್ಕೆ ಕುತೂಹಲಕ್ಕೆ ಕಾರಣವಾಗಿದೆ.

ರಿಷಬ್ ಶೆಟ್ಟಿ ಮೇಕ್‌ಓವರ್

ಈ ಪೌರಾಣಿಕ ಆ್ಯಕ್ಷನ್ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಸಂಪೂರ್ಣ ವಿಭಿನ್ನ ಮೇಕ್‌ಓವರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ ಫಸ್ಟ್ ಲುಕ್ ಪೋಸ್ಟರ್ ಭಾರೀ ಗಮನ ಸೆಳೆದಿದೆ. ಈ ಚಿತ್ರದಲ್ಲಿ ನಟಿ ವಾಮಿಕಾ ಗಬ್ಬಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಜೊತೆಗೆ ತೇಜ ಸಜ್ಜ ಮತ್ತು ರಾಣಾ ದಗ್ಗುಬಾಟಿ ಮುಂತಾದ ನಟರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಶ್ರೀರಾಮನ ಪಾತ್ರ ಹಾಗೂ ಟಾಲಿವುಡ್‌ನಲ್ಲಿ ಚರ್ಚೆ

'ಜೈ ಹನುಮಾನ್' ಸಿನಿಮಾದಲ್ಲಿ ಕಥೆಯಲ್ಲಿ ಹನುಮಂತನ ಪಾತ್ರದಷ್ಟೇ ಶ್ರೀರಾಮನ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಈ ಪಾತ್ರವನ್ನು ತೆರೆಯ ಮೇಲೆ ಅತ್ಯಂತ ಪ್ರಭಾವಶಾಲಿಯಾಗಿ ತೋರಿಸಲು ನಿರ್ದೇಶಕ ಪ್ರಶಾಂತ್ ವರ್ಮಾ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಸಿನಿಮಾದ ತೂಕವನ್ನು ಹೆಚ್ಚಿಸಲು ತೆಲುಗು ಚಿತ್ರರಂಗದ ಸ್ಟಾರ್‌ ನಟರೊಬ್ಬರಿಂದ ಆ ಪಾತ್ರವನ್ನು ಮಾಡಿಸಲು ನಿರ್ದೇಶಕರು ಆಲೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಡಿಸಿ’ ಸೂಪರ್‌ ಹಿಟ್‌ ಬೆನ್ನಲ್ಲೇ ರಿಷಬ್‌ ಶೆಟ್ಟಿ ನಟನೆಯ ‘ಜೈ ಹನುಮಾನ್‌’ ಸಿನಿಮಾಗೆ ನಾಯಕಿಯಾದ ವಾಮಿಕಾ ಗಬ್ಬಿ!

ನಿರ್ದೇಶಕರ ಮುಂದಿರುವ ಇತರ ಆಯ್ಕೆಗಳು

ಒಂದು ವೇಳೆ ಟಾಲಿವುಡ್ ನಟರು ಒಪ್ಪದಿದ್ದರೆ, ಪ್ರಶಾಂತ್ ವರ್ಮಾ ಅವರ ಮುಂದೆ ಇನ್ನೆರಡು ಆಯ್ಕೆಗಳಿವೆ ಎನ್ನಲಾಗಿದೆ. ರಿಷಬ್ ಶೆಟ್ಟಿ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿರುವ ಉತ್ತಮ ಬಾಂಧವ್ಯ ಇರುವ ಹಿನ್ನೆಲೆಯಲ್ಲಿ, ಕನ್ನಡ ಚಿತ್ರರಂಗದ ಪ್ರಮುಖ ಸ್ಟಾರ್ ನಟರೊಬ್ಬರನ್ನು ಈ ಪಾತ್ರಕ್ಕೆ ಒಪ್ಪಿಸುವುದು. ನಟರ ಆಯ್ಕೆ ಅಂತಿಮವಾಗದಿದ್ದರೆ, ಎಐ (AI) ಹಾಗೂ ಆಧುನಿಕ ವಿಶುವಲ್ ಎಫೆಕ್ಟ್ಸ್ ತಂತ್ರಜ್ಞಾನವನ್ನು ಬಳಸಿ ಶ್ರೀರಾಮನ ರೂಪವನ್ನು ಡಿಜಿಟಲ್ ಆಗಿ ವಿನ್ಯಾಸಗೊಳಿಸುವುದು ಪ್ರಶಾಂತ್‌ ತಲೆಯಲ್ಲಿರುವ ಯೋಜನೆ! ಶ್ರೀರಾಮನ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಚಿತ್ರತಂಡದಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.